ಜನತಂತ್ರವನ್ನು ಗಲೀಜು ಮಾಡಿದ್ದು ಅನರ್ಹರು: ದೇವನೂರು ಮಹದೇವ
ಮೈಸೂರು, ನವೆಂಬರ್ 27: "ರಾಜಕಾರಣ ಹಾಗೂ ಜನತಂತ್ರ ವ್ಯವಸ್ಥೆಯನ್ನು ಗಲೀಜು ಮಾಡಿರುವ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು" ಎಂದು ಸಾಹಿತಿ ದೇವನೂರು ಮಹದೇವ ಕರೆ ನೀಡಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, "ಅನರ್ಹರು ತಮ್ಮನ್ನು ಮಾತ್ರ ಮಾರಿಕೊಂಡಿಲ್ಲ. ಅವರನ್ನು ಆಯ್ಕೆ ಮಾಡಿದ್ದ ಮತದಾರರನ್ನೂ ಮಾರಿಕೊಂಡಿದ್ದಾರೆ. ಬಿಕರಿಯಾದ ಶಾಸಕರು ದೇಶದ್ರೋಹಿಗಳು, ಹೊಣೆಗೇಡಿಗಳು, ಭಂಡರು, ನಿರ್ಲಜ್ಜರು. ಇಂತಹ ಅನರ್ಹರಿಗೆ ಉಪ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಬೇಕು. ಠೇವಣಿ ಸಿಗದಂತೆ ಮಾಡುವ ಮೂಲಕ ತಮಗೆ ಹೋಗಿರುವ ಮರ್ಯಾದೆ ಕಾಪಾಡಿಕೊಳ್ಳಬೇಕು" ಎಂದು ಹರಿಹಾಯ್ದರು.
ರಾಜ್ಯದಲ್ಲಿ ಸಣ್ಣ ಪಕ್ಷಗಳ ಒಕ್ಕೂಟ ರಚನೆ: ದೇವನೂರು ಮಹಾದೇವ
"ಈ ಉಪ ಚುನಾವಣೆಯಲ್ಲಿ ಅನರ್ಹರ ಠೇವಣಿ ಅಳಿಯಲಿ, ಮತದಾರರ ಮಾನ ಉಳಿಯಲಿ ನಮ್ಮ ಧ್ಯೇಯ ವಾಕ್ಯವಾಗಿದೆ. ಎಲ್ಲಾ ರಾಜಕಾರಣಿಗಳು ದಂಧೆಕೋರರು, ಅವಕಾಶವಾದಿಗಳಾಗುತ್ತಿದ್ದಾರೆ. ಅಂಥವರ ಬಗ್ಗೆ ಈಗ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸ್ವರಾಜ್ ಇಂಡಿಯಾ ಕಾರ್ಯರೂಪದ ಮೂಲಕ ಬದಲಾವಣೆ ತರಲಿದೆ" ಎಂದರು.
ಮತದಾರರು ತಮ್ಮನ್ನು ಮಾರಿಕೊಳ್ಳಬೇಡಿ: ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮಾತನಾಡಿ, "15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಮಾರಿಕೊಳ್ಳಬಾರದು. ಚುನಾವಣೆ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಇದನ್ನು ಸ್ವರಾಜ್ ಇಂಡಿಯಾ ಪಕ್ಷ ಅರ್ಥ ಮಾಡಿಸಲಿದೆ. ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಬುದ್ಧಿ ಕಲಿಸಲಾಗುವುದು. ಇದಕ್ಕಾಗಿ ಎರಡು ತಂಡಗಳನ್ನು ರಚನೆ ಮಾಡಲಾಗುವುದು. ಒಂದು ತಂಡ ಉತ್ತರ ಕರ್ನಾಟಕದಲ್ಲಿ, ಮತ್ತೊಂದು ತಂಡ ದಕ್ಷಿಣ ಕರ್ನಾಟಕದಲ್ಲಿ ಕಾರ್ಯಾನಿರ್ವಹಿಸುತ್ತವೆ. ಇದರ ಮೂಲಕ ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು" ಎಂದು ತಿಳಿಸಿದರು.