ಎಚ್ಡಿ ಕೋಟೆ ವ್ಯಾಪ್ತಿಯಲ್ಲಿ ಮತ್ತೆ ಪ್ರತ್ಯಕ್ಷವಾದ ವ್ಯಾಘ್ರ
ಮೈಸೂರು, ಸೆಪ್ಟೆಂಬರ್ 12: ಕಳೆದ ಕೆಲವು ಸಮಯಗಳಿಂದ ಆಗಾಗ್ಗೆ ಕಾಣಿಸಿಕೊಳ್ಳುತ್ತಾ ಜಾನುವಾರುಗಳ ಮೇಲೆ ದಾಳಿ ಮಾಡಿ ತನ್ನ ಇರುವನ್ನು ಸಾಭೀತುಪಡಿಸುತ್ತಾ ಜನರಿಗೆ ಭಯಹುಟ್ಟಿಸಿ, ಅರಣ್ಯ ಇಲಾಖೆ ಕಣ್ಣಿಗೆ ಮಣ್ಣೆರಚುತ್ತಾ ಎಚ್.ಡಿ.ಕೋಟೆ ಅರಣ್ಯದಂಚಿನ ಗ್ರಾಮದಲ್ಲಿ ಹುಲಿಯೊಂದು ಅಡ್ಡಾಡುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಮೇಟಿಕುಪ್ಪೆ ವಲಯದ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಈ ಹುಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ.
ನಾಗರಹೊಳೆಯ ಕಾಡಂಚಿನ ಜನರ ನಿದ್ದೆಗೆಡಿಸಿದ ವ್ಯಾಘ್ರ
ಇದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ವಿಫಲಗೊಂಡಿದ್ದು, ಇದರಿಂದ ಜನ ಮಾತ್ರ ಭಯದಲ್ಲೇ ಕಾಲ ಕಳೆಯುವಂತಾಗಿದೆ. ಕೆಲ ದಿನಗಳಿಂದ ಹುಲಿ ಇರುವ ಯಾವುದೇ ಕುರುಹು ಇರಲಿಲ್ಲ. ಹೀಗಾಗಿ ಹುಲಿ ಅರಣ್ಯಕ್ಕೆ ತೆರಳಿರಬಹುದೆಂದು ಜನ ನಂಬಿದ್ದರು. ಜತೆಗೆ ನೆಮ್ಮದಿಯುಸಿರು ಬಿಟ್ಟಿದ್ದರು.
ಈ ನಡುವೆ ನಾಗರಹೊಳೆ ಅರಣ್ಯ ವ್ಯಾಪ್ತಿಯ ಮೇಟಿಕುಪ್ಪೆ ವಲಯದ ಸಿದ್ದಾಪುರ ಗ್ರಾಮದ ಸುರೇಶ್ ಎಂಬುವರು ಮನೆ ಹತ್ತಿರ ಕಟ್ಟಿಹಾಕಿದ್ದ ಹಸುವನ್ನು ಮಧ್ಯರಾತ್ರಿಯಲ್ಲಿ ಬಂದ ಹುಲಿ ದಾಳಿ ಮಾಡಿ ಸಾಯಿಸಿ ರಕ್ತಹೀರಿ ಹೊರಟು ಹೋಗಿದೆ. ಈ ಹಸುವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಮಾಲೀಕ ಸುರೇಶ್ ಅವರು ಬೆಳಗ್ಗೆ ಎದ್ದು ಹಸುವಿನ ಬಳಿ ಹೋಗಿ ನೋಡಿದಾಗ ಅದು ಸಾವನ್ನಪ್ಪಿರುವುದು ಕಾಣಿಸಿದೆ.
ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ಹುಲಿ ಪ್ರತ್ಯಕ್ಷ ?
ಸ್ಥಳದಲ್ಲಿದ್ದ ಹೆಜ್ಜೆ ಮತ್ತು ಹಸುವಿನ ಮೇಲೆ ಮಾಡಿದ ದಾಳಿಯನ್ನು ಗಮನಿಸಿದಾಗ ಇದು ಹುಲಿಯದೇ ಕೃತ್ಯ ಎಂಬುದು ಗೊತ್ತಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿ ಶರಣ ಬಸಪ್ಪ ಹಾಗೂ ಇನ್ನಿತರ ಅಧಿಕಾರಿಗಳು, ಎಸ್ಟಿಪಿಎಫ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಹೆಜ್ಜೆ ಗುರುತನ್ನು ಪರಿಶೀಲಿಸಿ ಹಸುವನ್ನು ಬಲಿತೆಗೆದುಕೊಂಡಿರುವುದು ಹುಲಿ ಎಂಬುದನ್ನು ಖಚಿತಪಡಿಸಿದ್ದಾರೆ.
ಈ ಹುಲಿಯು ಕಳೆದ ಆರು ತಿಂಗಳಿಂದ ಅಗಸನಹುಂಡಿ, ಸಿದ್ದಾಪುರ ಮತ್ತು ಕಲ್ಲಹಟ್ಟಿ ಗ್ರಾಮಗಳ ಸಮೀಪ ಓಡಾಡುತ್ತಿದ್ದು ನಾಲ್ಕೈದು ಜಾನುವಾರುಗಳನ್ನು ತಿಂದು ಹಾಕಿದೆ. ಇದನ್ನು ಹಿಡಿಯಲು ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಯಾರ ಕಣ್ಣಿಗೂ ಬೀಳದೆ ನಾಪತ್ತೆಯಾಗಿತ್ತು.
ಯರಿಯೂರು ಗ್ರಾಮದಲ್ಲಿ ಹುಲಿಹೆಜ್ಜೆ: ಭಯದಲ್ಲಿ ಗ್ರಾಮಸ್ಥರು
ಇದೀಗ ಮತ್ತೆ ಕಾಣಿಸಿಕೊಂಡಿರುವುದರಿಂದ ಈ ವ್ಯಾಪ್ತಿಯ ಗ್ರಾಮಸ್ಥರು ಆತಂಕಗೊಂಡಿದ್ದು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಜತೆಗೆ ಕೂಡಲೇ ಹುಲಿಯನ್ನು ಪತ್ತೆ ಹಚ್ಚಿ ಸೆರೆಹಿಡಿಯುವಂತೆಯೂ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಹುಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಈ ಹುಲಿಯನ್ನು ಸೆರೆಹಿಡಿಯುವ ತನಕ ಈ ವ್ಯಾಪ್ತಿಯ ಜನಕ್ಕೆ ನೆಮ್ಮದಿ ಇಲ್ಲದಂತಾಗಿದೆ.