ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಲ್ಲಿ ಮಾ.25 ರಂದು ನಾಮಪತ್ರ ಸಲ್ಲಿಸಲಿರುವ ವಿಜಯಶಂಕರ್
ಮೈಸೂರು, ಮಾರ್ಚ್ 24:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿಯ ಪ್ರತಾಪ ಸಿಂಹ ಹಾಗೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ನಡುವೆ ನೇರಾ -ನೇರ ಸ್ಪರ್ಧೆ ನಡೆಯಲಿದೆ. ಸಿ.ಎಚ್.ವಿಜಯಶಂಕರ್ ಅವರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.
ವಿಜಯಶಂಕರ್ ಅವರು ಮೈತ್ರಿ ಅಭ್ಯರ್ಥಿಯಾಗಿ ನಾಳೆ (ಮಾರ್ಚ್ 25)ರಂದು ನಾಮಪತ್ರ ಸಲ್ಲಿಸಲಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ರಾಲಿ ನಡೆಯಲಿದೆ. ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಈ ಕುರಿತು ಮಾತನಾಡಿದ ವಿಜಯ್ ಶಂಕರ್, ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದರೆ ಗೆಲುವು ನಿಶ್ಚಿತ. ಲೋಕಸಭೆ ಚುನಾವಣೆಯ ನಂತರವೂ ರಾಜ್ಯದಲ್ಲಿ ಹೊಂದಾಣಿಕೆಯ ರಾಜಕೀಯ ಮುಂದುವರೆಯಬೇಕು. ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 80 ಸ್ಥಾನ ಪಡೆದಿದ್ದರೂ, 30 ಸ್ಥಾನಗಳಿಸಿದ ಜೆಡಿಎಸ್ ಜೊತೆ ಮೈತ್ರಿ ಬೆಳೆಸಿ, ಉದಾತ್ತ ಮನೋಭಾವದಿಂದ ಜೆಡಿಎಸ್ ಗೆ ಅಧಿಕಾರ ನೀಡಿದೆ. ಅವರೊಂದಿಗೆ ಸಹನೆಯಿಂದಲೇ ವರ್ತಿಸುತ್ತಿದ್ದೇವೆ ಎಂದರು.

ಕೋಮುವಾದಿ ಮತ್ತು ಮೂಲಭೂತವಾದಿಗಳನ್ನು ದೂರ ಇಡುವುದಕ್ಕಾಗಿ ಹಾಗೂ ಅವರಿಂದ ದೇಶ ಉಳಿಸುವುದಕ್ಕಾಗಿ ಮೈತ್ರಿ ಸೂತ್ರ ಪಾಲಿಸಿದ್ದೇವೆ ಎಂದ ವಿಜಯಶಂಕರ್, ಬಿಜೆಪಿಯವರು ಕಾಂಗ್ರೆಸ್ ಅವಧಿಯಲ್ಲಾದ ಕೆಲಸವನ್ನು ತಮ್ಮದು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 130 ರಿಂದ 140 ಸ್ಥಾನ ಕಳೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದರು.
ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗದಿದ್ದರೂ, ಒಂದಷ್ಟು ನಾಯಕರು ಜತೆಯಾಗಿ ಸುದ್ದಿಗೋಷ್ಠಿ ಮತ್ತು ಸಮಾವೇಶಗಳನ್ನು ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. 'ನಮ್ಮೊಳಗೆ ಯಾವುದೇ ಗೊಂದಲ ಇಲ್ಲ' ಎಂಬ ಸಂದೇಶ ರವಾನಿಸುವ ಪ್ರಯತ್ನ ನಡೆದಿದೆ.
ಆದರೆ ಮೈಸೂರಿನಲ್ಲಿ ಎರಡೂ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಇದರಿಂದ ಸಾಮಾನ್ಯ ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿನ ಗೊಂದಲ ಇನ್ನೂ ಉಳಿದುಕೊಂಡಿದೆ ಎಂದು ವಿಜಯಶಂಕರ್ ಸ್ಪಷ್ಟಪಡಿಸಿದರು.












Click it and Unblock the Notifications