ಮೈಸೂರು ದಸರಾಗೆ ಖರ್ಚಾಗಿದ್ದೆಷ್ಟು? ಉಳಿತಾಯವಾಗಿದ್ದೆಷ್ಟು?; ಅಂಕಿ-ಅಂಶ ಇಲ್ಲಿದೆ
ಮೈಸೂರು, ನವೆಂಬರ್ 1: 2021ರ ಮೈಸೂರು ದಸರಾ ಮಹೋತ್ಸವಕ್ಕೆ ಸರ್ಕಾರ 6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 5,42,07,679 ರೂ. ಖರ್ಚಾಗಿದ್ದು, 57 ಲಕ್ಷ ರೂಪಾಯಿಗೂ ಹೆಚ್ಚು ಹಣ ಉಳಿತಾಯವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಖರ್ಚು- ವೆಚ್ಚಗಳ ಮಾಹಿತಿ ಬಿಡುಗಡೆ ಮಾಡಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಖರ್ಚು- ವೆಚ್ಚಗಳ ಸಂಪೂರ್ಣ ಮಾಹಿತಿಯನ್ನು ಅರಮನೆ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆಗೊಳಿಸಿದರು.
ಮೈಸೂರು ದಸರಾಗೆ 4,22,07,679 ರೂಪಾಯಿ ಖರ್ಚಾಗಿದೆ. ಶ್ರೀರಂಗಪಟ್ಟಣ, ಚಾಮರಾಜನಗರ ದಸರಾ ಆಚರಣೆಗೆ ತಲಾ 50 ಲಕ್ಷ ರೂ., ಅರಕಲಗೂಡು ದಸರಾಗೆ 20 ಲಕ್ಷ ರೂ. ಬಿಡುಗಡೆ ಮಾಡಿದ್ದು, ಒಟ್ಡು 5,42,07,679 ರೂ. ಹಣ ಖರ್ಚಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ವಿವರಿಸಿದರು.

ಮೈಸೂರು ದಸರಾ ಆಮಂತ್ರಣ ಪತ್ರಿಕೆ, ಮುದ್ರಣ ಇತ್ಯಾದಿಗಳಿಗೆ 5,91,960 ರೂ. ಖರ್ಚಾಗಿದ್ದರೆ, ಗಣ್ಯರು ಮತ್ತು ಕಲಾವಿದರ ಸಾರಿಗೆ ವ್ಯವಸ್ಥೆಗೆ 29,16,416 ರೂ. ಖರ್ಚಾಗಿದೆ. ಜಂಬೂಸವಾರಿ ಮೆರವಣಿಗೆಗೆ 37,50,772 ರೂ., ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕಲಾವಿದರ ಸಂಭಾವನೆಗೆ 1,03,64,272 ರೂ. ಖರ್ಚಾಗಿದೆ.
ಸ್ತಬ್ಧಚಿತ್ರ ನಿರ್ಮಾಣಕ್ಕೆ 18,85,102 ರೂ., ಆನೆಗಳ ನಿರ್ವಹಣೆಗೆ 50 ಲಕ್ಷ ರೂ., ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ವಿದ್ಯುತ್ ಕಾಮಗಾರಿಗಳ ವ್ಯವಸ್ಥೆಗಾಗಿ 93,80,000 ರೂ., ವೆಬ್ ಕ್ಯಾಸ್ಟಿಂಗ್ಗೆ 11,09,200 ರೂ. ವೆಚ್ಚವಾಗಿದೆ. ಅರಮನೆಗೆ ಗೌರವ ಸಂಭಾವನೆಯಾಗಿ 40 ಲಕ್ಷ ರೂ., ದೂರದರ್ಶನದಲ್ಲಿ ಜಂಬೂಸವಾರಿ ನೇರಪ್ರಸಾರ ಮಾಡಿದ್ದಕ್ಕೆ 6,22,513 ರೂ., ದಸರಾ ಆನೆಗಳು ಹಾಗೂ ಕಾವಾಡಿಗರ ವಿಮೆಗೆ 24 ಸಾವಿರ ರೂ. ಭರಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ದಸರಾ ಸಂಬಂಧ ಉಪ ಸಮಿತಿ ಸಭೆ ಲೇಖನ ಸಾಮಾಗ್ರಿಗೆ 3245 ರೂ., ಉನ್ನತ ಮಟ್ಟದ ಸಮಿತಿ ಸಭೆ ಶಿಷ್ಟಾಚಾರಕ್ಕೆ ಹೋಟೆಲ್ ಮತ್ತು ಇತರೆ ವೆಚ್ಚಗಳಿಗೆ 47,250 ರೂ., ದಸರಾ ಸಂಬಂಧ ನಡೆದ ವಿವಿಧ ಸಭೆಗಳಿಗೆ ಕಾಫಿ, ಟೀ, ಸ್ನ್ಯಾಕ್ಸ್ಗೆ 40,878 ರೂ., ಬಿಎಸ್ಎನ್ಎಲ್ಗೆ 78,668 ರೂ., ಉನ್ನತ ಮಟ್ಟದ ಸಭೆಗೆ ಮತ್ತು ವಿಶೇಷಾಧಿಕಾರಿಗಳ ಕಚೇರಿಗೆ ಲೇಖನ ಸಾಮಾಗ್ರಿ ಖರೀದಿಗೆ 90,919 ರೂ., ಜಂಬೂಸವಾರಿ ನೇರ ವೀಕ್ಷಣೆ ವಿವರಣೆ ಬಿತ್ತರಿಸಲು ಆಕಾಶವಾಣಿಗೆ 67 ಸಾವಿರ ರೂ. ಪಾವತಿಸಲಾಗಿದೆ.
ದಸರಾ ಕಾರ್ಯಕ್ರಮಗಳ ಫೋಟೋ, ವೀಡಿಯೋಗ್ರಾಫಿಗೆ 95 ಸಾವಿರ ರೂ., ಸ್ವಚ್ಛತೆ ನಿರ್ವಹಣೆಗೆ 10,76,072 ರೂ., ವಾರ್ತಾ ಇಲಾಖೆಗೆ 64,412 ರೂ., ದಸರಾ ರಂಗೋತ್ಸವ ಕಾರ್ಯಕ್ರಮಕ್ಕೆ ಅಂದಾಜು 10 ಲಕ್ಷ ರೂ. ವೆಚ್ಚವಾಗಿದೆ ಎಂದು ಸಚಿವರು ಮಾಹಿತಿ ಬಿಡುಗಡೆ ಮಾಡಿದರು.
ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ. ಸೋಮಶೇಖರ್, ಕಲಾವಿದರಿಗೆ ವೇದಿಕೆ ಮೇಲೆಯೇ ಸನ್ಮಾನಿಸಿ ನೇರವಾಗಿ ಚೆಕ್ ವಿತರಣೆ ಮಾಡಲಾಗಿದೆ. ಶಾಶ್ವತ ದೀಪಾಲಂಕಾರ ಪ್ರದರ್ಶನ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ ಎಂದರು.
ಮಳೆಹಾನಿ ಕುರಿತು ನೀಲನಕ್ಷೆ
ಮೈಸೂರು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಆಗಿರುವ ಹಾನಿ, ಅನಾಹುತಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಈ ಕುರಿತು ನೀಲನಕ್ಷೆ ತಯಾರಿಸಲಾಗಿದ್ದು, ಅದನ್ನು ಸಿಎಂಗೆ ನೀಡಲಾಗುವುದು ಎಂದು ಹೇಳಿದರು.

ಹಾಲಿಗೆ ನೀರು ಬೆರೆಸಿದ ಪ್ರಕರಣ ತನಿಖೆ ಹೊಣೆಯನ್ನು ಸಿಒಡಿಗೆ ವಹಿಸಲಾಗಿದೆ. ಮೂರ್ನಾಲ್ಕು ದಿನದಲ್ಲಿ ಸಿಒಡಿ ವರದಿ ಸಲ್ಲಿಕೆಯಾಗಲಿದೆ. ಇದರ ಜೊತೆಗೆ ಸಹಕಾರಿ ಇಲಾಖೆ ಕೂಡ ವರದಿ ಸಿದ್ಧಪಡಿಸಿದ್ದು, ಎರಡನ್ನು ಪರಾಮರ್ಶಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಲ್. ನಾಗೇಂದ್ರ, ಮೂಡಾ ಅಧ್ಯಕ್ಷ ರಾಜೀವ್, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್ಪಿ ಆರ್. ಚೇತನ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಪಂ ಸಿಇಒ ಯೋಗೇಶ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್. ಮಂಜುನಾಥಸ್ವಾಮಿ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications