ಬಿಜೆಪಿ ಸೇರುವ ಬಗ್ಗೆ ಸಚಿವ ಜಿ ಟಿ ದೇವೇಗೌಡ ನೀಡಿದ ಸ್ಪಷ್ಟನೆ
ಮೈಸೂರು, ಜೂನ್ 4: ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ, ಬಿಜೆಪಿ ಸೇರಲಿದ್ದಾರೆಂದು ಹರಿದಾಡುತ್ತಿದ್ದ ಸುದ್ದಿಗೆ ಖುದ್ದು ಸಚಿವರೇ ಸ್ಪಷ್ಟನೆಯನ್ನು ನೀಡಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ, ಈ ಸುದ್ದಿ ಹರಿದಾಡುತ್ತಿತ್ತು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಜಿಟಿಡಿ, ನಾನು ಹಿಂದೆ ಐದು ವರ್ಷ ಬಿಜೆಪಿಯಲ್ಲಿದ್ದೆ. ಆ ಪಕ್ಷದ ಮುಖಂಡರು ಹೇಗೆ ಎನ್ನುವುದು ನನಗೆ ಗೊತ್ತಿದೆ. ನನಗೆ ಎಲ್ಲಾ ಪಕ್ಷದಲ್ಲಿ ಸ್ನೇಹಿತರಿದ್ದಾರೆಂದು ಹೇಳಿದರು.
ನಾನು ಬಿಜೆಪಿಗೆ ಸೇರುವ ಪ್ರಮೇಯವೇ ಇಲ್ಲ. ನಾನು ರಾಜಕೀಯಕ್ಕೆ ಬಂದು ಸುಮಾರು 45ವರ್ಷಗಳಾಯಿತು, ಎಲ್ಲಾ ಪಕ್ಷದ ಸ್ನೇಹಿತರ ಜೊತೆ, ನಾನು ಚರ್ಚಿಸುತ್ತಿರುತ್ತೇನೆ ಎಂದು ಹೇಳುವ ಮೂಲಕ, ಬಿಜೆಪಿ ಸೇರುವ ಸುದ್ದಿಗೆ ಜಿ ಟಿ ದೇವೇಗೌಡ ತೆರೆ ಎಳೆದಿದ್ದಾರೆ.

ಜೆಡಿಎಸ್ ರಾಜ್ಯದಲ್ಲಿ ಸೋಲಲು ಕಾರಣವೇನು ಎನ್ನುವುದನ್ನು ಪರಾಮರ್ಶಿಸಬೇಕಿದೆ. ಮುಂದಿನ ನಾಲ್ಕು ವರ್ಷವೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಂದು ಜಿ ಟಿ ದೇವೇಗೌಡ ಈ ಸಂದರ್ಭದಲ್ಲಿ ಹೇಳಿದರು.
ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ, ಪ್ರಧಾನಿ ಮೋದಿಯವನ್ನು ಬಹಿರಂಗವಾಗಿಯೇ ಜಿ ಟಿ ದೇವೇಗೌಡ ಹೊಗಳಿದ್ದರು. ಇದರಿಂದಾಗಿ, ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿತು.
ಪ್ರಧಾನಿ ಮೋದಿ ಅವರು ದೇಶಸೇವೆಗಾಗಿ ತಮ್ಮನೇ ಸಮರ್ಪಿಸಿಕೊಂಡಿದ್ದಾರೆ. ಅವರಿಗೆ ಸ್ವಂತ ಆಸಕ್ತಿಗಳಿಲ್ಲ. ಯಾವಾಗಲೂ ದೇಶದ ಬಗ್ಗೆ ಮಾತನಾಡುತ್ತಾರೆ. ಈ ಕಾರಣಕ್ಕಾಗಿಯೇ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದು ದೇವೇಗೌಡ ಶ್ಲಾಘಿಸಿದ್ದರು.
ತಂದೆ ತಾಯಿಗೆ ಗೌರವ ನೀಡಬೇಕು. ಮೋದಿ ಅವರು ತಮ್ಮ ತಾಯಿಗೆ ನಮಸ್ಕರಿಸುವುದನ್ನು ಮಾಧ್ಯಮಗಳಲ್ಲಿ ತೋರಿಸುತ್ತಾರೆ. ಅವರ ನಡತೆಯಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ವಿನಯತೆ ಇದೆ. ಮೋದಿ ಅವರಂತೆಯೇ ಹೆತ್ತವರನ್ನು ಗೌರವಿಸಿ ನಮಿಸಿದರೆ ಶಿಕ್ಷಣದ ಜತೆ ಸಂಸ್ಕಾರವೂ ಮೈಗೂಡುತ್ತದೆ ಎಂದು ಜಿಟಿಡಿ ಹೇಳಿದ್ದರು.












Click it and Unblock the Notifications