ಮೈಸೂರಿನಲ್ಲಿ ಕೊರೊನಾ ಸೋಂಕು ಇಳಿಮುಖ: ಜಿಲ್ಲಾಧಿಕಾರಿ
ಮೈಸೂರು, ಏಪ್ರಿಲ್ 28: ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಶೇ.3 ರಷ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
Recommended Video
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಶೇ. 3 ರಷ್ಟು ಮಾತ್ರ ಇದೆ. 3800 ನಲ್ಲಿ 89 ಪಾಸಿಟಿವ್ ಪ್ರಕರಣ ಬಂದಿತ್ತು. ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಮಾತ್ರ ಪಾಸಿಟಿವ್ ಪ್ರಕರಣ ಜಾಸ್ತಿ ಇತ್ತು. ಅಲ್ಲಿ 1700 ರಲ್ಲಿ 73 ಪಾಸಿಟಿವ್ ಬಂದಿತ್ತು. ತೀವ್ರ ಉಸಿರಾಟದ ತೊಂದರೆಯ 300 ಪರೀಕ್ಷೆಗಳಲ್ಲಿ 2 ಮಾತ್ರ ಪಾಸಿಟಿವ್ ಬಂದಿದೆ. ಗರ್ಭಿಣಿಯರ ಟೆಸ್ಟ್ ಮಾಡಲಾಗಿದ್ದರೂ, ಅವರಲ್ಲಿ ಪಾಸಿಟಿವ್ ಬಂದಿಲ್ಲ ಎಂದರು.
ನಿನ್ನೆ 170 ಮಂದಿಯ ಟೆಸ್ಟ್ ಮಾಡಿದ್ದಾರೆ. ತೀವ್ರ ಉಸಿರಾಟದ ತೊಂದರೆ ಇದ್ದವರು, ಸೋಂಕಿತ ರೋಗಿಗಳ ಸಂಪರ್ಕದಲ್ಲಿದ್ದವರು ಇದ್ದರು. ಅವೆಲ್ಲ ನೆಗಟಿವ್ ಬಂದಿದೆ. ಕ್ವಾರೆಂಟೈನ್ ನಲ್ಲಿದ್ದ ಸುಮಾರು 800 ಜನರ ಟೆಸ್ಟ್ ಹಂತ ಹಂತವಾಗಿ ನಡೆಯುತ್ತಿದೆ. ನಿನ್ನೆ ಮತ್ತು ಇವತ್ತು 200 ಮಂದಿಯ ಟೆಸ್ಟ್ ನಡೆದಿದೆ. ಲ್ಯಾಬ್ ಗಳು 24 ಗಂಟೆಯೂ ಕೆಲಸ ಮಾಡುತ್ತಿದೆ. ಮಂಡ್ಯ, ಕೊಡಗಿನಿಂದ ಸ್ಯಾಂಪಲ್ ಕಳುಹಿಸುತ್ತಿದ್ದಾರೆ. ಲ್ಯಾಬ್ ನವರು ಕಷ್ಟಪಟ್ಟು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನಕ್ಕೆ 300 ಕ್ಕಿಂತ ಹೆಚ್ಚು ಟೆಸ್ಟ್ ಮಾಡುತ್ತಿದ್ದಾರೆ ಎಂದು ಡಿಸಿ ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಇಂದು ಏಳು ಮಂದಿ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದ್ದು, ಡಿಸ್ಚಾರ್ಜ್ ಆದ ಮೇಲೆ ಅಧಿಕೃತವಾಗಿ ಮಾಹಿತಿ ನೀಡಲಿದ್ದೇವೆ. ಇಂದು ಡಿಸ್ಚಾರ್ಜ್ ಆಗುತ್ತಿರುವವರ ಪೈಕಿ ನಜರ್ ಬಾದ್ ಗೆ ಸೇರಿದ ರೋಗಿ 273, ಅವರಿಗೆ 72 ವರ್ಷ ವಯಸ್ಸಾಗಿದ್ದು, ಬೇರೆ ಬೇರೆ ಖಾಯಿಲೆಗಳು ಇತ್ತು.
ಬೇರೆ ಬೇರೆ ಖಾಯಿಲೆಗಳಿದ್ದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೂ ಕೂಡ ಬೆಂಗಳೂರಿನ ನಿಮಾನ್ಸ್ ನಿಂದ ಬಂದಂತಹ ಮತ್ತು ಟೆಲಿಮೆಡಿಸಿನ್ ಕ್ರಿಟಿಕಲ್ ಕೇರ್ ಯೂನಿಟ್ ಮಾಡಿ ಸರ್ಕಾರ ಎಲೆಕ್ಟ್ರಾನಿಕ್ಸ್ ರೌಂಡ್ ಮಾಡಿದ್ದಾರೆ. ಅದರಂತೆ ಚರ್ಚಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮಲ್ಲಿ ವೈದ್ಯರು ವೆಂಟಿಲೇಷನ್ ಬಳಸದೆ ಹೈಫ್ಲೋ ಆಕ್ಸಿಜನ್ ಥೆರಪಿ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಕೋವಿಡ್ 19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.












Click it and Unblock the Notifications