ಸೋತವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರ: ಸೋಮಶೇಖರ್
ಮೈಸೂರು, ಜನವರಿ 25: ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪ ಅವರ ಪರಮಾಧಿಕಾರ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಸೋಮಶೇಖರ್, ಚುನಾವಣೆಯಲ್ಲಿ ಗೆದ್ದ ಮೇಲೆ ಯಾವಾಗ ಬೇಕಾದರೂ ಸಂಪುಟ ವಿಸ್ತರಣೆ ಮಾಡಬಹುದು, ಇಂತಹದೇ ದಿನ ಮಾಡಿ ಎಂದು ಹೇಳುವುದು ಸರಿಯಲ್ಲ ಎಂದರು.
ಉಪ ಚುನಾವಣೆಯಲ್ಲಿ ಸೋತವರಿಗೆ ಈ ಹಿಂದೆಯೇ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಅಂತ ಹೇಳಿದ್ದರು. ಆಗಲೇ ಸೋಲುವ ಮುನ್ಸೂಚನೆ ದೊರೆತಿತ್ತು. ಆದರೂ ಮುಖ್ಯಮಂತ್ರಿಗಳ ಮಾತು ಕೇಳದೇ ಚುನಾವಣೆಗೆ ಸ್ಪರ್ಧಿಸಿದರು ಎಂದು ಸೋಮಶೇಖರ್ ತಿಳಿಸಿದರು.

ರಾಣೇಬೆನ್ನೂರಿನ ಆರ್.ಶಂಕರ್ ಮಾತ್ರ ಚುನಾವಣೆ ನಿಲ್ಲದೇ ತಟಸ್ಥ ನಿಲುವು ಅನುಸರಿಸಿದ್ದರು. ಅವರಿಗೆ ಮೇ ತಿಂಗಳಿನಲ್ಲಿ ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡುತ್ತಾರೆ ಎಂದು ಹೇಳಿದರು.
ಆದರೆ ಕೆಲವರು ಸೋಲುವ ಮುನ್ಸೂಚನೆ ಇದ್ದರೂ ಕೂಡಾ ಉಪ ಚುನಾವಣೆಗೆ ನಿಂತು ಸೋತಿದ್ದಾರೆ, ಅಂತವರಿಗೆ ಸಚಿವ ಸ್ಥಾನ ನೀಡಿ ಎಂದು ಕೇಳುವುದು ತಪ್ಪಾಗುತ್ತದೆ ಎಂದು ಪರೋಕ್ಷವಾಗಿ ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್ಗೆ ಮಾತಿನ ಚಾಟಿ ಬೀಸಿದರು.
ಶಾಸಕ ಎಸ್.ಟಿ.ಸೋಮಶೇಖರ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಅನರ್ಹ ಶಾಸಕ ಎಚ್.ವಿಶ್ವನಾಥ್, ""ಸಚಿವ ಸಂಪುಟದಲ್ಲಿ ನಮಗೆ ಸ್ಥಾನವಿದೆ. ಸಿಎಂ ಯಡಿಯೂರಪ್ಪ ಚುನಾವಣಾ ಪೂರ್ವವಾಗಿ ನಮಗೆ ಮಾತು ನೀಡಿದ್ದಾರೆ, ಅದರಂತೆ ನಡೆದುಕೊಳ್ಳುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.
ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ವಿಶ್ವನಾಥ್, ಯಡಿಯೂರಪ್ಪರ ಸಂಪುಟದಲ್ಲಿ ನಾನೂ ಕೂಡ ಇರ್ತಿನಿ ಅನ್ನೋ ವಿಶ್ವಾಸವ್ಯಕ್ತಪಡಿಸಿದರು.
2014 ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಸೋತಿದ್ದರು, ಆದರೂ ಸಹ ಅವರ ಹಿರಿತನಕ್ಕೆ ಮಣೆ ಹಾಕಿ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿ ಅವರ ಅನುಭವ ಉಪಯೋಗಿಸಿಕೊಂಡಿದ್ದಾರೆ ಎಂದರು.
ಅರುಣ್ ಜೇಟ್ಲಿ ಅದರಂತೆ ನಮ್ಮನ್ನೂ ಸಂಪುಟಕ್ಕೆ ಸೇರಿಸಿಕೊಂಡು ನಮ್ಮ ಅನುಭವ ಬಳಸಿಕೊಳ್ಳಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್.ವಿಶ್ವನಾಥ್ ಸಲಹೆ ನೀಡಿದರು.
ಚುನಾವಣೆಗೆ ನಿಲ್ಲಬೇಡಿ ಎಂದಿದ್ದು ನಿಜ, ಆದರೆ ಕ್ಷೇತ್ರ ಬಿಟ್ಟು ಕೊಡುವುಕ್ಕೆ ಆಗುತ್ತಾ.? ಹಾಗಾಗಿ ಚುನಾವಣೆಗೆ ಸ್ಪರ್ಧಿಸಿದೆ, ಗೆಲುವು-ಸೋಲು ಸಹಜ ಎಂದು ಹೇಳಿದರು.












Click it and Unblock the Notifications