ಮೈಸೂರಿನಲ್ಲಿ ಶುರುವಾಯ್ತು 3ನೇ ಅಲೆಯ ಆತಂಕ: 10 ದಿನದಲ್ಲಿ ಪತ್ತೆಯಾಗಿದ್ದೆಷ್ಟು?
ಮೈಸೂರು, ಜೂನ್ 22: ಕೊರೊನಾ ಸೋಂಕಿನ ಎರಡನೇ ಅಲೆಯಿಂದ ಹೊರಬರುವ ಮುನ್ನವೇ ಮೈಸೂರಿನಲ್ಲಿ ಮೂರನೇ ಅಲೆಯ ಆತಂಕ ಮನೆಮಾಡಿದೆ. ತಜ್ಞರ ಮುನ್ಸೂಚನೆ ನಡುವೆಯೇ ಮೈಸೂರಿನಲ್ಲಿ ಕಳೆದ ಒಂದು ವಾರದಿಂದೀಚೆಗೆ ದಾಖಲಾಗಿರುವ ಅಂಕಿ- ಅಂಶಗಳು ಕೊರೊನಾ ಸೋಂಕಿನ ಮೂರನೇ ಅಲೆಯನ್ನು ಖಾತ್ರಿಪಡಿಸುತ್ತಿವೆ.
ಮೈಸೂರು ಜಿಲ್ಲೆಯಲ್ಲಿ ಕಳೆದ 10 ದಿನದಲ್ಲಿ 700ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದು 18 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೊದಲ ಅಲೆಯಲ್ಲಿ 1500ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಕಳೆದ ಮೂರು ತಿಂಗಳಲ್ಲಿ 3 ಸಾವಿರ ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಅದರ ಹೊರತಾಗಿ ಕಳೆದ 10 ದಿನದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬಂದಿದೆ.

ಜಿಲ್ಲಾಡಳಿತ ಸಕಲ ಸಿದ್ಧತೆ
ಮೈಸೂರು ಜಿಲ್ಲಾಡಳಿತ ನೀಡಿರುವ ಅಧಿಕೃತ ಸೋಂಕಿತರ ವರದಿಯಲ್ಲಿ ಕಳೆದ 10 ದಿನದಲ್ಲಿ 769 ಪ್ರಕರಣ ಪತ್ತೆಯಾಗಿದ್ದು, ಸದ್ಯಕ್ಕೆ ದೊಡ್ಡ ಮಟ್ಟದ ಸಮಸ್ಯೆ ಕಂಡು ಬಂದಿಲ್ಲ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿಬಂದಿರುವುದರ ನಡುವೆಯೇ, ಮಕ್ಕಳಲ್ಲಿ ಅಸಿಮ್ಟಮ್ಯಾಟಿಕ್ ಲಕ್ಷಣಗಳು ಕಂಡುಬರುತ್ತಿರುವುದು ಮುಂದೆ ಈ ಸಂಖ್ಯೆ ಹೆಚ್ಚಾಗುವ ಆತಂಕವನ್ನು ತಂದೊಡ್ಡಿದೆ.
"ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ಈಗಾಗಲೇ ನಾವು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದವೆ. ಒಂದು ತಿಂಗಳ ಹಿಂದೆಯೇ 23 ಮಂದಿ ಮಕ್ಕಳ ತಜ್ಞರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಈಗಾಗಲೇ ಮೈಸೂರಿನಲ್ಲಿ ಒಂದು ಕಾಮನ್ ಫೇಸಿಲಿಟಿ ಇರುವ 500 ಬೆಡ್ನ ಕ್ಯಾಂಪಸ್ ಹುಡುಕುತ್ತಿದ್ದೇವೆ,'' ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಸೋಂಕಿನಿಂದ ಬಂದು ಅಡ್ಮಿಟ್ ಆಗಬಾರದು
"ಇದಕ್ಕೆ ಈಗಾಗಲೇ ನಮ್ಮ ಟ್ರಾಮಾ ಸೆಂಟರ್, ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಒಂದೇ ಕ್ಯಾಂಪಸ್ನಲ್ಲಿ ಬರುತ್ತವೆ. ಇಲ್ಲಿಯೇ ಸಿದ್ಧತೆ ಮಾಡುತ್ತಿದ್ದು, ಮಕ್ಕಳ ವೆಂಟಿಲೇಟರ್ ಯಾವ ರೀತಿಯಲ್ಲಿ ಬೇಕಾಗಲಿವೆ ಎಂಬ ಬಗ್ಗೆ ಯೋಚಿಸಿದ್ದೇವೆ,'' ಎಂದಿದ್ದಾರೆ.
"ಮೂರು ವರ್ಷದ ಒಳಗಿನ ಮಕ್ಕಳಿಗೆ ನಿಯೋ ವೆಂಟಿಲೇಟರ್ ಬೇಕಾಗಿದ್ದು, ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಾಮಾನ್ಯ ವೆಂಟಿಲೇಟರ್ ಸಾಕಾಗಲಿದೆ ಎಂಬ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಯಾವುದೇ ಮಕ್ಕಳು ಸಹ ಸೋಂಕಿನಿಂದ ಬಂದು ಅಡ್ಮಿಟ್ ಆಗಬಾರದು ಅನ್ನುವ ಯೋಚನೆ ಇದ್ದು, ಆ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ,'' ಎಂದರು.

ಸಾವಿನ ಪ್ರಮಾಣ ಕಡಿಮೆಯಾಗಿದೆ
"ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು, ನಾಲ್ಕು ದಿನಗಳಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಮಾತ್ರವಲ್ಲ, ಪಾಸಿಟಿವ್ ಪ್ರಕರಣಗಳು ಸಹ ಕಡಿಮೆಯಾಗಿದೆ,'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ತಿಳಿಸಿದ್ದಾರೆ.
"ಆಸ್ಪತ್ರೆಗಳಲ್ಲಿ ದಾಖಲಾಗಿ ಬಂದು ಸತ್ತ ವ್ಯಕ್ತಿಗಳ ಮಾಹಿತಿ ನಮ್ಮಲ್ಲಿ ಹಾಗೂ ವಾರ್ ರೂಂನಲ್ಲಿ ಇರುತ್ತದೆ. ಆದರೆ, ಕೆಲವು ಹಳ್ಳಿಗಾಡುಗಳಲ್ಲಿ ಆಸ್ಪತ್ರೆಗಳಿಗೆ ಬರದೆ ಇರುವವರು ಈ ರೀತಿ ಸಾವನ್ನಪ್ಪಿದರೆ ನಮ್ಮಲ್ಲಿ ಮಾಹಿತಿ ಇರುವುದಿಲ್ಲ. ಹೀಗಾಗಿ ಅದನ್ನು ಪರಾಮರ್ಶೆ ಮಾಡಿ ದಾಖಲೆ ಮಾಡುತ್ತಿದ್ದೇವೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸ ಜಿಲ್ಲೆಯ ಜನನ ಮತ್ತು ಮರಣ ಪ್ರಮಾಣ ದಾಖಲೆಗಳ ಮಾಹಿತಿ ಪಡೆದಿದ್ದೇನೆ,'' ಎಂದು ಹೇಳಿದರು.

ಸಾವಿನ ಪ್ರಮಾಣದಲ್ಲಿ ಹೆಚ್ಚು ಸ್ಪಷ್ಟತೆ ಇಲ್ಲ
"ಜನನ ಮತ್ತು ಮರಣ ಪ್ರಮಾಣ ಏನಾಗಿದೆ ಎಂಬುದನ್ನು ನೋಡಿ ಸರ್ಕಾರಕ್ಕೆ ಮಾಹಿತಿ ನೀಡುತ್ತೇನೆ. ಉದ್ದೇಶ ಪೂರ್ವಕವಾಗಿ ಸಾವಿನ ಪ್ರಮಾಣ ಮುಚ್ಚಿಡಲಾಗಿದೆ ಎನ್ನುವುದು ಕಂಡುಬರುತ್ತಿಲ್ಲ. ಕೆಲವು ಬಾರಿ ಸೋಂಕಿತರು ಡಿಸ್ಚಾರ್ಜ್ ಆದ ಬಳಿಕ ಹಾಗೂ ಕೆಲವರು ಆಸ್ಪತ್ರೆಗೆ ಬರುವ ಮುನ್ನ ಸಾವನ್ನಪ್ಪಿದ್ದಾರೆ. ಹಾಗಾಗಿ ಸಾವಿನ ಪ್ರಮಾಣದಲ್ಲಿ ಹೆಚ್ಚು ಸ್ಪಷ್ಟತೆ ಇಲ್ಲವಾಗಿದೆ,'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಸ್ಪಷ್ಟಪಡಿಸಿದರು.












Click it and Unblock the Notifications