ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಅರ್ಜುನ
ಮೈಸೂರು, ಸೆಪ್ಟಂಬರ್ 19: ಮೈಸೂರು ದಸರಾ ಸಂಭ್ರಮ ಆರಂಭಗೊಂಡಿದೆ. ಒಂದೆಡೆ ಯುವ ಸಂಭ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ ಇತರೆ ದಸರಾ ಕಾರ್ಯಕ್ರಮಗಳಿಗೆ ಸಿದ್ಧತೆಗಳು ಸಮರೋಪಾದಿಯಲ್ಲಿ ಸಾಗುತ್ತಿವೆ. ಇದೆಲ್ಲದರ ನಡುವೆ ಜಂಬೂ ಸವಾರಿಗೆ ಗಜಪಡೆಯ ತಾಲೀಮು ಕೂಡ ದಿನದಿಂದ ದಿನಕ್ಕೆ ಕಠಿಣವಾಗುತ್ತಾ ಸಾಗುತ್ತಿದೆ. ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಇದೀಗ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಲಾಗುತ್ತಿದೆ.
ಇಂದು ಮುಂಜಾನೆಯೇ ಗಜಪಡೆಯ ಕ್ಯಾಪ್ಟನ್ ಅರ್ಜುನನಿಗೆ ಸುಮಾರು 650 ಕೆ.ಜಿ ತೂಕದ ಮರದ ಅಂಬಾರಿಯನ್ನು ಕಟ್ಟಲಾಗಿದ್ದು, ಅದನ್ನು ಹೊತ್ತು ನಿರಾಯಾಸವಾಗಿ ಅರಮನೆ ಆವರಣದಿಂದ ಸುಮಾರು ಐದು ಕಿ.ಮೀ. ದೂರದ ಬನ್ನಿಮಂಟಪದವರೆಗೆ ಸಾಗಿದ್ದಾನೆ. ಆತನ ಹಿಂದೆ ಇತರೆ ಆನೆಗಳು ಸಾಗಿದ್ದು, ಈ ದೃಶ್ಯ ಮನಮೋಹಕವಾಗಿತ್ತು.
ಮುಂಜಾನೆ ಚುಮುಚುಮು ಚಳಿಯಲ್ಲಿ ಡಿಸಿಎಫ್ ಅಲೆಕ್ಸಾಂಡರ್, ಪಶು ವೈದ್ಯ ಡಾ. ನಾಗರಾಜ್ ಮಾರ್ಗದರ್ಶನದಲ್ಲಿ ಮಾವುತರು, ಕಾವಾಡಿಗಳು ಮೊದಲಿಗೆ ಪೂಜೆ ಸಲ್ಲಿಸಿ ಬಳಿಕ ಮರದ ಅಂಬಾರಿ ಕಟ್ಟುವ ಕಾರ್ಯಕ್ಕೆ ಮುಂದಾದರು. ಬೆನ್ನಿನ ಮೇಲೆ ನಮ್ದಾವನ್ನಿರಿಸಿ ಅದರ ಮೇಲೆ ಸುಮಾರು 350 ಕೆ.ಜಿ.ತೂಕದ ಮರದ ಅಂಬಾರಿಯನ್ನು ಕ್ರೇನ್ ಮೂಲಕ ಇರಿಸಿ ಬಳಿಕ ಬಿಗಿಯಾಗಿ ಕಟ್ಟಿ ನಂತರ ಮರದ ಅಂಬಾರಿಯೊಳಗೆ 300 ಕೆ.ಜಿ ತೂಕದಷ್ಟು ಮರಳು ಮೂಟೆಯನಿಟ್ಟು, ಸುಮಾರು 650 ಕೆ.ಜಿ ತೂಕದ ತಾಲೀಮನ್ನು ನಡೆಸಲಾಯಿತು.

ಪ್ರತಿದಿನವೂ ತೂಕವನ್ನು ಹೆಚ್ಚಿಸುತ್ತಾ ಹೋಗಿ ಜಂಬೂ ಸವಾರಿ ವೇಳೆಗೆ 1000 ಕೆ.ಜಿ ಭಾರ ಹೊರುವಷ್ಟರ ಮಟ್ಟಿಗೆ ತಂದು ನಿಲ್ಲಿಸಲಾಗುತ್ತದೆ. ಈಗಾಗಲೇ ಚಿನ್ನದ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಸಾಗಿ ಅಭ್ಯಾಸವಿರುವ ಅರ್ಜುನನಿಗೆ ಇದು ಹೊಸತಲ್ಲ. ಹೀಗಾಗಿ ಈತ ತಾಲೀಮು ವೇಳೆ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಸಾಗಿ ಎಲ್ಲರ ಗಮನ ಸೆಳೆದಿದ್ದಾನೆ.
ಸದ್ಯ ಅರ್ಜುನನಿಗೆ ಮಾತ್ರ ಮರದ ಅಂಬಾರಿಯ ಭಾರದ ತಾಲೀಮು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಮೂರು ಆನೆಗಳಿಗೂ ಭಾರದ ತಾಲೀಮು ನಡೆಯಲಿದೆ.












Click it and Unblock the Notifications