ಬ್ಲ್ಯಾಕ್ ಫಂಗಸ್ ಆತಂಕ: ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ ರೋಹಿಣಿ ಸಿಂಧೂರಿ
ಮೈಸೂರು, ಮೇ 24: ಮೈಸೂರು ಜಿಲ್ಲೆಯಾದ್ಯಂತ ಕೊರೊನಾ ಸೋಂಕಿನ ಜೊತೆಗೆ ಬ್ಲ್ಯಾಕ್ ಫಂಗಸ್ ಆತಂಕ ಸಹ ಮನೆ ಮಾಡಿದ್ದು, ಮೈಸೂರಿನಲ್ಲಿ 21 ಬ್ಲ್ಯಾಕ್ ಫಂಗಸ್ ಪ್ರಕರಣ ಇರುವ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.
ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ 21 ಬ್ಲ್ಯಾಕ್ ಫಂಗಸ್ ಪ್ರಕರಣಗಳಿದ್ದು, ಕೆ.ಆರ್ ಆಸ್ಪತ್ರೆಯಲ್ಲಿ 17, ಜೆಎಸ್ಎಸ್ ಆಸ್ಪತ್ರೆಯಲ್ಲಿ 3 ಹಾಗೂ ಅಪೋಲೋದಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬ್ಲ್ಯಾಕ್ ಫಂಗಸ್ನಿಂದ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಅಲ್ಲದೇ, ಈಗಾಗಲೇ ಬ್ಲ್ಯಾಕ್ ಫಂಗಸ್ ಇದ್ದವರಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಆದರೆ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗ ಆಸ್ಪತ್ರೆಗೆ ಬನ್ನಿ. ಈಗಾಗಲೇ ಹಲವರಿಗೆ ಕಣ್ಣಿನ ಸರ್ಜರಿ ಮಾಡಲಾಗಿದೆ. ಒಂದೇ ಕಡೆ ಮೂಗು ಸೋರುವಿಕೆ, ವಿಪರೀತ ತಲೆ ನೋವು, ಇದೆಲ್ಲವು ಬ್ಲ್ಯಾಕ್ ಫಂಗಸ್ನ ಸಿಂಪ್ಟಮ್ಸ್ ಆಗಿದೆ ಎಂದರು.

ಈಗ ಕೆ.ಆರ್ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳು ಕ್ಷೇಮವಾಗಿದ್ದಾರೆ. ಇದು ಗುಣಮುಖವಾಗಲು ಬರೋಬ್ಬರಿ ಮೂರು ವಾರಗಳು ಬೇಕು. ಧ್ಯಾನ ಹಾಗೂ ಸರ್ಜರಿಯೇ ಇದಕ್ಕೆ ಮದ್ದು. ಮೊದಲ ಹಂತದಲ್ಲೇ ಇದ್ದರೆ ಅದನ್ನ ಔಷಧಿಯಲ್ಲೇ ಗುಣಪಡಿಸಬಹುದು. ಆದರೆ ನಂತರ ಬಂದರೆ ಸರ್ಜರಿ ಅನಿವಾರ್ಯ ಎಂದರು.
ಸರ್ಕಾರದಿಂದ ಈಗಾಗಲೇ ಗೈಡ್ಲೈನ್ ಬಂದಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಆಸ್ಪತ್ರೆ ಭೇಟಿ ಕೊಟ್ಟು ಮಾಹಿತಿ ಜೊತೆಗೆ ಸಭೆ ಮಾಡಬೇಕೆಂದು. ಹಾಗಾಗಿ ಕೆ.ಆರ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಇದು ಮೊದಲ ಭೇಟಿಯಲ್ಲ, ಈಗಾಗಲೇ ಎರಡು ಬಾರಿ ಬಂದಿದ್ದೇನೆ. ಸದ್ಯ ಬ್ಲ್ಯಾಕ್ ಫಂಗಸ್ ಹೆಚ್ಚಾಗಿರುವ ಕಾರಣ ಇಲ್ಲಿ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿ ತಾಲೂಕು ಆಡಳಿತ ಕೆಲಸ ಮಾಡುತ್ತಿದೆ. ಬ್ಲ್ಯಾಕ್ ಫಂಗಸ್ನ ಸಮಸ್ಯೆ ಹೆಚ್ಚಾಗಿರುವ ಕಾರಣ. ನಾನು ಕೆ.ಆರ್ ಆಸ್ಪತ್ರೆ ಭೇಟಿ ಕೊಟ್ಟು ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಇದಕ್ಕೆ ಬೇಕಾದ ಸೂಕ್ತ ಔಷಧಿ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇನೆ. ಜೆಎಸ್ಎಸ್ ಆಸ್ಪತ್ರೆಯಿಂದಲೂ ಔಷಧಿಯ ಬೇಡಿಕೆ ಬಂದಿದೆ.
ಹೀಗಾಗಿ ಸರ್ಕಾರಕ್ಕೆ ಈಗಲೇ ಪತ್ರ ಬರೆದು ಔಷಧಿಗಾಗಿ ಮನವಿ ಮಾಡುತ್ತೇವೆ. ಸದ್ಯ ಇರುವ ಔಷಧಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಅವರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದರು.












Click it and Unblock the Notifications