ಮೈಸೂರು ಬೆಟ್ಟದಲ್ಲಿ ಆಪರೇಷನ್ ಚಾಮುಂಡಿ: ಪ್ರೇಮಿಗಳಿಗೆ ಪೀಕಲಾಟ
ಮೈಸೂರು, ಜನವರಿ 18: ಚಾಮುಂಡಿ ಬೆಟ್ಟ ಪ್ರದೇಶ ಸಂಜೆ ನಂತರ ಪುಂಡು ಪೋಕರಿಗಳ ತಾಣವಾಗುತ್ತಿದ್ದು, ಆಪರೇಷನ್ ಚಾಮುಂಡಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಪ್ರಸ್ತುತ 70 ರಿಂದ 80 ಜೋಡಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಯುವತಿಯರಿಗೆ ಬುದ್ಧಿ ಮಾತನ್ನೂ ಹೇಳಿದ್ದಾರೆ.
ಸಂಜೆಯ ನಂತರ ಚಾಮುಂಡಿ ಬೆಟ್ಟದ ಪ್ರದೇಶ ಪುಂಡು ಪೋಕರಿಗಳ ತಾಣವಾಗುವುದನ್ನು ತಪ್ಪಿಸಲು ಕೃಷ್ಣರಾಜ ಠಾಣಾ ಪೊಲೀಸರು ಆರಂಭಿಸಿರುವ ಆಪರೇಷನ್ ಚಾಮುಂಡಿ' ಕಾರ್ಯಾ ಚರಣೆಯ ಕಳೆದ 6 ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿ, ವಿದ್ಯಾರ್ಥಿನಿ ಯರೇ ಸಿಕ್ಕಿಬಿದ್ದಿದ್ದು, ಸದ್ಯಕ್ಕೆ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಅದರೆ ಪುಂಡರು ರಾತ್ರಿ 12ಗಂಟೆವರೆಗೆ ತಂಗಿ ನಂತರ ಮನೆಗೆ ಬರುತ್ತಿರುವುದು ಪೊಲೀಸರ ನಿದ್ದೆಗೆಡಿಸಿದೆ.[ಮಳೆಗಾಗಿ ಚಾಮುಂಡಿ ಬೆಟ್ಟದ ಮಹಾನಂದಿಗೆ ಮಹಾಭಿಷೇಕ]
ಇದೀಗ ದೂರುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಪರೇಷನ್ ಚಾಮುಂಡಿ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಆರಂಭಿಸಿರುವ ಪೊಲೀಸರು, ಕಳೆದ 1 ತಿಂಗಳ ಅವಧಿಯಲ್ಲಿ ಸುಮಾರು 10 ಬಾರಿ ಚಾಮುಂಡಿ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಯಾರ ಅರಿವೂ ಇಲ್ಲದೆ ವಿಹರಿಸುತ್ತಿದ್ದ ಸುಮಾರು 70 ರಿಂದ 80 ಜೋಡಿಗಳನ್ನು ವಶಕ್ಕೆ ಪಡೆದು ಅವರಲ್ಲಿನ ಯುವಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಯುವತಿಯರಿಗೆ ಬುದ್ಧಿವಾದ ಹೇಳಿರುವ ಪೊಲೀಸರು ಅವರ ಪೋಷಕರ ಹೆಸರು, ಮನೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪಡೆದು, ಮತ್ತೊಮ್ಮೆ ಈ ರೀತಿ ಸಿಕ್ಕಿಬಿದ್ದರೆ ಪೊಲೀಸ್ ಠಾಣೆಗೆ ನಿಮ್ಮ ಪೋಷಕರನ್ನು ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.[ಚಾಮುಂಡಿಬೆಟ್ಟದಲ್ಲಿ ಯುವರಾಜ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ]
ಚಾಮುಂಡಿಬೆಟ್ಟದಲ್ಲಿ ಚಿರತೆ ಸೇರಿ ಇತರೆ ಪ್ರಾಣಿಗಳಿರುವುದರಿಂದ, ರಾತ್ರಿ ವೇಳೆ ಅಲ್ಲಿರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಅಪಾಯವನ್ನೂ ಕಾಲೇಜು ಆಡಳಿತ ಮಂಡಳಿಗಳಿಗೆ ತಿಳಿಸಿರುವ ಪೊಲೀಸರು, ಸಂಜೆಯ ನಂತರ ಬೆಟ್ಟದ ಆವರಣದಲ್ಲಿ ಸಂಚರಿಸದಂತೆ ನಿಮ್ಮ ನಿಮ್ಮ ವಿದ್ಯಾರ್ಥಿಗಳಿಗೆ ಸೂಚನೆ ನೀಡಬೇಕೆಂದೂ ಮನವಿ ಮಾಡಿದ್ದಾರೆ. ಕಾಲೇಜುಗಳಲ್ಲಿಯೂ ಪ್ರಕಟಣೆಯನ್ನು ಜಾರಿ ಮಾಡಿದ್ದು ವಿದ್ಯಾರ್ಥಿಗಳಿಗೆ ಸೂಚನೆಯನ್ನು ನೀಡಿವೆ. ಪ್ರೇಮಿಗಳಿಗೆ ಇನ್ನು ಪೀಕಲಾಟ ಪ್ರಾರಂಭವಾಗಿದೆ.
ಸದ್ಯದಲ್ಲಿಯೇ ಗೇಟ್ ಅಳವಡಿಕೆ: ಚಾಮುಂಡಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳಿಗೆ ಗೇಟ್ ಅಳವಡಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಆದಷ್ಟು ಶೀಘ್ರದಲ್ಲಿ ಗೇಟ್ ಅಳವಡಿಸುವ ಕೆಲಸ ಆರಂಭವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಉತ್ತನಹಳ್ಳಿ, ತಾವರೆಕಟ್ಟೆ ಹಾಗೂ ಲಲಿತಾದ್ರಿಪುರ ರಸ್ತೆಯ ಭಾಗದ ರಸ್ತೆಗಳಿಗೆ ಗೇಟ್ ಅಳವಡಿಸಲಾಗುತ್ತಿದ್ದು, ರಾತ್ರಿ 9 ಗಂಟೆಯ ನಂತರ ಮುಖ್ಯ ದ್ವಾರವನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ. ಒಟ್ಟಾರೆ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ಬಂದಿರುವುದಂತೂ ಸತ್ಯ.