ಪ್ರತಾಪಸಿಂಹ ಬೆಂಬಲಿಗರು, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ನಡುವೆ ಅಭಿವೃದ್ಧಿ ಚರ್ಚೆ
ಮೈಸೂರು ಜೂನ್ 28: ಸಂಸದ ಪ್ರತಾಪಸಿಂಹ ಹಾಗೂ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ನಡುವೆ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಲು ಪಂಥಾಹ್ವಾನ ಶುರುವಾಗಿತ್ತು. ಆದರೆ, ಇದೀಗ ಪ್ರತಾಪ್ ಸಿಂಹ ಬದಲು ಅವರ ಬೆಂಬಲಿಗರು ಚರ್ಚೆಗೆ ಬರಲು ತೀರ್ಮಾನಿಸಿದ್ದಾರೆ. ಇತ್ತ ಲಕ್ಷ್ಮಣ್ ಕೂಡ ಚರ್ಚೆ ಎದುರಿಸಲು ಸಿದ್ಧರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರೊಂದಿಗೆ ಮೈಸೂರು ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಸಂಸದ ಪ್ರತಾಪ್ ಸಿಂಹ ಸಿದ್ಧರಿದ್ದಾರೆ. ಆದರೆ, ಜನಪ್ರತಿನಿಧಿಯೂ ಅಲ್ಲದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಚರ್ಚೆಗೆ ಬರುವುದಾದರೆ ಪ್ರತಾಪ್ ಸಿಂಹ ಬದಲಿಗೆ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಚರ್ಚಿಸಲು ಸಿದ್ಧರಿದ್ದಾರೆ ಎಂದು ಪಕ್ಷದ ನಗರ ಯುವ ಮೋರ್ಚಾ ಅಧ್ಯಕ್ಷ ಕಿರಣ್ಗೌಡ ತಿರುಗೇಟು ನೀಡಿದ್ದಾರೆ.
ಇತ್ತ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಚರ್ಚೆ ನಡೆಸಲು ಜಲದರ್ಶಿನಿ ಅತಿಥಿ ಗೃಹಕ್ಕೆ ತೆರಳಲು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಭವನದಿಂದ ಮೆರವಣಿಗೆ ಹೊರಟು ಬೆಳಗ್ಗೆ 11 ಗಂಟೆಗೆ ಅಗತ್ಯ ದಾಖಲೆಯೊಂದಿಗೆ ಚರ್ಚೆಗೆ ಹೋಗುವುದಾಗಿ ಘೋಷಿಸಿದ್ದಾರೆ.

"ಲಕ್ಷ್ಮಣ್ ಸಂಸದರ ಕಚೇರಿಗೆ ಜೂ. 29ರಂದು ಚರ್ಚೆಗೆ ಬರುವುದಾಗಿ ತಿಳಿಸಿದ್ದಾರೆ. ಅವರು ಬರುವುದು ಬೇಡ. ಬುಧವಾರ ಬೆಳಗ್ಗೆ 10 ಗಂಟೆಗೆ ಮೆಟ್ರೋಪೋಲ್ ವೃತ್ತದಲ್ಲಿರುವ ಕಾರ್ಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್ ಕಚೇರಿಗೆ ನಾವೇ ಕುರ್ಚಿಯೊಂದಿಗೆ ಚರ್ಚೆಗೆ ಹೋಗುತ್ತೇವೆ" ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಿರಣ್ಗೌಡ ತಿಳಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜೈಶಂಕರ್ ಮಾತನಾಡಿ, " ಲಕ್ಷ್ಮಣ್ ಮೂರು ಚುನಾವಣೆಯಲ್ಲಿ ಸೋತಿದ್ದಾರೆ. ರಾಜ್ಯ ವಕ್ತಾರರಾಗಿ ಮೈಸೂರು ನಗರಕ್ಕೆ ಸೀಮಿತರಾಗಿದ್ದಾರೆ. ಪ್ರತಾಪ್ ಸಿಂಹ ಅವರ ವಿರುದ್ಧ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ಸಂಸದರ ವಿರುದ್ಧ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಸವಾಲು ಹಾಕಿದ್ದಾರೆ. ಈ ಸವಾಲಿನಲ್ಲಿಯೇ ಅವರ ಸ್ಥಾನ ಎಂತಹದು ಎಂದು ಅರ್ಥ ಮಾಡಿಕೊಳ್ಳಬಹುದು" ಎಂದು ಹೇಳಿದರು.

ದಳವಾಯಿ ಶಾಲೆಯಲ್ಲಿ ಕಚೇರಿ
ದಳವಾಯಿ ಶಾಲೆಯಲ್ಲಿ ಲಕ್ಷ್ಮಣ್ ಕಚೇರಿ ತೆರೆದಿದ್ದಾರೆ. ಅದು ಕಾಂಗ್ರೆಸ್ ಕಚೇರಿಯಾಗಿದೆ. ಶಾಲೆಯ ಸ್ಥಳವನ್ನು ದುರುಪಯೋಗ ಮಾಡಲಾಗುತ್ತಿದೆ. ನೈತಿಕತೆ ಇದ್ದರೆ ತಕ್ಷಣವೇ ಖಾಲಿ ಮಾಡಬೇಕು. ಬಿಜೆಪಿ ನಾಯಕರ ವೈಯಕ್ತಿಕ ದಾಳಿ ನಿಲ್ಲಿಸದಿದ್ದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದರು.
ಸವಾಲೆಸೆದಿದ್ದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ ಜೂನ್ 14 ರಂದು ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಯಾರೇ ಚರ್ಚೆಗೆ ಬಂದರೂ ನಾನು ಸಿದ್ಧನಿದ್ದೇನೆ. ಈ ಚರ್ಚೆಯಲ್ಲಿ ನಾನೇ ಗೆಲ್ಲುತ್ತೇನೆ ಎಂದು ಕಾಂಗ್ರೆಸ್ಗೆ ಸಂಸದ ಸವಾಲೆಸಿದ್ದರು. "ಒಂದ್ ಮಾತು ಸತ್ಯ. ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಯಾರೇ ಚರ್ಚೆಗೆ ಬರಲಿ ಅವರನ್ನು ಸೋಲಿಸುವುದು ಈ ಪ್ರತಾಪ್ ಸಿಂಹ ಮಾತ್ರ. ಯಾರು ಚರ್ಚೆಗೆ ಬರಬೇಕು, ಏನು ಚರ್ಚೆಯಾಗಬೇಕು ಎಂಬುದನ್ನ ಮಾಧ್ಯಮಗಳ ಮುಂದೆ ಹೇಳುತ್ತೇನೆ" ಎಂದು ಸವಾಲು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮತಿ ಮೇರೆಗೆ ತಾವು ಜೂನ್ 29ರಂದು ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದು ಪತ್ರಿಕಾ ಗೋಷ್ಠಿ ನಡೆಸಿ ಹೇಳಿದ್ದರು.











Click it and Unblock the Notifications