Vande Bharat Express: ಬೆಂಗಳೂರು-ಮೈಸೂರು ನಡುವೆ ಮತ್ತೊಂದು ವಂದೇ ಭಾರತ್ ರೈಲು
ಮೈಸೂರು, ಸೆಪ್ಟೆಂಬರ್ 18: ಬೆಂಗಳೂರು-ಮೈಸೂರು ನಡುವೆ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಈಗಾಗಲೇ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಂಗಳೂರು ನಗರದ ಮೂಲಕವೇ ನಡುವೆ ಸಂಚಾರವನ್ನು ನಡೆಸುತ್ತಿದೆ. ಕರ್ನಾಟಕದ ಮೊಟ್ಟ ಮೊದಲ ವಂದೇ ಭಾರತ್ ರೈಲು ಇದಾಗಿತ್ತು. ಉಭಯ ನಗರದ ನಡುವೆ ಮತ್ತೊಂದು ರೈಲು ಆರಂಭವಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಬೆಂಗಳೂರು-ಮೈಸೂರು ವಂದೇ ಭಾರತ್ ರೈಲು ಸಂಚಾರದ ಕುರಿತು ಮಾತುಕತೆ ನಡೆಸಿದ್ದಾರೆ. ಈ ಕುರಿತು ಫೇಸ್ಬುಕ್ ಪುಟದಲ್ಲಿಯೂ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.

ರೈಲ್ವೆ ಇಲಾಖೆ ಬೆಂಗಳೂರು-ತಿರುಪತಿ ನಡುವೆ ವಂದೇ ಭಾರತ್ ರೈಲು ಓಡಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಈ ರೈಲನ್ನು ಮೈಸೂರು ತನಕ ವಿಸ್ತರಣೆ ಮಾಡಬೇಕು ಎಂದು ಸಂಸದರು ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಮೈಸೂರು-ಬೆಂಗಳೂರು ಮತ್ತು ಮೈಸೂರು-ತಿರುಪತಿ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ಸಂಸದರ ಪೋಸ್ಟ್: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, 'ಗೌರವಾನ್ವಿತ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಜಿ. ಅವರೋಟ್ಟಿಗೆ ಸಭೆ ನಡೆಸಿ ಮೈಸೂರು-ಕೊಡಗಿನ ರೈಲು ಅಭಿವೃದ್ಧಿಗೆ ನಾನು ಪ್ರಮುಖ ಮಾರ್ಗ ಮತ್ತು ಪರಿಹಾರಗಳನ್ನು ಪ್ರಸ್ತುತಪಡಿಸಿದ್ದೇನೆ' ಎಂದು ಹೇಳಿದ್ದಾರೆ.
ವಂದೇ ಭಾರತ್ ರೈಲು ವಿಸ್ತರಣೆ: ತಿರುಪತಿಯಿಂದ ಬೆಂಗಳೂರಿಗೆ ಮತ್ತು ಮುಂದೆ ಮೈಸೂರಿಗೆ ಸಂಪರ್ಕಿಸುವುದು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗಿನಂತಹ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯೋಜನಕಾರಿಯಾಗಿದೆ.
ಮೈಸೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು: ಪ್ರಸ್ತಾವಿತ ಅಭಿವೃದ್ದಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ವಿನಂತಿಸಲಾಗಿದೆ ಇದರಿಂದ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಿದಂತಾಗುತ್ತದೆ.
ಮಹಾರಾಜ ಸಲೂನ್ ಕೋಚ್ ವರ್ಗಾವಣೆ: ಮೈಸೂರಿಗೆ ಇದನ್ನು ಸ್ಥಳಾಂತರಿಸುವುದು ಮತ್ತು ಪಾರಂಪರಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಎಂದು ಪೋಸ್ಟ್ನಲ್ಲಿ ರೈಲು ಯೋಜನೆಗಳ ವಿವರಗಳನ್ನು ನೀಡಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಪ್ರಸ್ತಾವನೆ: ಮೈಸೂರು ನೈಋತ್ಯ ರೈಲ್ವೆಯ ಮೂರು ವಿಭಾಗದಲ್ಲಿ ಒಂದು. ವಿಭಾಗ ಮಟ್ಟದ ಕಛೇರಿಯನ್ನು ಹೊಂದಿದೆ. ಕರ್ನಾಟಕದ ವಿವಿಧ ಮಾರ್ಗದಲ್ಲಿ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಬೇಕು ಎಂದು ನೈಋತ್ಯ ರೈಲ್ವೆ ಪ್ರಸ್ತಾವನೆ ಸಿದ್ಧಪಡಿಸಿದೆ. ಇದರಲ್ಲಿ ಬೆಂಗಳೂರು-ತಿರುಪತಿ ಮಾರ್ಗವೂ ಸೇರಿದೆ.
ಈ ಪ್ರಸ್ತಾವನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ರೈಲು ಸಂಚಾರದ ದಿನಾಂಕ, ವೇಳಾಪಟ್ಟಿ ಸೇರಿದಂತೆ ಯಾವದೇ ಮಾಹಿತಿ ಅಂತಿಮವಾಗಿಲ್ಲ. ಆದರೆ ಈ ರೈಲನ್ನು ಮೈಸೂರು ತನಕ ವಿಸ್ತರಣೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಸಂಸದರು ರೈಲ್ವೆ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ರೈಲ್ವೆ ಇಲಾಖೆ ಬೆಂಗಳೂರು-ತಿರುಪತಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡುವಾಗ ಈ ಬೇಡಿಕೆಯನ್ನು ಪರಿಗಣಿಸಲಿದೆಯೇ? ಎಂದು ಕಾದು ನೋಡಬೇಕಿದೆ.
ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ರೈಲಿನ ಮೂಲಕ ಬೆಂಗಳೂರು ನಗರಕ್ಕೆ ಮೈಸೂರಿನಿಂದ ಹಲವಾರು ಪ್ರಯಾಣಿಕರು ಆಗಮಿಸುತ್ತಾರೆ. ಈಗ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಬೆಂಗಳೂರು ನಗರಕ್ಕೆ ವಿಮಾನವೇರಲು ಸೇರಿದಂತೆ ವಿವಿಧ ಕಾರಣಕ್ಕೆ ಆಗಮಿಸುವ ಮೈಸೂರು ಭಾಗದ ಜನರಿಗೆ ಅನುಕೂಲವಾಗಲಿದೆ.












Click it and Unblock the Notifications