ಮೈಸೂರಿನಲ್ಲಿ ಕೊರೊನಾ ಲಸಿಕೆ ಕೊರತೆ ಇದೆ ಎಂಬ ಅನುಮಾನ!
ಮೈಸೂರು, ಏಪ್ರಿಲ್ 5: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದ್ದು, ಕಳೆದ 10 ದಿನಗಳಿಂದ ಪ್ರತಿನಿತ್ಯ ಹೆಚ್ಚು ಹೆಚ್ಚು ಪಾಸಿಟಿವ್ ಪ್ರಕರಣಗಳು ಬರುತ್ತಿದೆ. ಈ ಹಿನ್ನೆಲೆ ಸೋಮವಾರ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಮೈಸೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾದ್ದು, ಕೊರೊನಾ ಪ್ರಕರಣ ಹೆಚ್ಚಳಕ್ಕೆ ಕಾರಣ ತಿಳಿದು ಪ್ರತ್ಯೇಕ ಮಾರ್ಗಸೂಚಿ ರಚಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿ ಆಗ್ತಿದ್ದರೂ, ಮದುವೆ, ಜಾತ್ರೆ, ಹಬ್ಬಗಳು ನಡೆಯುತ್ತಿವೆ. ಉದ್ಘಾಟನೆಗೆ ನಮ್ಮನ್ನೇ ಕರೆಯುತ್ತಾರೆ. ಏನೂ ಮಾಡೋಕೆ ಆಗುತ್ತಿಲ್ಲ. ಇನ್ಮುಂದಾದರೂ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಶಾಸಕ ಎಲ್.ನಾಗೇಂದ್ರ ಮನವಿ ಮಾಡಿದರು.

ಮೈಸೂರಲ್ಲಿ ಲಸಿಕೆ ಕೊರತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. 5 ಲಕ್ಷ ಡೋಸ್ ಕೇಳಿದ್ದಕ್ಕೆ ಕೇವಲ 8 ಸಾವಿರ ಡೋಸ್ ಕೊಟ್ಟಿದ್ದು, ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇದೆಯಾ ಎಂಬ ಅನುಮಾನಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಮಾತು ಪುಷ್ಟಿ ಕೊಡುತ್ತಿದೆ.
ಇಂದು ಮೈಸೂರಿನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ದೂರವಾಣಿ ಕರೆ ಮಾಡಿದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ವ್ಯಾಕ್ಸಿನ್ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.

"ಮೊದಲು 2 ಲಕ್ಷವಾದರೂ ಕೊರೊನಾ ವ್ಯಾಕ್ಸಿನ್ ಕಳಿಸಪ್ಪ. 5 ಲಕ್ಷ ಡೋಸ್ ಕಳುಹಿಸಿದರೆ, ಫುಲ್ ಕೊರೊನಾ ಕಂಟ್ರೋಲ್ ಮಾಡ್ತೀವಿ. 250 ಪ್ರಕರಣಗಳಿಗೆ ಮೈಸೂರು ತಲ್ಲಣವಾಗಿದೆ. ಆದಷ್ಟು ಬೇಗ ವ್ಯಾಕ್ಸಿನ್ ಕಳುಹಿಸುವಂತೆ'' ಕೇಳಿಕೊಂಡರು. ಸಚಿವ ಎಸ್.ಟಿ ಸೋಮಶೇಖರ್ ಮನವಿಗೆ ಸ್ಪಂದಿಸಿದ ಸಚಿವ ಸುಧಾಕರ್ 1 ಲಕ್ಷ ಡೋಸ್ ಕಳುಹಿಸುವಂತೆ ಒಪ್ಪಿಕೊಂಡಿದ್ದಾರೆ.












Click it and Unblock the Notifications