ಮೈಸೂರು ಜಂಬೂ ಸವಾರಿಗೆ ಕಲಾತಂಡ, ಸ್ತಬ್ಧ ಚಿತ್ರಗಳ ತೋರಣ
ಮೈಸೂರು, ಅಕ್ಟೋಬರ್ 8: ನಾಡಹಬ್ಬ ದಸರಾದ ರಂಗು ಮೈಸೂರನ್ನಾವರಿಸಿದೆ. ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದ್ದಾರೆ. ಮೊದಲಿಗೆ ನಿಶಾನೆ ಆನೆಗಳು ಸಾಗಿದರೆ ಅದರ ಹಿಂದೆಯೇ ಒಂದರ ಹಿಂದೆ ಒಂದು ಎನ್ನುವಂತೆ ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.
ಇದರ ಜತೆಗೆ ಜಾನಪದ ಕಲಾತಂಡಗಳು, ಪೊಲೀಸ್ ಬ್ಯಾಂಡ್, ವಾದ್ಯ ಸಂಗೀತಗಾರರು ಮತ್ತು ವಿವಿಧ ಜಿಲ್ಲೆಯನ್ನು ಪ್ರತಿನಿಧಿಸುವ, ಸರ್ಕಾರದ ಕಾರ್ಯಕ್ರಮವನ್ನು ಜನಕ್ಕೆ ಮುಟ್ಟಿಸುವ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಗಮನಸೆಳೆದವು. ಕಲಾತಂಡಗಳ ಪೈಕಿ ಚಾಮುಂಡೇಶ್ವರಿ ಮತ್ತು ಮಹಿಷಾಸುರನ ವೇಷದಲ್ಲಿ ಮರಗಾಲಿನ ನಡಿಗೆಯಲ್ಲಿ ಸಾಗಿದ್ದು ಆಕರ್ಷಣೀಯವಾಗಿತ್ತು. ಇನ್ನು ಅತಿವೃಷ್ಟಿ, ಪ್ರವಾಹದಿಂದ ನಲುಗಿದ ಬೆಳಗಾವಿ, ಬಾಗಲಕೋಟೆಯಲ್ಲಿನ ಪುನರ್ವಸತಿ ಕಾರ್ಯಗಳು, ಧಾರವಾಡದ ಸಾಂಸ್ಕೃತಿಕ ವೈಭವ, ಹಾವೇರಿಯ ಶಂಖನಾದ ಮೊಳಗಿಸುತ್ತಿರುವ ಕನಕದಾಸರು, ಗದಗದ ಭೇಟಿ ಪಡವೋ ಭೇಟಿ ಬಚಾವೋ, ಉತ್ತರ ಕನ್ನಡದಲ್ಲಿನ ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ, ವಿಜಯಪುರದ ವಚನ ಪಿತಾಮಹಾ ಫ.ಹು ಹಳಕಟ್ಟಿ, ಚಂದ್ರಯಾನ-2, ಬೆಂಗಳೂರು ಗ್ರಾಮಾಂತರ-ಸ್ವಚ್ಛತೆ ಕಡೆಗೆ ನಮ್ಮ ನಡಿಗೆ ಸ್ತಬ್ಧ ಚಿತ್ರಗಳು ಮನಸೆಳೆದವು.

ಚಿತ್ರದುರ್ಗದ ಸ್ತಬ್ಧ ಚಿತ್ರ ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು, ದಾವಣಗೆರೆಯ ಏರ್ಸ್ಟ್ರೈಕ್, ಕೋಲಾರದ ಅಂತರಗಂಗೆ, ಶಿವಮೊಗ್ಗದ ಫಿಟ್ ಇಂಡಿಯಾ, ತುಮಕೂರಿನ ಸಮಗ್ರ ಕೃಷಿ ಪದ್ಧತಿ ಹಾಗೂ ನಡೆದಾಡುವ ದೇವರು, ರಾಮನಗರದ ಮಳೂರು ಅಂಬೆಗಾಲು ಕೃಷ್ಣ, ಚಿಕ್ಕಬಳ್ಳಾಪುರದ ರೇಷ್ಮೆ ಮತ್ತು ಎಚ್ ನರಸಿಂಹಯ್ಯ ಸ್ತಬ್ಧ ಚಿತ್ರಗಳು ನೋಡುಗರನ್ನು ಅಚ್ಚರಿಗೊಳಿಸಿದವು.
ಗುಲ್ಬರ್ಗಾದ ಆಯುಷ್ಮಾನ್ ಭಾರತ್, ಬಳ್ಳಾರಿಯ ಹಂಪಿ ವಾಸ್ತುಶಿಲ್ಪ ಕಲಾ ವೈಭವ, ಬೀದರ್ ನ ಫಸಲ್ ಭೀಮಾ ಯೋಜನೆ, ಕೊಪ್ಪಳದ ಗವಿಸಿದ್ದೇಶ್ವರ ಬೆಟ್ಟ, ರಾಯಚೂರಿನ ಗೂಗಲ್ ಬ್ರಿಡ್ಜ್, ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾಯೋಜನೆ, ಯಾದಗಿರಿಯ ಅಂಬಿಗರ ಚೌಡಯ್ಯ, ಮೈಸೂರು-ಚಾಮರಾಜ ಒಡೆಯರ್ ಅವರ 100ನೇ ವರ್ಷದ ಸಾಧನೆ, ಚಾಮರಾಜನಗರದ ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ, ಚಿಕ್ಕಮಗಳೂರಿನ ಶಿಶಿಲಬೆಟ್ಟ, ದಕ್ಷಿಣ ಕನ್ನಡ-ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ, ಹಾಸನದ ಎತ್ತಿನಹೊಳೆ ಯೋಜನೆ ಇವು ಕೂಡ ಆಕರ್ಷಣೆಯ ಕೇಂದ್ರವಾಗಿದ್ದವು.

ಇಷ್ಟೇ ಅಲ್ಲ, ಕೊಡಗಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಕುರಿತು ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರ, ಮಂಡ್ಯದ ಶ್ರೀ ಆದಿ ಚುಂಚನಗಿರಿ ಮಠ, ಉಡುಪಿ ಕೃಷ್ಣ ಮಠದ ಗೋಪುರ, ದಸರಾ ಉಪ ಸಮಿತಿಯ ಆನೆ ಬಂಡಿ, ಜೆ.ಎಸ್.ಎಸ್ ಮಠ, ವಾರ್ತಾ ಇಲಾಖೆ-ಸರ್ಕಾರ ಸೌಲಭ್ಯಗಳ ಮಾಹಿತಿ, ದಸರಾ ಉಪ ಸಮಿತಿ-ಮೆಮೊರೈಲ್, ಉಡಾನ್ ಹಾಗೂ ಹತ್ತು ಪಥದ ರಸ್ತೆ, ಜಿಲ್ಲಾಡಳಿತ ಸಾಮಾಜಿಕ ನ್ಯಾಯ, ಕಾವೇರಿ ನೀರಾವರಿ ನಿಗಮ-ನೀರಾವರಿ ನಿಗಮ ಮಾಹಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ, ಪ್ರವಾಸೋದ್ಯಮ ಇಲಾಖೆ-ನಿಮ್ಮ ಸಾಹಸಗಾಥೆ ನೀವೇ ರಚಿಸಿ, ಮೈಸೂರು ವಿಶ್ವವಿದ್ಯಾನಿಲಯ-ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳ ಅನಾವರಣವನ್ನು ಸ್ತಬ್ಧ ಚಿತ್ರಗಳೊಂದಿಗೆ ಸುಮಾರು 43 ಬಗೆಯ ಜನಪದ ಕಲಾ ತಂಡಗಳು ಸಾಥ್ ನೀಡಿದವು.

ಈ ಪೈಕಿ ಕೋಲಾಟ, ತಮಟೆ, ಪೂಜಾಕುಣಿತ, ಕಂಗೀಲು, ಸತ್ತಿಗೆ, ಕರಡಿ ಕುಣಿತ, ಬೊಂಬೆಯಾಟ, ಕಂಸಾಳೆ ಹೀಗೆ ಹಲವು ಪ್ರದರ್ಶನಗಳನ್ನು ನೀಡುತ್ತಾ ಕಲಾ ತಂಡಗಳು ಸಾಗುತ್ತಿದ್ದರೆ, ಇಕ್ಕೆಲಗಳಲ್ಲಿ ಕುಳಿತು ನೋಡುತ್ತಿರುವ ಪ್ರೇಕ್ಷಕರು ಘೋಷಣೆಗಳನ್ನು ಕೂಗಿ ಖುಷಿ ಪಡುತ್ತಿದ್ದಾರೆ.












Click it and Unblock the Notifications