ದಸರಾ ವಿಶೇಷ: ಮಾವುತರೆಂಬ ಗಜಪಡೆಯ ರಿಂಗ್ ಮಾಸ್ಟರ್!
ಮೈಸೂರು, ಆಗಸ್ಟ್ 25: ವಿಜಯದಶಮಿ ದಿನ ನಡೆಯುವ ಮೈಸೂರು ದಸರಾದ ಜಂಬೂಸವಾರಿ ಕಣ್ಮನ ಸೆಳೆಯುತ್ತದೆ. ಅದರಲ್ಲೂ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನ ಗಂಭೀರ ನಡಿಗೆ ಜಂಬೂಸವಾರಿಗೆ ಕಳೆ ಕಟ್ಟುತ್ತದೆ.
ಆದರೆ, ಒಂದು ದಿನ ನಡೆಯುವ ಕಾರ್ಯಕ್ರಮಕ್ಕೆ ಎರಡು ತಿಂಗಳ ಹಿಂದಿನಿಂದಲೇ ತಾಲೀಮು ನಡೆಯುತ್ತದೆ. ವಿವಿಧ ಶಿಬಿರಗಳಲ್ಲಿ ತಮ್ಮದೇ ಬದುಕು ಕಂಡುಕೊಂಡಿದ್ದ ಆನೆಗಳನ್ನು ಕರೆತಂದು, ಅವುಗಳಿಗೆ ಶಿಸ್ತುಬದ್ಧ ನಡಿಗೆಯನ್ನು ಕಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಆ ಕೆಲಸವನ್ನು ಮಾವುತ ಮತ್ತು ಕಾವಾಡಿ ಮಾಡುತ್ತಾರೆ.[ಶ್ರೀರಂಗಪಟ್ಟಣದ ವಿಕಲಚೇತನ ದಯಾಮರಣ ಕೋರಿದ್ದೇಕೆ?]

ಆನೆಗಳ ಬೇಕು- ಬೇಡಗಳನ್ನು ಅರಿತು, ನಡೆದುಕೊಳ್ಳುವುದು ಮತ್ತು ತಾವು ಹೇಳಿದಂತೆ ಅವುಗಳನ್ನು ನಡೆಸುವುದು ಸಾಮಾನ್ಯವಲ್ಲ. ಆದ್ದರಿಂದಲೇ ಮಾವುತರನ್ನು ಆನೆಗಳ ರಿಂಗ್ ಮಾಸ್ಟರ್ ಎಂದು ಕರೆದರೂ ತಪ್ಪಾಗಲಾರದು.
ಟೆಂಟ್ ವಾಸ್ತವ್ಯ: ಈಗಾಗಲೇ ಮೈಸೂರನ್ನು ಪ್ರವೇಶಿಸಿರುವ ಗಜಪಡೆ ಆ.26ರಂದು ಅರಮನೆ ಆವರಣವನ್ನು ಪ್ರವೇಶಿಸಲಿವೆ. ಸಾಂಪ್ರದಾಯಿಕ ಸ್ವಾಗತ ನೀಡಿ ಒಳಕ್ಕೆ ಕರೆಯಿಸಿಕೊಳ್ಳಲಾಗುತ್ತದೆ. ಆನೆಗಳೊಂದಿಗೆ ವಾಸ್ತವ್ಯ ಹೂಡಲಿರುವ ಮಾವುತ ಮತ್ತು ಕಾವಾಡಿಗಳ ಕುಟುಂಬಗಳಿಗಾಗಿ ಟೆಂಟ್ ಗಳನ್ನು ನಿರ್ಮಿಸಲಾಗಿದೆ.[ಕಾರ್ಯಕರ್ತರ ಒತ್ತಡಕ್ಕೆ ಮಣಿದರೆ ಸಿಎಂ ಪುತ್ರ ಡಾ.ಯತೀಂದ್ರ?]

ಆನೆಗಳನ್ನು ಕಟ್ಟಿಹಾಕುವುದರಿಂದ ಆರಂಭವಾಗಿ, ಅವುಗಳು ಹಾಕುವ ಲದ್ದಿಯನ್ನು ತೆಗೆಯುವುದು, ಆಹಾರ ತಯಾರಿಸುವುದು, ಮಜ್ಜನ ಮಾಡಿಸುವುದು ಇದೆಲ್ಲವೂ ಅಷ್ಟು ಸುಲಭದ ಕೆಲಸವಲ್ಲ. ಆದರೆ ಆನೆಗಳೊಂದಿಗೆ ಇದ್ದು, ಅವುಗಳ ಲಾಲನೆ- ಪಾಲನೆಯನ್ನು ಮಾವುತರು ಮತ್ತು ಕಾವಾಡಿಗಳು ಮಾಡುತ್ತಾರೆ.
ಬೇರೆಯವರ ಮಾತು ಕೇಳಲ್ಲ: ಕಳೆದ ವರ್ಷದವರೆಗೂ ಅಂಬಾರಿ ಹೊರುವ ಅರ್ಜುನನ್ನು ಮಾವುತ ದೊಡ್ಡ ಮಾಸ್ತಿಯೇ ನೋಡಿಕೊಳ್ಳುತ್ತಿದ್ದರು. ಆದರೆ ಅವರು ನಿಧನರಾಗಿದ್ದು, ಅವರ ಕಾರ್ಯವನ್ನು ಪುತ್ರ ಸಣ್ಣಪ್ಪ ವಹಿಸಿಕೊಂಡಿದ್ದಾರೆ. ಆನೆಗಳು ತಮ್ಮ ಮಾವುತ ಮತ್ತು ಕಾವಾಡಿಗಳನ್ನು ಹೊರತು ಪಡಿಸಿ, ಬೇರೆ ಮಾವುತರ ಮಾತನ್ನು ಕೇಳುವುದು ಕಷ್ಟವೇ ಹೀಗಾಗಿಯೇ ಪ್ರತಿ ಆನೆಗೂ ಅದರದ್ದೇ ಆದ ಮಾವುತರು ಮತ್ತು ಕಾವಾಡಿಗಳನ್ನು ನೇಮಿಸಲಾಗಿದೆ.[ಚಿಕ್ಕಮ್ಮದೇವಿಗೆ ಬಾಗಿನ ಅರ್ಪಿಸಿದ ಒಡೆಯರ್ ಕುಟುಂಬ]
ಇದೀಗ ಈ ಬಾರಿಯ ಜಂಬೂಸವಾರಿಯಲ್ಲಿ 12 ಆನೆಗಳು ಪಾಲ್ಗೊಳ್ಳುತ್ತಿದ್ದು, ಅವುಗಳಿಗೆ ಸರಿಯಾದ ತರಬೇತಿ ನೀಡಿ, ನಿರಾಳವಾಗಿ ಜಂಬೂಸವಾರಿ ನಡೆಸುವ ಪಣವನ್ನು ಮಾವುತರು ಮತ್ತು ಕಾವಾಡಿಗಳು ತೊಟ್ಟಿದ್ದಾರೆ.

ಮಾವುತ, ಕಾವಾಡಿ: ಮೊದಲ ತಂಡದಲ್ಲಿ ಆಗಮಿಸಿರುವ ಗಜ ಪಡೆಯಲ್ಲಿರುವ ಬಲರಾಮನಿಗೆ ಮಾವುತನಾಗಿ ತಿಮ್ಮ, ಕಾವಾಡಿಯಾಗಿ ಗೋಪಾಲ, ಅಭಿಮನ್ಯುವಿಗೆ ಮಾವುತನಾಗಿ ವಸಂತ, ಕಾವಾಡಿಯಾಗಿ ರಾಜು, ಅರ್ಜುನನ ಮಾವುತನಾಗಿ ಸಣ್ಣಪ್ಪ, ಕಾವಾಡಿಯಾಗಿ ವಿನು, ಕಾವೇರಿಗೆ ಮಾವುತ ದೋಬಿಯಾದರೆ, ರಘು ಕಾವಾಡಿಯಾಗಿದ್ದಾರೆ. ವಿಜಯಳಿಗೆ ಬೋಜಪ್ಪ ಮಾವುತ, ದೊರೆಯಪ್ಪ ಕಾವಾಡಿ, ಗಜೇಂದ್ರನಿಗೆ ಮಾವುತನಾಗಿ ಶಂಕರ, ಕಾವಾಡಿಯಾಗಿ ಸುನಿಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎರಡನೆಯ ತಂಡದ ಗಜಪಡೆಯಲ್ಲಿರುವ ವಿಕ್ರಮನಿಗೆ ಮಾವುತನಾಗಿ ರಾಜುಮಣಿ, ಕಾವಾಡಿಯಾಗಿ ಲಿಂಗ, ಗೋಪಿಗೆ ಸರಿ ಮಾವುತ, ಅಪ್ಪಯ್ಯ ಕಾವಾಡಿ, ಹರ್ಷನಿಗೆ ಚಿಕ್ಕ ಮಾವುತ, ಅಶೋಕ ಕಾವಾಡಿ, ಪ್ರಶಾಂತನಿಗೆ ಮಾವುತನಾಗಿ ಚಿಣ್ಣಪ್ಪ, ಕಾವಾಡಿಯಾಗಿ ರಾಜು, ದುರ್ಗಾಪರಮೇಶ್ವರಿಗೆ ಅಣ್ಣು ಮಾವುತ, ಮಹದೇವ ಕಾವಾಡಿಯಾಗಿದ್ದಾರೆ. ಇನ್ನು ಗೋಪಾಲಸ್ವಾಮಿಗೆ ಮಾವುತನಾಗಿ ಸೃಜನ್, ಕಾವಾಡಿಯಾಗಿ ದಾಸ ಕಾರ್ಯ ನಿರ್ವಹಿಸುತ್ತಿದ್ದಾರೆ.[ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?]

ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಂಬೂಸವಾರಿಗೆ ಗಜಪಡೆಗಳನ್ನು ತಯಾರು ಮಾಡುವ ಕಾರ್ಯ ಆ.26ರಿಂದಲೇ ಆರಂಭವಾಗಲಿದ್ದು, ದಿನ ಕಳೆದಂತೆ ತಾಲೀಮು ಕೂಡ ಕಠಿಣವಾಗಲಿದೆ. ಆದರೆ ಅದೆಲ್ಲವನ್ನೂ ಸಲೀಸಾಗಿ ಮಾಡಲು ಮಾವುತರು ಮತ್ತು ಕಾವಾಡಿಗಳ ತಂಡ ಸಜ್ಜಾಗುತ್ತಿದೆ.












Click it and Unblock the Notifications