ತೆರೆಯದ ಚಾಮುಂಡಿ ಪಾದದ ದ್ವಾರ; ನುಸುಳಿ ಮೆಟ್ಟಿಲೇರುವ ಭಕ್ತರು!
ಮೈಸೂರು, ಜುಲೈ 13: ಕೋವಿಡ್- 19 ಅನ್ಲಾಕ್ 3.0 ಜಾರಿಯಾಗಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ, ಪಾದದ ಬಳಿ ದ್ವಾರವನ್ನು ತೆರೆಯದ ಕಾರಣ ಭಕ್ತರು ಬೇಲಿ ಬಳಿ ನುಸುಳಿಕೊಂಡು ಮೆಟ್ಟಿಲೇರುತ್ತಿರುವ ದೃಶ್ಯ ಕಂಡುಬರುತ್ತಿದೆ.
ಕೋವಿಡ್- 19 ಲಾಕ್ಡೌನ್ ಹಿನ್ನಲೆಯಲ್ಲಿ ಎರಡು ತಿಂಗಳ ಕಾಲ ಮೆಟ್ಟಿಲೇರುವುದನ್ನು ನಿಷೇಧಿಸಿ ದ್ವಾರವನ್ನು ಮುಚ್ಚಲಾಗಿತ್ತು. ಆ ನಂತರ ಅನ್ಲಾಕ್ ಜಾರಿಗೆ ಬಂದಿದ್ದರೂ ದ್ವಾರವನ್ನು ಮಾತ್ರ ತೆರೆದಿರಲಿಲ್ಲ. ಈ ನಡುವೆ ಆಷಾಢ ಅಮಾವಾಸ್ಯೆ ಮತ್ತು ವಾರಾಂತ್ಯದ ಕಾರಣ ಮೂರು ದಿನಗಳ ಕಾಲ ಚಾಮುಂಡಿ ಬೆಟ್ಟದ ಪಾದದ ಬಳಿ ಬ್ಯಾರಿಕೇಡ್ ಹಾಕಿ, ಪೊಲೀಸರನ್ನು ನಿಯೋಜಿಸಿ ಸಾರ್ವಜನಿಕರು ತೆರಳದಂತೆ ನೋಡಿಕೊಳ್ಳಲಾಗಿತ್ತು.

ಎರಡೂವರೆ ತಿಂಗಳಿನಿಂದ ಮುಚ್ಚಿರುವ ದ್ವಾರ
ಕೋವಿಡ್ ಆರಂಭವಾದ ಬಳಿಕ ಆಷಾಢದಲ್ಲಿ ಪ್ರತಿ ಶುಕ್ರವಾರ ಮತ್ತು ವಾರಾಂತ್ಯದ ಶನಿವಾರ, ಭಾನುವಾರ ಹೀಗೆ ಮೂರು ದಿನಗಳ ಕಾಲ ಬೆಟ್ಟಕ್ಕೆ ಮೆಟ್ಟಿಲೇರಿ ಹೋಗುವುದನ್ನು ನಿಷೇಧಿಸಲಾಗಿದೆ. ಇದು ಕಳೆದ ಬಾರಿಯೂ ಜಾರಿಯಲ್ಲಿತ್ತು. ಆದರೆ ಉಳಿದ ದಿನಗಳಲ್ಲಿ ಮೆಟ್ಟಿಲೇರಲು ದ್ವಾರ ತೆರೆದು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ಲಾಕ್ಡೌನ್ ವೇಳೆ ಹಾಕಿದ ದ್ವಾರವನ್ನು ಇದುವರೆಗೆ ತೆರೆಯದ ಕಾರಣ ಭಕ್ತರು ಸೇರಿದಂತೆ ಬೆಳಿಗ್ಗೆ ಬೆಟ್ಟವೇರಿರುವ ನೂರಾರು ಮಂದಿ ದ್ವಾರದ ಬಳಿಯ ಬೇಲಿಯನ್ನು ನುಸುಳಿಕೊಂಡು ಮೆಟ್ಟಿಲೇರುತ್ತಿದ್ದಾರೆ.

ಮೆಟ್ಟಿಲಿಗೆ ಪೂಜೆ ಸಲ್ಲಿಸುವ ಭಕ್ತರು
ಆಷಾಢ ಶುಕ್ರವಾರದಂದು ಪ್ರವೇಶವಿಲ್ಲದ ಕಾರಣ ಮಂಗಳವಾರ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸಿ ಸಾವಿರ ಮೆಟ್ಟಿಲಿಗೆ ಕುಂಕುಮ, ಅರಸಿನ, ಕರ್ಪೂರ ಹಚ್ಚಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತಾರೆ. ಪ್ರತಿ ಮೆಟ್ಟಿಲನ್ನು ಮಂಡಿಯಿಂದಲೇ ಹತ್ತಿ ಹರಕೆಯನ್ನು ಸಮರ್ಪಿಸುವವರು ಕೂಡ ಇದ್ದಾರೆ. ಇವರ ನಡುವೆ ಪ್ರತಿ ದಿನವೂ ಸಾವಿರ ಮೆಟ್ಟಿಲೇರಿ ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ನಮಸ್ಕರಿಸಿಕೊಂಡು ಬರುವ ವಾಯುವಿಹಾರಿಗಳದ್ದು ದೊಡ್ಡ ಸಂಖ್ಯೆಯಲ್ಲಿದೆ. ಇವರೆಲ್ಲರೂ ವಾರದಲ್ಲಿ ನಾಲ್ಕು ದಿನವಾದರೂ ಮೆಟ್ಟಿಲು ಹತ್ತುವುದಕ್ಕೆ ಅವಕಾಶವಾಗುವಂತೆ ದ್ವಾರವನ್ನು ತೆರೆಯುವಂತೆ ಮನವಿ ಮಾಡುತ್ತಿದ್ದಾರೆ.

ದ್ವಾರ ಮುಚ್ಚಿದರೂ ನುಸುಳಿ ಮೆಟ್ಟಿಲೇರುವ ಭಕ್ತರು
"ಅಚ್ಚರಿಯ ವಿಷಯವೇನೆಂದರೆ ಮೆಟ್ಟಿಲೇರುವ ದ್ವಾರವನ್ನು ಹಾಕಿದ ನಂತರ ಬೇಲಿ ನುಸುಳಿ ಹೋಗಲು ಅವಕಾಶ ಮಾಡಿಕೊಡಬಾರದು. ಆದರೆ ಮೆಟ್ಟಿಲೇರುವವರು ಅವರ ಪಾಡಿಗೆ ನುಸುಳಿಕೊಂಡು ಮೆಟ್ಟಿಲೇರುತ್ತಿದ್ದಾರೆ. ಹೀಗಿರುವಾಗ ದ್ವಾರವನ್ನು ಬಂದ್ ಮಾಡಿ ಏನು ಪ್ರಯೋಜನವಾಯಿತು,'' ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಗೊಂದಲ ನಿವಾರಿಸಬೇಕಿದೆ
ಇಲ್ಲಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಅವರು ಬರುವ ವೇಳೆಗೆ ಬಹಳಷ್ಟು ಮಂದಿ ಮೆಟ್ಟಿಲು ಹತ್ತಿ ಇಳಿಯುತ್ತಿರುತ್ತಾರೆ. ಅಥವಾ ಅವರ ಎದುರೇ ನುಸುಳಿಕೊಂಡು ಹೋಗುತ್ತಿರುತ್ತಾರೆ. ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೆಟ್ಟಿಲೇರುತ್ತಾರೆಯಾದರೂ ಉಳಿದ ದಿನಗಳಲ್ಲಿ ಹೆಚ್ಚಿನ ಜನರು ಇತ್ತ ಬರುವುದಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಗೊಂದಲ ನಿವಾರಿಸಬೇಕಿದೆ. ಇಲ್ಲದೆ ಹೋದರೆ ಮೆಟ್ಟಿಲು ಹತ್ತಲು ಅವಕಾಶ ನೀಡಿ ದ್ವಾರವನ್ನು ತೆಗೆಯದಿರುವುದು ಎಷ್ಟರ ಮಟ್ಟಿಗೆ ಸರಿ ನೀವೇ ಯೋಚಿಸಿ!

ನೆಮ್ಮದಿಯುಸಿರು ಬಿಟ್ಟ ಕೋತಿಗಳ ಪರಿವಾರ
ಎರಡು ತಿಂಗಳ ಕಾಲ ಲಾಕ್ಡೌನ್ ಜಾರಿಯಾಗಿದ್ದರಿಂದ ಭಕ್ತರು ಸೇರಿದಂತೆ ಜನರು ಇತ್ತ ಬಾರದ ಕಾರಣ ಚಾಮುಂಡಿ ಬೆಟ್ಟದ ಪಾದದ ಬಳಿಯ ಮರಗಳಲ್ಲಿ ವಾಸವಾಗಿರುವ ಕೋತಿಗಳು ಹೊಟ್ಟೆಗೆ ಆಹಾರವಿಲ್ಲದೆ ಸಂಕಷ್ಟ ಎದುರಿಸುವಂತಾಗಿತ್ತು. ಸಾಮಾನ್ಯ ದಿನಗಳಲ್ಲಿ ಇಲ್ಲಿಗೆ ಬರುವವರು ತಮ್ಮೊಂದಿಗೆ ಬಾಳೆಹಣ್ಣು ಸೇರಿದಂತೆ ಇನ್ನಿತರ ತಿನಿಸುಗಳನ್ನು ತಂದು ಕೋತಿಗಳಿಗೆ ನೀಡುತ್ತಿದ್ದರು. ಆದರೆ ಲಾಕ್ಡೌನ್ ಕಾಲದಲ್ಲಿ ಜನ ಬಾರದೆ ಹಸಿವಿನಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೀಗ ಜನ ಇತ್ತ ಬರುತ್ತಿದ್ದು, ಬಾಳೆ ಹಣ್ಣು, ಬಿಸ್ಕತ್ತು ಮೊದಲಾದವುಗಳನ್ನು ನೀಡುತ್ತಿದ್ದಾರೆ. ಇದರಿಂದ ತೃಪ್ತವಾಗಿರುವ ಕೋತಿಗಳು ಎಲ್ಲೆಂದರಲ್ಲಿ ಛಂಗನೆ ನೆಗೆಯುತ್ತಾ ಪರಿವಾರದೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿವೆ.












Click it and Unblock the Notifications