ಮೈಸೂರು : ಎಟಿಐ ನೌಕರ ವೆಂಕಟೇಶ್ ಸಾವಿನ ವರದಿಯಲ್ಲೇನಿದೆ?
ಮೈಸೂರು, ಮಾ. 19 : ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಮೇಲ್ವಿಚಾರಕ ವೆಂಕಟೇಶ್ ಅವರ ಸಾವು ಅನುಮಾನಸ್ಪದವಾಗಿಲ್ಲ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಾವಿನ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ತನಿಖಾ ವರದಿಯನ್ನು ಡಿಸಿಪಿ ಅವರಿಗೆ ನೀಡಿದ್ದಾರೆ.
ಮೈಸೂರು ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. [ರಶ್ಮಿ ಮಹೇಶ್ ಮೇಲಿನ ಹಲ್ಲೆ ಪೂರ್ವನಿಯೋಜಿತ]

ವೆಂಕಟೇಶ್ ಸಾವಿನ ತನಿಖೆ ಮುಗಿದಿದೆ. ಅವರ ಸಾವು ಆತ್ಮಹತ್ಯೆ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಈ ಸಾವು ಅನುಮಾಸ್ಪದವಲ್ಲ ಎಂದು ಡಾ.ಸಲೀಂ ತಿಳಿಸಿದ್ದಾರೆ. ವೆಂಕಟೇಶ್ ಸಂಬಂಧಿಕರು ಸಾವಿಗೆ ಸಂಸ್ಥೆಯ ನಿರ್ದೇಶಕಿ ರಶ್ಮಿ ಮಹೇಶ್ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು. [ರಶ್ಮಿ ಮಹೇಶ್ ಮೇಲೆ ಹಲ್ಲೆ]
ಘಟನೆಯ ವಿವರ : 2014ರ ಅಕ್ಟೋಬರ್ 15ರಂದು ಎಟಿಐ ಸಂಸ್ಥೆಯ ಮೇಲ್ವಿಚಾರಕ ವೆಂಕಟೇಶ್ ಅವರ ಶವ ಕಚೇರಿ ಆವರಣದ ನೀರಿನ ಸಂಪ್ನಲ್ಲಿ ಪತ್ತೆಯಾಗಿತ್ತು. ಸಂಜೆ ಶವವನನ್ನು ಅಂತಿಮ ದರ್ಶನಕ್ಕಾಗಿ ಕಚೇರಿ ಆವರಣಕ್ಕೆ ತರಲಾಗಿತ್ತು.
ಈ ಸಂದರ್ಭದಲ್ಲಿ ಶವದ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಆಡಳಿತ ತರಬೇತಿ ಸಂಸ್ಥೆಯ (ಎಟಿಐ) ಮಹಾ ನಿರ್ದೇಶಕಿ ರಶ್ಮಿ ಮಹೇಶ್ ಅವರ ಮೇಲೆ ಮೃತ ವೆಂಕಟೇಶ್ ಸಂಬಂಧಿಕರು ಹಲ್ಲೆ ನಡೆಸಿದ್ದರು. ವೆಂಕಟೇಶ್ ಸಾವಿಗೆ ರಶ್ಮಿ ಅವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು.
ಈ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಮೇಲೆ ನಡೆದ ಹಲ್ಲೆ ಆಕಸ್ಮಿಕವಲ್ಲ, ಅದೊಂದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಕೆಲವು ದಿನಗಳ ಹಿಂದೆ ನ್ಯಾಯಾಲಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು.












Click it and Unblock the Notifications