ಮೋದಿ ಸಾಗಿದ ಮಾರ್ಗ ಸಗಣಿ ನೀರಿನಿಂದ ಶುದ್ಧೀಕರಣ: ಕೈ ಕಾರ್ಯಕರ್ತರ ವಿರುದ್ಧ ಕೇಸ್
ಮೈಸೂರು, ಮೇ 15: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಮಾರ್ಗವನ್ನು ಕಾಂಗ್ರೆಸ್ ಕಾರ್ಯಕರ್ತರು ಸಗಣಿ, ಗಂಜಲದಿಂದ ಶುದ್ಧೀಕರಣಗೊಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಹೊರಬಿದ್ದಿದ್ದು, ಮೈಸೂರು ಜಿಲ್ಲೆಯ ಒಟ್ಟು 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಕೇವಲ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ.

ಜಿಲ್ಲೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ ಮಾರ್ಗವನ್ನು ಕಾಂಗ್ರೆಸ್ ಕಾರ್ಯಕರ್ತರು ಸಗಣಿ, ಗಂಜಲದಿಂದ ಶುದ್ಧೀಕರಣಗೊಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶುದ್ಧೀಕರಣ ಕಾರ್ಯದ ನೇತೃತ್ವ ವಹಿಸಿದ್ದ ಮೈಸೂರು ನಗರದ ವಿದ್ಯಾರಣ್ಯಪುರ ನಿವಾಸಿ ಕಂಸಾಳೆ ರವಿ 'ದಸರಾದಲ್ಲಿ ಜಂಬೂಸವಾರಿ ಸಾಗುವ ರಾಜ ಮಾರ್ಗವನ್ನು ರೋಡ್ ಶೋ ಮಾಡಿ ಅಪವಿತ್ರಗೊಳಿಸಲಾಗಿದೆ. ಮೈಸೂರು ರಾಜ ಮನೆತನ ಮತ್ತು ಚಾಮುಂಡೇಶ್ವರಿ ದೇವಿಯ ಭಕ್ತರಾದ ನಮಗೆ ಈ ಘಟನೆಯಿಂದ ಬಹಳ ನೋವಾಗಿದೆ ಹಾಗೂ ಬೇಸರವಾಗಿದೆ' ಎಂದು ಹೇಳಿದರು.

ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ, ನಾಡದೇವಿ ಚಾಮುಂಡೇಶ್ವರಿ ಜಂಬೂಸವಾರಿ ಮೆರವಣಿಗೆ ಸಾಗುವ ದಾರಿಯಲ್ಲಿ ತೆರಳಿ ಅಪವಿತ್ರಗೊಳಿಸಿದ್ದಾರೆ. ಇದರಿಂದ ಅವರು ಸಾಗಿದ ಮಾರ್ಗವನ್ನು ಸಗಣಿ, ಗಂಜಲದಿಂದ ಶುದ್ಧೀಕರಣ ಗೊಳಿಸಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 30ರಂದು ಮೈಸೂರಿನ ಗನ್ಹೌಸ್ ವೃತ್ತದಿಂದ ಹೈವೇ ವೃತ್ತದ ವರೆಗೆ ರೋಡ್ ಶೋ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವಚ್ಛಗೊಳಿಸಿದ್ದಾರೆ.
ಪೊಲೀಸರಿಂದ ತಡೆ ಮೂವರ ವಿರುದ್ಧ ಪ್ರಕರಣ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಮಾರ್ಗ ಶುದ್ಧೀಕರಣ ಕಾರ್ಯ ಕೆ.ಆರ್.ವೃತ್ತದಿಂದ ಆರಂಭವಾಗಿ ಸಯ್ಯಾಜಿ ರಾವ್ ರಸ್ತೆಯ ದೊಡ್ಡಾಸ್ಪತ್ರೆಗೆ ಸಾಗಿದ್ದು, ಸಯ್ಯಾಜಿ ರಾವ್ ರಸ್ತೆ ವೃತ್ತದ ಬಳಿ ಪೊಲೀಸರು ತಡೆದಿದ್ದಾರೆ. ಘಟನೆ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸಿದ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications