ತೈಲ ದರ ಏರಿಕೆ: ಕೇಂದ್ರ ಸರ್ಕಾರದ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ
ಮೈಸೂರು, ಜೂನ್ 19: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಕೆಳ ವರ್ಗದವರು, ಮಧ್ಯಮವರ್ಗವರಿಗೆ, ರೈತರಿಗೆ ತೊಂದರೆಯಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
Recommended Video
ಇಂದು ಮೈಸೂರಿನಲ್ಲಿ ಪೆಟ್ರೋಲ್ ದರ ಏರಿಕೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಚ್ಚಾ ತೈಲ ದರ ಇಳಿಕೆ ನೋಡಿದರೆ ಅತೀ ಕಡಿಮೆ ದರದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಬೇಕಿತ್ತು. ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಒಂದು ಬ್ಯಾರಲ್ ಗೆ ಕಚ್ಚಾ ತೈಲ ದರ 120 ರಿಂದ 150 ಡಾಲರ್ ಗಳಿಗೆ ಏರಿಕೆ ಆಗಿತ್ತು. ಆಗಲೂ ಪೆಟ್ರೋಲ್ ದರ ಲೀಟರಿಗೆ ೭೫ ರುಪಾಯಿಗಳಿತ್ತು. ಆದರೆ ಈಗಿನ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಯಡಿಯೂರಪ್ಪಗೆ ಧಮ್ ಇಲ್ಲ: ಸಿಡಿದ ಸಿದ್ಧರಾಮಯ್ಯ
ದೇಶದಲ್ಲಿ ಉದ್ಯೋಗ ಕಳೆದುಕೊಂಡವರು 62% ಇದ್ದಾರೆ. ನಿರುದ್ಯೋಗ ಸಮಸ್ಯೆ ಬೆಳೆಯುತ್ತಿದೆ. ಕೇಂದ್ರ ಸರ್ಕಾರ ಆರ್ಥಿಕತೆಯನ್ನು ಸುಧಾರಿಸುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಳೋಕೆ ಧಮ್ಮಿಲ್ಲ, ಯಡಿಯುರಪ್ಪನವರು ನರೇಂದ್ರ ಮೋದಿಯವರ ಮುಂದೆ ಅಸಹಾಯಕರು ಎಂದರು.
ವಿದ್ಯುತ್ ಶಕ್ತಿ ಬಿಲ್ ಜಾಸ್ತಿ ಆಗ್ತಿದೆ
ಕೋಟ್ಯಂತರ ಜನ ಊಟವಿಲ್ಲದೆ, ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಜನರ ಬದುಕು ದುಸ್ತರವಾಗಿದೆ. ಅವರಿಗೆ ಊಟ ಕೊಡುವ ಕೆಲಸ ಮಾಡಿಲ್ಲ, ಕೆಲಸ ಕೊಡಿಸುವ ಗೋಜಿಗೆ ಹೋಗಿಲ್ಲ, ಶಕ್ತಿತುಂಬುವ ಕೆಲಸ ಮಾಡಿಲ್ಲ. ಬರೀ ಜಾಗಟೆ ಬಾರಿಸುವುದು, ದೀಪ ಹಚ್ಚೋದು, ಚಪ್ಪಾಳೆ ತಟ್ಟೊದು ಮಾಡ್ತಿದೆ. ವಿದ್ಯುತ್ ಶಕ್ತಿ ಬಿಲ್ ಜಾಸ್ತಿ ಆಗ್ತಿದೆ. ಮೊದಲು ರೈತರಿಗೆ ವಿದ್ಯುತ್ ಸಬ್ಸಿಡಿ ಕೊಡ್ತಿದ್ವಿ, ಆದರೆ ಈಗ ವಿದ್ಯುತ್ ಬಿಲ್ ಯದ್ವಾತದ್ವಾ ಜಾಸ್ತಿ ಆಗ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಭೂ ಸ್ವಾಧೀನ ಕಾಯಿದೆ ತಿದ್ದುಪಡಿ ಮರಣ ಶಾಸನವಾಗಿದೆ. ವಿಧಾನಮಂಡಲ ಅಧಿವೇಶನ ಕರೆಯುವಂತೆ ಹೇಳಿದರೂ ಕೊರೊನಾ ವೈರಸ್ ನೆಪದಲ್ಲಿ ಮುಂದೂಡುತ್ತಿದ್ದಾರೆ. ಸೆಕ್ಷನ್ 144 ರ ನೆಪ ಮುಂದಿಟ್ಟುಕೊಂಡು ಹಲವು ಕಾಯಿದೆಗಳ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತಂದು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಉಳ್ಳವನೇ ಭೂಮಿ ಒಡೆಯ ಮಾಡಲು ಹೊರಟಿದ್ದಾರೆ
ಇಂದಿರಾ ಕ್ಯಾಂಟೀನ್ ಇಂತಹ ಸಮಯದಲ್ಲಿ ಉಪಯೋಗಕ್ಕೆ ಬರ್ತಿತ್ತು. ಬಡವರು, ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿ ಅಂತ ಮಾಡಿದ್ದು, ಸಿದ್ದರಾಮಯ್ಯ ಮಾಡಿದ್ದು ಅಂತ ನಿಲ್ಲಿಸಬೇಕೆಂದು ಹೊರಟಿದ್ದಾರೆ. ಭೂ ಸುಧಾರಣೆ ಕಾಯ್ದೆಗೆ 1961 ಕಾಂಗ್ರೆಸ್ ಬಹಳ ಹೋರಾಟ ಮಾಡಿತ್ತು. ತಿದ್ದುಪಡಿ ಮಾಡಿ ಉಳುವವನೆ ಭೂ ಒಡೆಯ ಅಂತ ಮಾಡಿತ್ತು. ಉಳುವವನಿಗೆ ರಕ್ಷಣೆ ನೀಡಬೇಕು, ಈಗ ತಿದ್ದುಪಡಿ ಮಾಡಿ ರದ್ದು ಮಾಡಿ, ಉಳ್ಳವನೇ ಭೂಮಿ ಒಡೆಯ ಮಾಡಲು ಹೊರಟಿದ್ದಾರೆ. ಯಾರು ಬೇಕಾದರೂ, ಎಷ್ಟು ಬೇಕಾದರೂ ಜಮೀನು ತೆಗೆದುಕೊಳ್ಳಬಹುದು. ಕೃಷಿಕರಿಗೆ ಮಾತ್ರ ಜಮೀನು ತಗೊಳ್ಳಬಹುದಿತ್ತು. ಇದು ಕರಾಳ ಶಾಸನ ಎಂದು ವಾಗ್ದಾಳಿ ನಡೆಸಿದರು.
ವಿಶ್ವನಾಥ್ ಪೆದ್ದನೋ, ಜಾಣನೋ ಗೊತ್ತಾಗುತ್ತಿಲ್ಲ
ಪ್ರಧಾನಿ ಮೋದಿಯ ತಾಳಕ್ಕೆ ಸಿಎಂ ಯಡಿಯೂರಪ್ಪ ಒಬ್ಬರೇ ಕುಣಿಯುತ್ತಿಲ್ಲ. ಇಡೀ ದೇಶದ ಜನರನ್ನು ಕುಣಿಸುತ್ತಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಮಾಡಲಾಗಲಿಲ್ಲ. ಆದರೆ ಬರೀ ಜಾಗಟೆ, ಚಪ್ಪಾಳೆ, ದೀಪ ಹಚ್ಚುವಂತೆ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಪೆದ್ದನೋ, ಜಾಣನೋ ಗೊತ್ತಾಗುತ್ತಿಲ್ಲ. ಪರಿಷತ್ ಟಿಕೆಟ್ ಕೈತಪ್ಪಲು ನಾನು ಕಾರಣ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ನಲ್ಲಿದ್ದೇನೆ. ಅವರು ಬಿಜೆಪಿಯಲ್ಲಿದ್ದಾರೆ. ನಾನು ಹೇಗೆ ಟಿಕೆಟ್ ತಪ್ಪಿಸಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.