ಆನಂದ್ ಸಿಂಗ್ ಪ್ರಕರಣವನ್ನು ಮುಚ್ಚಿಹಾಕಲ್ಲವೆಂದ ಸಚಿವ ಸೋಮಶೇಖರ್
ಮೈಸೂರು, ಫೆಬ್ರವರಿ 16: ಅರಣ್ಯ ಸಚಿವರಾದ ತಕ್ಷಣ ಆನಂದ್ ಸಿಂಗ್ ಅವರ ಮೇಲಿನ ಪ್ರಕರಣಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ, ಅವರ ಬಗ್ಗೆ ಎಲ್ಲಾ ಮಾಹಿತಿ ಇದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ, ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಸಚಿವ ಸೋಮಶೇಖರ್, ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಬಗೆಗಿನ ಪ್ರಕರಣಗಳನ್ನು ಮುಚ್ಚಿಹಾಕುವ ಹುನ್ನಾರವಿದೆ ಎಂಬ ಆರೋಪವನ್ನು ತಳ್ಳಿಹಾಕಿದರು.
ಅರಣ್ಯ ಸಚಿವ ಆನಂದ್ ಸಿಂಗ್ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಲ್ಲಾ ಗೊತ್ತಿದೆ. ಅವರ ಬಗ್ಗೆ ಎಲ್ಲಾ ಮಾಹಿತಿ ಇದೆ.

ಮಂತ್ರಿ ಆದ ತಕ್ಷಣ ಪ್ರಕರಣಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಮುಚ್ಚಿಹಾಕಿದರೆ ಅಧಿಕಾರಿಗಳಿಗೆ ತೊಂದರೆ ಆಗುತ್ತದೆ ಇದೆಲ್ಲಾ ಸಾಧ್ಯವಿಲ್ಲವೆಂದರು.
ಆನಂದ್ ಸಿಂಗ್ ಅವರನ್ನು ಅರಣ್ಯ ಸಚಿವರನ್ನಾಗಿಸಿರುವ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಅರಣ್ಯ ಒತ್ತುವರಿ ಆರೋಪವಿರುವ ವ್ಯಕ್ತಿಗೆ ಅರಣ್ಯ ಖಾತೆ ನೀಡಿರುವುದು "ಕಟುಕನಿಗೆ ಕುರಿ ಕೊಟ್ಟಂತೆ' ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ಕಂದಾಯ ಸಚಿವ ಅಶೋಕ್ ಪುತ್ರನ ಕಾರು ಅಪಘಾತ ಪ್ರಕರಣದ ಬಗ್ಗೆ ಮಾತನಾಡಿದ ಸೋಮಶೇಖರ್, ಈ ವಿಚಾರದಲ್ಲಿ ಸಚಿವರಾದ ಆರ್.ಅಶೋಕ್ ಅವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಅದರ ಬಗ್ಗೆ ನನಗೆ ಅಷ್ಟಾಗಿ ಮಾಹಿತಿ ಗೊತ್ತಿಲ್ಲ ಎಂದು ಚಾಮುಂಡಿಬೆಟ್ಟದಲ್ಲಿ ಹೇಳಿದರು.












Click it and Unblock the Notifications