ಅತಿ ಬುದ್ಧಿವಂತರ ಜೊತೆ ಕೆಲಸ ಮಾಡಲಾಗುವುದಿಲ್ಲ: ಪ್ರತಾಪ್ ಸಿಂಹ ವಿರುದ್ಧ ಬೊಮ್ಮಾಯಿ ಅಸಮಾಧಾನ
ಮೈಸೂರು, ಜುಲೈ 20: ಪಿಎಂ ಹಾದಿಯಾಗಿ ಸಿಎಂವರೆಗೆ ಸಂಸದ ಪ್ರತಾಪಸಿಂಹ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆಯೇ ಎಂಬ ಅನುಮಾನ ಮಂಗಳವಾರ ಬೆಂಗಳೂರಿನಲ್ಲಿ ನಡೆದ ದಸರಾ ಉನ್ನತಮಟ್ಟದ ಸಭೆಯಲ್ಲಿ ಮೂಡಿದೆ. ಮಹಾರಾಜರು ನಂತರ ಮೈಸೂರು ಅಭಿವೃದ್ಧಿ ಮಾಡಿದ್ದು ನಾನೇ ಎಂದು ಜಂಭ ಕೊಚ್ಚಿಕೊಳ್ಳುವ ಪ್ರತಾಪ್ ಸಿಂಹರಿಗೆ ಒಂದಾದರ ಮೇಲೆ ಒಂದರಂತೆ ಹೊಡೆತಗಳು ಬೀಳುತ್ತಿವೆ.
ನರೇಂದ್ರ ಮೋದಿಯನ್ನು ಮೈಸೂರಿಗೆ ಕರೆ ತರುವ ವಿಚಾರದಲ್ಲೂ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ನಡುವೆ ಕ್ರೆಡಿಟ್ ವಾರ್ ನಡೆದಿತ್ತು. ಆದರೆ, ಮೈಸೂರಿಗೆ ಮೋದಿ ಬಂದಾಗ ಪ್ರತಾಪಸಿಂಹ ಅವರನ್ನು ಕ್ಯಾರೆ ಎಂದಿರಲಿಲ್ಲ. ಆದರೆ, ಶಾಸಕ ರಾಮದಾಸ್ ಅವರನ್ನು ಕರೆದು ಪ್ರೀತಿ ಗುದ್ದು ಕೊಟ್ಟು ವಾತ್ಸಲ್ಯ ತೋರಿಸಿದ್ದರು. ಇದೀಗ ಸಿಎಂ ಕೂಡ ಪ್ರತಾಪಸಿಂಹ ವಿರುದ್ಧ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ.
ಅಷ್ಟಕ್ಕೂ ನಡೆದಿದ್ದು ಏನು?
ಮಂಗಳವಾರ ಬೆಂಗಳೂರಿನಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಸಭೆ ನಡೆದಿದೆ. ಈ ವೇಳೆ ಸಂಸದರು ಕ್ಷೇತ್ರಕ್ಕೆ ಸಂಬಂಧ ಪಟ್ಟ ದಾಖಲೆಯೊಂದನ್ನು ಸಿಎಂಗೆ ನೀಡಿದ್ದಾರೆ. ಅದನ್ನು ಓದುವಾಗಲೇ ನಿಮ್ಮ ಜೊತೆಗೆ ಫೋಟೋ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಬೊಮ್ಮಾಯಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ.

"ವಿಶ್ವಾಸವಿಲ್ಲದಿದ್ದರೆ ಇದನ್ನು ತೆಗೆದುಕೊಂಡು ಹೋಗಿ" ಎನ್ನುತ್ತಾರೆ. ನಂತರ ಮಾತು ಬದಲಿಸಿದ ಸಿಂಹ, ಮತ್ತೆ ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಇದಕ್ಕೆ ಖಡಕ್ ಆಗಿಯೇ ಪ್ರತಿಕ್ರಿಯಿಸಿದ ಸಿಎಂ, ನನ್ನ ಜತೆ ಫೋಟೋ ಬೇಡ ಎಂದು ಹೇಳಿ, ಅತೀ ಬುದ್ಧಿವಂತರ ಜತೆ ಕೆಲಸ ಮಾಡುವುದು ಕಷ್ಟ ಎಂದು ಪಕ್ಕದಲ್ಲಿ ಕುಳಿತಿದ್ದ ಸಹಕಾರ ಸಚಿವ ಎಸ್ಟಿ ಸೋಮಶೇಖರ್ಗೆ ಹೇಳಿತ್ತಾರೆ. ಸಿಎಂ ಹೀಗೆ ಹೇಳಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಈ ಘಟನೆ ಸಂಸದ ಪ್ರತಾಪ್ ಸಿಂಹ ರನ್ನು ಪಕ್ಷದ ನಾಯಕರು ಕಡೆಗಣಿಸುತ್ತಿದ್ದಾರಾ? ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಈ ಘಟನೆ ನಂತರ ಇಂದು ಕಬಿನಿಗೆ ಬಾಗಿನ ಅರ್ಪಿಸಲು ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಿದ್ದರು. ಚಾಮುಂಡಿ ಬೆಟ್ಟ, ಕಬಿನಿ ಹಾಗೂ ಕೆಆರ್ಎಸ್ ಮೂರು ಕಡೆ ನಡೆಸ ಸಿಎಂ ಕಾರ್ಯಕ್ರಮಗಳಲ್ಲಿ ಪ್ರತಾಪಸಿಂಹ ಭಾಗವಹಿಸಿದಿರುವುದು ಭಿನ್ನಾಭಿಪ್ರಾಯ ಮೂಡಿರುವ ಅನುಮಾನ ಮೂಡಿಸಿದೆ.












Click it and Unblock the Notifications