ದೇವಸ್ಥಾನದ ಪ್ರಸಾದದಲ್ಲೂ ಮೈಸೂರಿನ ಸಿಎಫ್ ಟಿಆರ್ ಐ ತಂತ್ರಜ್ಞಾನ
ಮೈಸೂರು, ಫೆಬ್ರವರಿ 12: ಮೈಸೂರಿನ ಪ್ರತಿಷ್ಠಿತ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ ಟಿಆರ್ಐ) ತಂಡ ಈಗಾಗಲೇ ಗುಣಮಟ್ಟದ ಆಹಾರವನ್ನು ನೀಡಿ ಜನಮೆಚ್ಚುಗೆ ಪಡೆದಿದೆ. ಇದಕ್ಕೆ ಪೂರಕವೆಂಬಂತೆ ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸಾದ ಗೋಧಿ ಹುಗ್ಗಿ ಹಾಗೂ ಅವಧೂತ ದತ್ತಪೀಠದ ಪ್ರಸಾದವನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದೆ.
ಈ ತಿನಿಸುಗಳನ್ನು ಟಿನ್ ರಹಿತ ಉಕ್ಕಿನ ಡಬ್ಬಗಳಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ಅಭಿವೃದ್ಧಿಪಡಿಸಿ ಶೇಖರಿಸುವಂತೆ ಮಾಡಲಾಗಿದೆ. ಗೋಧಿ ಹುಗ್ಗಿಯು ಗೋಧಿಯಿಂದ ತಯಾರಿಸಲ್ಪಡುವ ಪಾಯಸದಂತಹ ಸಿಹಿ ತಿನಿಸು.
ಇಷ್ಟು ದಿನ ಧಾರವಾಡದ ಲತ್ತಿ, ಲಟ್ಟಿ ಫುಡ್ಸ್ ಕಂಪನಿಯು ಈ ತಿನಿಸನ್ನು ತಯಾರಿಸಿ ಮಾರಾಟ ಮಾಡುತ್ತಿತ್ತು. ಅಂತೆಯೇ, ಅವಧೂತ ದತ್ತ ಪೀಠವು ಭಕ್ತರಿಗೆ 'ಪ್ರಸಾದಂ' ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ ಪ್ರಸಾದವನ್ನು ಗೋಧಿಹಿಟ್ಟು, ಬೆಲ್ಲ, ತುಪ್ಪ, ಗೋಡಂಬಿ-ಬಾದಾಮಿ ಬೀಜಗಳನ್ನು ಸೇರಿಸಿ ತಯಾರಿಸುತ್ತಿತ್ತು.

ಗಣಪತಿ ಸಚ್ಚಿದಾನಂದ ಆಶ್ರಮ ಎಂದು ಹೆಸರಿರುವ ದತ್ತಪೀಠ ದೀರ್ಘ ಬಾಳಿಕೆಯ ಪ್ರಸಾದ ಅಭಿವೃದ್ಧಿಪಡಿಸಿಕೊಡುವಂತೆ ಮನವಿ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಹರ್ಡಲ್ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸಿ ಪ್ಯಾಕ್ ಮಾಡಿದ್ದೇವೆ. ಸಾಮಾನ್ಯ ಉಷ್ಣತೆಯಲ್ಲಿ ಇದು 3 ತಿಂಗಳು ಬಾಳುತ್ತದೆ ಎಂದು ಸಿಎಫ್ ಟಿಆರ್ ಐನ ಆಹಾರ ಪ್ಯಾಕೇಜಿಂಗ್ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಚ್.ಎಸ್.ಸತೀಶ್ ತಿಳಿಸಿದ್ದಾರೆ.












Click it and Unblock the Notifications