ಬಿಜೆಪಿ ಪರಿವರ್ತನಾ ಯಾತ್ರೆ ಬಗ್ಗೆ ಶ್ರೀನಿವಾಸ್ ಪ್ರಸಾದ್ ಹೇಳಿದ್ದಿಷ್ಟು
ಮೈಸೂರು, ನವೆಂಬರ್ 4 : ಬಿಜೆಪಿಯ ಪರಿವರ್ತನಾ ಜಾಥಾಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ. ಸ್ವತಃ ಬಿಜೆಪಿ ಮುಖಂಡರು ನನಗೆ ಜಾಥಾಗೆ ಆಮಂತ್ರಣ ನೀಡಿದ್ದರು ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಲ್ಲಿ ಎಂದೂ ಹತಾಶನಾಗಿಲ್ಲ. ಸಿದ್ದರಾಮಯ್ಯ ಅವರಿಗೆ ದುರಹಂಕಾರವಿದೆ. ಅವರು ರಾಜಕೀಯ ಜೀವನದಲ್ಲಿ ಹತಾಶರಾದವರು. ನಂಜನಗೂಡು ಉಪ ಚುನಾವಣೆ ಆದ ಮೇಲೆ ಸಿದ್ದರಾಮಯ್ಯನವರು ಬ್ರಹ್ಮರಾಕ್ಷಸ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಎದ್ದರೆ ಕಾಲು ಹಿಡಿಯುವುದು, ಬಗ್ಗಿದರೆ ಜುಟ್ಟು ಹಿಡಿಯುವುದರಲ್ಲಿ ಸಿದ್ದರಾಮಯ್ಯ ಬುದ್ಧಿವಂತರು. ಒಳಸಂಚು ರೂಪಿಸಿ ಉಪಚುನಾವಣೆಯಲ್ಲಿ ನನ್ನನ್ನು ಸೋಲಿಸಿದರು. 1980ರ ಚುನಾವಣೆಯಲ್ಲಿ ನಾನೂ ಸಿದ್ದರಾಮಯ್ಯ ಅವರ ವಿರುದ್ದ ಸ್ಪರ್ಧಿಸಿದ್ದೆ. ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ನಿಲ್ಲುವ ತೆವಲು. ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಉಡಾಫೆ ಮನುಷ್ಯ. ನನಗೆ ಸ್ವಾಭಿಮಾನವಿದೆ, ಅಹಂಕಾರವಿಲ್ಲ. ಆದರೆ ಅವರಿಗೆ ದುರಭಿಮಾನ, ಅಹಂಕಾರ ಎರಡೂ ಇದೆ. ಸಿಎಂ ಮಾಂಸಾಹಾರ ಪ್ರಿಯರು. ಮುಂದೆ 'ಅಯ್ಯ ಮಾಂಸಾಹಾರಿ ಕ್ಯಾಂಟೀನ್' ಬರಲಿದೆ ಎಂದು ವ್ಯಂಗ್ಯವಾಡಿದರು.
ಎಚ್.ಆಂಜನೇಯ ಸಮಾಜ ಕಲ್ಯಾಣ ಸೇವಾ ಇಲಾಖೆಯಲ್ಲಿದ್ದಾರೋ ಅಥವಾ ಸಿಎಂ ಸೇವಾ ಇಲಾಖೆಯಲ್ಲಿದ್ದಾರೋ ಗೊತ್ತಿಲ್ಲ. ಎಚ್.ಆಂಜನೇಯ ಅಲ್ಲ ಅವರು ಹುಚ್ಚು ಆಂಜನೇಯ ಎಂದು ಟೀಕಿಸಿದರು. ಕಾಂಗ್ರೆಸ್ ನವರ ಅಟ್ಟಹಾಸ ಮಿತಿ ಮೀರಿದೆ ಎಂದರು.












Click it and Unblock the Notifications