ಸುಣ್ಣದ ಭಟ್ಟಿಯಲ್ಲಿ ನಿಂತೇ ಹೋಯ್ತು ಹೊಗೆ, ಸಂಕಷ್ಟದ ಸುಳಿಯಲ್ಲಿ ಸಿಲುಕಿದ ಸುಣ್ಣಗಾರರ ಬದುಕು
ಮೈಸೂರು, ಆಗಸ್ಟ್, 18: ಕಾಲ ಬದಲಾಗಿ ತಂತ್ರಜ್ಞಾನಗಳು ಬೆಳೆಯುತ್ತಿದ್ದಂತೆಯೇ ತಲಾ ತಲಾಂತರದಿಂದ ಬಂದಿದ್ದ ದೇಸಿ ಕಸುಬುಗಳು ನಿಧಾನವಾಗಿ ಮೂಲೆಗುಂಪಾಗುತ್ತವೆ. ಇವತ್ತಿನ ದುಬಾರಿ ಮತ್ತು ಫ್ಯಾಷನ್ ಯುಗದಲ್ಲಿ ಜನ ಹೊಸತನ್ನು ಇಷ್ಟಪಡುತ್ತಿರುವುದರಿಂದ ಹಿಂದಿನಿಂದಲೂ ಜೀವನೋಪಾಯಕ್ಕಾಗಿ ಕಂಡುಕೊಂಡಿದ್ದ ಉದ್ಯೋಗಗಳಿಂದ ಬದುಕು ಸಾಗಿಸುವುದು ಅಸಾಧ್ಯ ಎಂದರಿತ ಬಹುತೇಕರು ಪರ್ಯಾಯ ಕೆಲಸಗಳನ್ನು ಹುಡುಕಿಕೊಂಡಿದ್ದಾರೆ. ಇವರ ಪೈಕಿ ಕಲ್ಲು ಸುಟ್ಟು ಸುಣ್ಣ ತಯಾರು ಮಾಡುವ ಸುಣ್ಣಗಾರರು ಕೂಡ ಹೊರತಾಗಿಲ್ಲ.
ಕೆಲವು ದಶಕಗಳ ಹಿಂದೆ ಅಲ್ಲಲ್ಲಿ ಕಲ್ಲುಗಳನ್ನು ಸುಟ್ಟು ಸುಣ್ಣ ತಯಾರು ಮಾಡುವವರು ಕಂಡುಬರುತ್ತಿದ್ದರು. ಈಗ ಅವರು ಕಾಣುತ್ತಿಲ್ಲ. ಕಾರಣ ಈ ಕಸುಬಿನಿಂದ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬುದು ಗೊತ್ತಾಗಿದೆ. ಜೊತೆಗೆ ಜನ ಕಾರ್ಖಾನೆ ಸುಣ್ಣದತ್ತ ಮುಖ ಮಾಡಿರುವುದರಿಂದ ಮುಂದೆ ಇದರಿಂದ ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬುದು ತಿಳಿದ ಮೇಲೆ ಅದನ್ನು ಮುಂದುವರೆಸಲು ಯುವ ಜನರು ಮುಂದೆ ಬಾರದಿರುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸುಣ್ಣ ತಯಾರು ಮಾಡುವ ಕೆಲಸಕ್ಕೆ ವಿದಾಯ ಹೇಳಲಾಗುತ್ತಿದೆ.

ಮೊದಲೆಲ್ಲ ನಗರಗಳಲ್ಲಿ ಅಲ್ಲಲ್ಲಿ ದೇಸಿ ಸುಣ್ಣ ಮಾರಾಟ ಮಾಡುವವರು ಕಾಣಿಸುತ್ತಿದ್ದರು. ಈಗ ಬೇಡಿಕೆಯಿಲ್ಲದ ಕಾರಣದಿಂದ ಅವುಗಳ ಮಾರಾಟ ಕಾಣಿಸುತ್ತಿಲ್ಲ. ದೇಸಿ ಸುಣ್ಣಗಳನ್ನು ಖರೀದಿಸುವವರೇ ಇಲ್ಲ ಎಂದ ಮೇಲೆ ಅದನ್ನು ತಯಾರು ಮಾಡುವವರು ತಾನೆ ಏನು ಮಾಡಬೇಕು? ದೂರದ ಊರುಗಳಿಂದ ಮಣ್ಣಿನಡಿ ಸಿಗುವ ಕಲ್ಲುಗಳನ್ನು ತಂದು ಭಟ್ಟಿಕಟ್ಟಿ ಸುಟ್ಟು ಶ್ರಮಪಟ್ಟರೂ ಅದರಿಂದ ಯಾವುದೇ ಲಾಭವಿಲ್ಲ ಎನ್ನುವುದಾದರೆ ಆ ಕೆಲಸವನ್ನು ಏಕೆ ಮಾಡಬೇಕು? ಹೀಗಾಗಿ ಬಹಳಷ್ಟು ವೃತ್ತಿ ನಿರತರು ಅದರಿಂದ ವಿಮುಖವಾಗಿ ಬೇರೆ ಕೆಲಸಗಳನ್ನು ಹುಡುಕಿಕೊಂಡಿದ್ದಾರೆ.
ಸಂಕಷ್ಟದ ಸುಳಿಯಲ್ಲಿ ಸುಣ್ಣಗಾರರು
ಮೈಸೂರು ಜಿಲ್ಲೆಯಲ್ಲಿ ಹಲವು ಕಡೆ ಸುಣ್ಣ ತಯಾರು ಮಾಡುವವರು ಇದ್ದರಾದರೂ ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಅದನ್ನು ಬಿಟ್ಟುಬಿಟ್ಟಿದ್ದಾರೆ. ಈ ನಡುವೆ ಇತ್ತೀಚೆಗಿನ ವರ್ಷಗಳವರೆಗೂ ಹುಣಸೂರು ಪಟ್ಟಣದ ಹೊರ ವಲಯದ ಪಿರಿಯಾಪಟ್ಟಣದ ಕಡೆಗೆ ತೆರಳುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ವೃತ್ತಾಕಾರದ ಭಟ್ಟಿ ಕಟ್ಟಿ ಸುಣ್ಣ ಬೇಯಿಸುವ ಒಲೆಗಳು ಕಾಣುತ್ತಿದ್ದವು.
ಆದರೆ ಈಗ ಅಲ್ಲಿನ ಭಟ್ಟಿಗಳಲ್ಲಿ ಹೊಗೆಯಾಡುತ್ತಿಲ್ಲ. ಕಾರಣ ಹಿಂದಿನಿಂದಲೂ ವೃತ್ತಿ ಮಾಡಿಕೊಂಡು ಬಂದವರಿಗೆ ಈಗ ವಯಸ್ಸಾಗಿದೆ. ಇನ್ನು ಕೆಲವರು ಮೃತಪಟ್ಟಿದ್ದಾರೆ. ಈಗಿನವರಿಗೆ ಅದನ್ನು ನಿಭಾಯಿಸುವುದು ಕಷ್ಟವಾಗಿದೆ. ಹಾಗಾಗಿ ಅದರಿಂದ ದೂರ ಉಳಿದಿದ್ದಾರೆ.
ಇಷ್ಟಕ್ಕೂ ಸುಣ್ಣಗಾರರು ಸುಣ್ಣ ತಯಾರಿಸುವ ಕೆಲಸದಿಂದ ಏಕೆ ದೂರವಾದರು ಎಂಬುದನ್ನು ನೋಡುತ್ತಾ ಹೋದರೆ ಅವರ ಕೆಲಸದ ಹಿಂದಿರುವ ಸಂಕಷ್ಟಗಳು ಎದ್ದುಕಾಣಿಸುತ್ತವೆ. ಈ ಕೆಲಸದಿಂದ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡುವುದು ಕಷ್ಟ ಎಂಬುದು ಗೊತ್ತಾಗಿ ಬಿಡುತ್ತದೆ.
ಹಿಂದಿನ ಕಾಲದಲ್ಲಿ ಎಲೆ ಅಡಿಕೆಗೆ ಮತ್ತು ಮನೆಗಳ ಗೋಡೆಗೆ ಬಳಿಯಲು, ಕೃಷಿ ಜಮೀನಿಗೆ ಇದೇ ಸುಣ್ಣವನ್ನು ಬಳಸುತ್ತಿದ್ದರು. ಹೀಗಾಗಿ ಸುಣ್ಣಗಾರರು ತಯಾರಿಸುವ ಸುಣ್ಣಕ್ಕೆ ಆಗ ಬೇಡಿಕೆಯಿತ್ತು. ಈಗ ಫ್ಯಾಕ್ಟರಿಗಳು ಬಂದಿವೆ. ಎಲ್ಲದಕ್ಕೂ ಕಂಪನಿ ಸುಣ್ಣವನ್ನೇ ಬಳಸುತ್ತಾರೆ. ಇದರಿಂದ ದೇಸಿ ಸುಣ್ಣವನ್ನು ಕೇಳುವವರೇ ಇಲ್ಲದಂತಾಗಿದೆ.
ಆಧುನಿಕ ಸುಣ್ಣಕ್ಕೆ ಪೈಪೋಟಿ ಅಸಾಧ್ಯ
ಇನ್ನು ಸುಣ್ಣ ತಯಾರಿಸಲು ಬೇಕಾಗುವ ಕಲ್ಲುಗಳು ಸ್ಥಳೀಯವಾಗಿ ಸಿಗುವುದಿಲ್ಲ. ಅವುಗಳನ್ನು ದೂರದಿಂದ ಹಣ ನೀಡಿ ತರಬೇಕಾಗುತ್ತದೆ. ಅಷ್ಟೇ ಅಲ್ಲದೆ ಅದನ್ನು ಬೇಯಿಸಲು ಸೌದೆ ಬೇಕಾಗುತ್ತದೆ. ಹಿಂದಿನ ದಿನಗಳಲ್ಲಿ ಸುಣ್ಣದ ಕಲ್ಲು ಮತ್ತು ಸೌದೆ ಎಲ್ಲವೂ ಸ್ಥಳೀಯವಾಗಿ ಸಿಗುತ್ತಿತ್ತು. ಹೀಗಾಗಿ ನಷ್ಟವಾಗುತ್ತಿರಲಿಲ್ಲ.
ಆದರೆ ಈಗ ಎಲ್ಲವನ್ನು ಹಣ ನೀಡಿ ತರಬೇಕಾಗುತ್ತಿದ್ದು, ಬಂಡವಾಳ ಸುರಿದು ಸುಣ್ಣ ತಯಾರಿಸುವುದು ದೊಡ್ಡ ಸವಾಲಾಗಿದೆ. ಒಂದು ಟ್ರ್ಯಾಕ್ಟರ್ ಸುಣ್ಣದ ಕಲ್ಲುಗಳನ್ನು ಬೇಯಿಸಿದರೆ 100-110 ಮೂಟೆ ಸುಣ್ಣ ಬರುತ್ತದೆ. ಇದರಲ್ಲಿ ಕಚ್ಚಾ ಸುಣ್ಣ ಕಳೆದು ಶುದ್ಧವಾದ ಹರಳು ಸುಣ್ಣ 70-80 ಮೂಟೆ ಸಿಗುತ್ತದೆಯಂತೆ.
ಇನ್ನು ಕನಿಷ್ಠ ಮೂವತ್ತು ಮೂಟೆ ಸುಣ್ಣ ಬೇಯಿಸಲು 10 ಪ್ಲ್ಯಾಸ್ಟಿಕ್ ಚೀಲಗಳಷ್ಟು ಸೌದೆ, ಇದ್ದಿಲು ಬೇಕಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಇದೆಲ್ಲವನ್ನು ಹಣಕೊಟ್ಟು ಖರೀದಿಸಬೇಕು. ಇಷ್ಟೆಲ್ಲ ಕಷ್ಟಪಟ್ಟು ಸುಣ್ಣ ತಯಾರಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಏಕೆಂದರೆ ಮೊದಲಿನಂತೆ ಸುಣ್ಣಕ್ಕೆ ಬೇಡಿಕೆಯಿಲ್ಲದಾಗಿದೆ. ಎಲೆ ಅಡಿಕೆ ತಿನ್ನುವವರು ಮಾತ್ರ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಚಿಕ್ಕ ಪೊಟ್ಟಣ ಮಾಡಿ ಮಾರಾಟ ಮಾಡಬೇಕು. ಸಂತೆಗಳಿಗೆ ಹೋಗಿ ಮಾರಾಟ ಮಾಡಿದರೂ ಸುವಾಸನೆ ಮತ್ತು ಬಣ್ಣದ ಆಧುನಿಕ ಸುಣ್ಣಕ್ಕೆ ಪೈಪೋಟಿ ನೀಡುವುದು ಕಷ್ಟವಾಗುತ್ತಿದೆ.
ಸುಣ್ಣದ ಭಟ್ಟಿಗಳಲ್ಲಿ ಹೊಗೆ ನಿಂತು ಹೋಗಿದೆ
ಈ ಹಿಂದೆ ಕೃಷಿಗೆ ಸುಣ್ಣವನ್ನು ರೈತರು ಖರೀದಿಸುತ್ತಿದ್ದರು. ಆದರೆ ಫ್ಯಾಕ್ಟರಿಯಿಂದ ಬರುವ ಸುಣ್ಣಗಳು ಕಡಿಮೆ ದರದಲ್ಲಿ ದೊರೆಯುವುದರಿಂದ ಗೊಬ್ಬರ ಖರೀದಿಸುವಾಗಲೇ ಸುಣ್ಣವನ್ನು ಅಂಗಡಿಗಳಿಂದ ರೈತರು ಖರೀದಿಸುವುದರಿಂದ ದೇಸಿ ಸುಣ್ಣಕ್ಕೆ ಬೇಡಿಕೆ ಕಡಿಮೆಯಾಗಿದೆ.
ಹೀಗೆ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿರುವ ಸುಣ್ಣಗಾರರು ತಮ್ಮ ವೃತ್ತಿಗೆ ವಿದಾಯ ಹೇಳುತ್ತಿದ್ದಾರೆ. ಇದರಿಂದಾಗಿ ಸದಾ ಹೊಗೆಯಾಡುತ್ತಿದ್ದ ಸುಣ್ಣದ ಭಟ್ಟಿಗಳಲ್ಲಿ ಹೊಗೆ ನಿಂತಿದೆ. ಮುಂದಿನ ತಲೆಮಾರಿಗೆ ಸುಣ್ಣವನ್ನು ಹೀಗೂ ತಯಾರಿಸುತ್ತಿದ್ದರು ಎಂಬುದು ಕೌತುಕವಾಗಿ ಉಳಿಯಲಿದೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications