ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಆಸ್ಪತ್ರೆಗೆ ದಾಖಲು
ಮೈಸೂರು, ಅಕ್ಟೋಬರ್ 19: ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೇ ಆಗಸ್ಟ್ 29ಕ್ಕೆ ಕಲಬುರಗಿಯಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ನಂತರ ಸೆಪ್ಟೆಂಬರ್ ತಿಂಗಳು ಕಳೆಯುವುದರೊಳಗೆ ಶರತ್ ಅವರನ್ನು ಮತ್ತೆ ವರ್ಗಾವಣೆ ಮಾಡಿ, ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ತಿಂಗಳು ಕಳೆಯುವುದರೊಳಗೆ ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಶರತ್ ಅವರು ಸಿಎಟಿ ಮೊರೆ ಹೋಗಿದ್ದರು. ಅರ್ಜಿ ಕೈಗೆತ್ತುಕೊಂಡಿದ್ದ ಸಿಎಟಿ, ವಿಚಾರಣೆಯನ್ನು ಅ.7ರಂದು ನಿಗದಿಗೊಳಿಸಿ ಅ.14ಕ್ಕೆ ವಿಚಾರಣೆ ನಡೆಸಿತ್ತು. ತಾಂತ್ರಿಕ ಅಡಚಣೆಯಿಂದ ಅ.16ಕ್ಕೆ ಮತ್ತೆ ವಿಚಾರಣೆ ಮುಂದೂಡಿತ್ತು.
ಅ.16ರಂದು ವಿಚಾರಣೆ ಕುರಿತಂತೆ ಆನ್ ಲೈನ್ ನಲ್ಲೇ ವಾದ ಪ್ರತಿವಾದವನ್ನು ಸಿಎಟಿ ಆಲಿಸಿತ್ತು. ಶರತ್ ಅವರನ್ನು ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಎರಡು ವರ್ಷಗಳ ಕಾಲ ಕಡ್ಡಾಯ ಸೇವೆಯಲ್ಲಿ ಇರಬೇಕೆಂಬ ಸರ್ಕಾರದ ನಿಯಮವನ್ನು ಸರ್ಕಾರವೇ ಗಾಳಿಗೆ ತೂರಿದೆ ಎಂದು ಶರತ್ ಪರ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಆದರೆ ಪ್ರತಿವಾದ ಮಂಡಿಸಲು ಎಜಿ ಕಾಲಾವಕಾಶ ಕೇಳಿದ ಕಾರಣ ಸಿಎಟಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿತ್ತು.

ಈ ನಡುವೆ ತಮ್ಮ ವರ್ಗಾವಣೆ ವಿಚಾರವಾಗಿ ಶರತ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೈಸೂರಿನ ತಮ್ಮ ನಿವಾಸದಲ್ಲಿ ಅಸ್ವಸ್ಥಗೊಂಡಿದ್ದರಿಂದ ಅವರನ್ನು ತಕ್ಷಣ ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications