ಖಾಸಗೀಕರಣ ವಿರೋಧಿಸಿ ಮೈಸೂರಿನಲ್ಲಿ ಬಿಇಎಂಎಲ್ ಕಾರ್ಮಿಕರ ತಮಟೆ ಚಳವಳಿ
ಮೈಸೂರು, ಅಕ್ಟೋಬರ್ 15: ಖಾಸಗೀಕರಣವನ್ನು ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಕಾರ್ಖಾನೆಯ ಕಾರ್ಮಿಕರು ಇಂದು ಮೈಸೂರಿನಲ್ಲಿ ತಮಟೆ ಚಳವಳಿ ನಡೆಸಿದರು. ಕಾರ್ಮಿಕರು ನಿನ್ನೆಯಿಂದ ಪ್ರತಿಭಟನೆ ಪ್ರಾರಂಭಿಸಿದ್ದು, ತಮ್ಮ ಕೂಗು ಕೇಂದ್ರಕ್ಕೆ ಮುಟ್ಟುವ ತನಕ ವಿವಿಧ ರೀತಿಯ ಚಳವಳಿ ನಡೆಸುವುದಾಗಿ ತಿಳಿಸಿದ್ದಾರೆ.
ತಮಟೆ ಆಂದೋಲನ, ಒಂದು ವಾರ ಧರಣಿ, ಬೈಕ್ rally, ಮೇಣದಬತ್ತಿ ಮೆರವಣಿಗೆ, ಮಾನವ ಸರಪಳಿ ಹೀಗೆ ವಿವಿಧ ಹಂತದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿರುವ ಬಿಇಎಂಎಲ್ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಕಾರ್ಮಿಕರು ಇದರ ಅಂಗವಾಗಿ ಇಂದು ಬೆಳವಾಡಿಯಲ್ಲಿರುವ ಕಾರ್ಖಾನೆಯ ಎದುರು ತಮಟೆ ಚಳವಳಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
BPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತ
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, "ಖಾಸಗಿಯವರಿಗೆ ಈ ಉದ್ಯಮದ ಶೇ.26ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಆದರೀಗ ಸರ್ಕಾರದ ಬಳಿ ಇರುವ ಎಲ್ಲ ಶೇ.54ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಮುಂದಾಗಿದೆ. ಇಡೀ ಸಂಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಹುನ್ನಾರ ನಡೆಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದ ಬಿಇಎಂಎಲ್ ಮೈಸೂರು ಸೇರಿ ಬೆಂಗಳೂರು, ಕೆಜಿಎಫ್, ಪಾಲಕ್ಕಾಡ್ ನಲ್ಲಿ ಉತ್ಪಾದನಾ ಘಟಕ ಹೊಂದಿದೆ. 4 ಪ್ರಾದೇಶಿಕ, 20 ಸೇವಾ ಕಚೇರಿ ಹೊಂದಿರುವ ಬೃಹತ್ ಸಂಸ್ಥೆಯಾಗಿದ್ದು, ಇಲ್ಲಿ ರೈಲು, ಮೆಟ್ರೋ ರೈಲಿನ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ. ರಕ್ಷಣಾ ಇಲಾಖೆಗೆ ಬೇಕಾದ ಟೆಟ್ರಾ ಟ್ರಕ್ಕುಗಳು, ಸರ್ವೋತ್ತರ ಬ್ರಿಡ್ಜ್, ಮಿಸೈಲ್ ಲಾಂಚರ್, ಬುಲ್ಡೋಜರ್, ಯುದ್ಧಕ್ಕೆ ಸಂಬಂಧಿಸಿದ ವಾಹನಗಳನ್ನು ಸರಬರಾಜು ಮಾಡುವ ದೇಶದ ಏಕೈಕ ಸಂಸ್ಥೆಯಾಗಿದೆ. ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಯಂತ್ರಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ. ಇದು ಏಷ್ಯಾದಲ್ಲೇ ಅತಿ ದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ. ವಾರ್ಷಿಕವಾಗಿ ಸುಮಾರು 3,500 ಕೋಟಿ ರೂ.ಗಿಂತಲೂ ಮಿಗಿಲಾದ ವಹಿವಾಟು ನಡೆಯುತ್ತಿದೆ. 1964ರಿಂದ ಈವರೆಗೂ ಲಾಭ ಗಳಿಸುತ್ತಿದ್ದು, ಇಂತಹ ಸಂಸ್ಥೆಯನ್ನು ಖಾಸಗೀಕರಣ ಮಾಡುತ್ತಿರುವುದು ಖಂಡನೀಯ ಎಂದು ಕಾರ್ಮಿಕರು ಕಿಡಿಕಾರಿದರು.
ಸೂಲಿಬೆಲೆಗೆ ದೇಶದ್ರೋಹಿ ಎಂದಿಲ್ಲ: ಕೇಂದ್ರ ಸಚಿವ ಸದಾನಂದ ಗೌಡ ಸ್ಪಷ್ಟನೆ
ದೇಶದ ಸಂಪತ್ತಾಗಿರುವ ಈ ಸಂಸ್ಥೆಯನ್ನು ಬಹಳ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಸಂಸ್ಥೆಯ 8,500 ಕಾಯಂ ಉದ್ಯೋಗಿಗಳು, 4500 ಗುತ್ತಿಗೆ ಕಾರ್ಮಿಕರ ಕೆಲಸಕ್ಕೆ ಅಭದ್ರತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.