ಬಸವ ಜಯಂತಿಯಂದೇ ಬೆಟ್ಟದಪುರದಲ್ಲಿ ಗೋಹತ್ಯೆ!
ಮೈಸೂರು, ಮೇ 10 : ಬಸವೇಶ್ವರ ಜಯಂತಿಯಂದು ಸಾಮಾನ್ಯವಾಗಿ ಎಲ್ಲ ಮಾಂಸದಂಗಡಿಗಳನ್ನು ಬಂದ್ ಮಾಡಲಾಗುತ್ತದೆ. ವಿಶ್ವಕ್ಕೆ ಶಾಂತಿ ಸಾರಿದ ಬಸವಣ್ಣನ ಜಯಂತಿಯಂದು ಪ್ರಾಣಿಹಿಂಸೆ ನಡೆಸದಂತೆ ನೋಡಿಕೊಳ್ಳಲಾಗುತ್ತಿದೆ.
ಜಿಲ್ಲಾಡಳಿತ ಬಸವ ಜಯಂತಿಯಂದು ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದರ ಪಾಲನೆ ಕೆಲವೆಡೆ ನಡೆದಿತ್ತಾದರೂ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಲಗನಹಳ್ಳಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕೋಳಿ, ಕುರಿಯಲ್ಲದೆ ಗೋವುಗಳನ್ನೇ ಕತ್ತರಿಸಿ ಮಾರಾಟ ಮಾಡಲಾಗಿದೆ. [ಪತ್ರ : ಗಟ್ಟಿಮುಟ್ಟಾದ ತರ್ಕವಿಲ್ಲದ ಬಾಲಿಶ ವಿಚಾರಧಾರೆ]

ಗೋವು ಹತ್ಯೆಗೆ ಎಲ್ಲೆಡೆ ವಿರೋಧವೂ ಇದೆ. ಅಲ್ಲದೆ ಗೋಹತ್ಯೆ ನಿಷೇಧಿಸಿ ಕಾನೂನು ಹೊರಡಿಸಬೇಕೆಂಬ ಕೂಗು ಇದ್ದರೂ ಅದು ಇನ್ನೂ ಜಿಜ್ಞಾಸೆಯಲ್ಲಿದೆ. ಅಲ್ಲಲ್ಲಿ ಗೋಹತ್ಯೆ ಸದ್ದಿಲ್ಲದೆ ನಡೆಯುತ್ತಲೇ ಇದೆ. ಅದು ಆಚೆಗಿರಲಿ. ಆದರೆ ಬಸವ ಜಯಂತಿಯಂದು ಜಿಲ್ಲಾಡಳಿತವೇ ಪ್ರಾಣಿ ಹಿಂಸೆ ಮಾಡದಂತೆ ಆದೇಶ ನೀಡಿದ್ದರೂ ಅದನ್ನು ಧಿಕ್ಕರಿಸಿ ಹಸುಗಳನ್ನು ಕತ್ತರಿಸಿ ಮಾರಾಟ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಬಂಧ ಪಟ್ಟ ಪೊಲೀಸ್ ಇಲಾಖೆಯಾಗಲಿ, ಗ್ರಾಮಪಂಚಾಯಿತಿಯಾಗಲಿ ಇದನ್ನು ತಡೆಯದೆ ಇರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಬಸವಜಯಂತಿಯಂದು ಗೋಮಾಂಸವನ್ನು ಮಾರಾಟ ಮಾಡಿದ ಸುದ್ದಿ ತಿಳಿದ ವೀರಶೈವ ಸಂಘಟನೆಗಳು ಬಸವಣ್ಣನವರ ಹೆಸರಿಗೆ ಕಳಂಕ ತಂದಿರುವ ಮತ್ತು ಅವರ ಅಹಿಂಸಾ ತತ್ತ್ವಕ್ಕೆ ಧಕ್ಕೆ ತಂದವರ ವಿರುದ್ಧ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. [ಮತ್ತೂರಲ್ಲಿ ಸೋಮಯಾಗ : ದುರುದ್ದೇಶಪೂರಿತ ಅಪಪ್ರಚಾರ]












Click it and Unblock the Notifications