ಮಾತಿನ ಭರದಲ್ಲಿ ಯಡಿಯೂರಪ್ಪನವರನ್ನು ಥಳಿಸಿದ ಸದಾನಂದ ಗೌಡರು!
ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಸಚಿವ ಡಿ.ವಿ.ಸದಾನಂದ ಗೌಡ ಇಂದು(ಜ.23) ಮಾತಿನ ಭರಾಟೆಯಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದು ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದೆ. 'ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ..! ಸಿಕ್ಕಿದೆ' ಎಂದು ಬಾಯಿತಪ್ಪಿ ಹೇಳಿದ ಘಟನೆ ಸುತ್ತೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ನಡೆದಿದೆ!
ಇನ್ನೂ ತಮಾಷೆಯ ಸಂಗತಿ ಎಂದರೆ, ಗೌಡರು ಹೀಗೆ ಹೇಳುವಾಗ ಎದುರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದರು ಎಂಬುದು!
ಯಡಿಯೂರಪ್ಪ ಅವಧಿಯಲ್ಲಿ 3.5 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಂದು ಸದಾನಂದಗೌಡರು ಬಾಯಿ ತಪ್ಪಿ ಹೇಳಿದ್ದು, ನಂತರ ತಪ್ಪನ್ನು ತಿದ್ದಿಕೊಂಡಿದ್ದಾರೆ.

ಮೈಸೂರಿನ ಸುತ್ತೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಡಿವಿ ಸದಾನಂದ ಗೌಡರು ಮಾತನಾಡುತ್ತಿದ್ದ ವೇಳೆ ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ ಸಿಕ್ಕಿದೆ. ಇಂತಹ ಸಿಎಂ ನಮಗೆ ಬೇಕಾ ಎಂದು ಪ್ರಶ್ನಿಸಿದ್ದರು!
ಸಮಾವೇಶದಲ್ಲಿ ಭಾಗವಹಿಸಿದ್ದವರು ಕೂಡಾ ಹೋ..ಹೋ ಎಂದು ಕೂಗಿದ್ದರು, ಕೂಡಲೇ ತಮ್ಮ ಬಾಯ್ ತಪ್ಪಿನಿಂದಾದ ಹೇಳಿಕೆಯನ್ನು ತಿದ್ದಿಕೊಂಡ ಸದಾನಂದ ಗೌಡರು, ಸಿಎಂ ಸಿದ್ದರಾಮಯ್ಯನವರ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ ಎಂದು ಸಮಜಾಯಿಷಿ ನೀಡಿದರು.
ಸಿಎಂ ಪುತ್ರನಿಗೆ ಸಲಹೆ ನೀಡಿದ ಡಿವಿಎಸ್
ಮುಖ್ಯಮಂತ್ರಿ ಪುತ್ರ ಡಾ.ಯತೀಂದ್ರ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ದು, ಈ ವರ್ಷ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದಕ್ಕೆ ಸದಾಗೌಡರು ನಮ್ಮಪ್ಪ ನಿಮ್ಮನ್ನೂ ಬಿಡುವುದಿಲ್ಲ. ನಿಮ್ಮಪ್ಪನೇ ಸೋಲಿನ ಭೀತಿಯಿಂದ ಓಡಿ ಹೋಗುತ್ತಿದ್ದಾರೆ. ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತಾಗಬಾರದು. ನೋಡಿ ಸ್ವಲ್ಪ ಯೋಚನೆ ಮಾಡಿ ಎಂದು ಹೇಳಿದ್ದಾರೆ.
ಡಾ.ಯತೀಂದ್ರ ಅವರೇ ವರುಣ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಲು ಮುಂದಾಗಿದ್ದೀರಿ. ಮೊದಲ ಚುನಾವಣೆಯಲ್ಲೇ ಸೋತು ರಾಜಕೀಯದಿಂದ ನಿವೃತ್ತಿ ಆಗುವುದು ಬೇಡ ಎಂದಿದ್ದಾರೆ.












Click it and Unblock the Notifications