ಮೈಸೂರು ಶಿಡ್ಲು ಬೆಟ್ಟದಲ್ಲಿ ಹರಿಯುವ ನೀರು ಎಂದೂ ಬತ್ತೋದಿಲ್ಲ!
ಮೈಸೂರು, ಡಿಸೆಂಬರ್, 30: ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲದ ಮಟ್ಟ ಕುಸಿದಿದೆ. ಕೆರೆ, ತೊರೆ, ಹೊಳೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಪ್ರಮುಖ ನೀರಿನ ಸೆಲೆಗಳು ಬತ್ತುತ್ತಿವೆ. ಆದರೆ ಆಶ್ಚರ್ಯ ಎಂಬಂತೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ನೀರು ಧಾರೆಯಾಗಿ ಹರಿಯುತ್ತಿದೆ.
ಪ್ರವಾಸಿ ತಾಣ ಮತ್ತು ಭಕ್ತಿಕೇಂದ್ರವಾಗಿರುವ ಶ್ರೀ ಶಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಪ್ರದೇಶ ಸುಮಾರು 20ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಕಲ್ಲುಗಳೇ ಬೆಟ್ಟದ ಆಕರ್ಷಣೆಯಾಗಿದೆ. ಆದರೆ ಇದೀಗ ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ವ್ಯಾಪ್ತಿಯ ಜೇನುಕಲ್ಲು ಬೆಟ್ಟದ ಪಕ್ಕದಲ್ಲಿ ಕಲ್ಲುಗಳ ನಡುವೆ ಜಲ ಉದ್ಭವಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.[ಮೈಸೂರಿನಲ್ಲಿ ಡಿಸೆಂಬರ್ 31ರಂದು ಉದ್ಯೋಗ ಮೇಳ]

ಕಲ್ಲುಗಳ ನಡುವೆ ಚಿಮ್ಮಿ ಬರುತ್ತಿರುವ ಜಲಧಾರೆ ಇದೀಗ ಸುತ್ತಮುತ್ತಲಿನ ಪ್ರಾಣಿಪಕ್ಷಿಗಳ ದಾಹ ನೀಗಿಸುತ್ತಿದೆ. ಭೂಮಿ ಕೊರೆದರೂ ನೀರು ಸಿಗೋದು ಕಷ್ಟವಾಗಿರುವಾಗ ಸುಮಾರು ಇನ್ನೂರು ಅಡಿ ಎತ್ತರದಲ್ಲಿರುವ ಬೆಟ್ಟದಲ್ಲಿ ನೀರಿನಸೆಲೆ ಕಾಣುತ್ತಿರುವುದು ನಿಜಕ್ಕೂ ಅಚ್ಚರಿಯೇ.
ಈ ಬೆಟ್ಟಕ್ಕೆ ದನ ಮೇಯಿಸಲು ಹೋದ ವ್ಯಕ್ತಿಯೊಬ್ಬರು ಕಲ್ಲುಗಳ ನಡುವಿನ ಹೆಬ್ಬಂಡೆಯ ಅಡಿಯಿಂದ ನೀರು ಬರುವುದನ್ನು ಕಂಡು ಅದನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಇದೀಗ ಅದೇ ದೊಡ್ಡ ಸುದ್ದಿಯಾಗಿದೆ. ಮಲೆನಾಡಿನಲ್ಲಿ ಬೆಟ್ಟಗಳ ಮೇಲೆ ನೀರು ಚಿಮ್ಮುವುದು ಸಾಮಾನ್ಯ ಆದರೆ ಇಲ್ಲಿ ನೀರು ಹರಿಯುತ್ತಿರುವುದು ಜನರಿಗೊಂದು ಅಚ್ಚರಿಯಾಗಿ ಕಾಣಿಸುತ್ತಿದೆ.[ಮೈಸೂರಲ್ಲಿ ಮೊಳಗಲಿದೆ ಮೋದಿಯ ವಿಜ್ಞಾನ-ತಂತ್ರಜ್ಞಾನ ಮಂತ್ರ]
ನಿಸರ್ಗ ಸೌಂದರ್ಯ ಹೊಂದಿರುವ ಮಲ್ಲಿಕಾರ್ಜುನ ಬೆಟ್ಟಕ್ಕೆ ಚಾರಣಪ್ರಿಯರಿಗೆ ಹುರುಪಿನ ತಾಣವೂ ಹೌದು. ಹೀಗಾಗಿ ಇಲ್ಲಿಗೆ ಆಗಾಗ್ಗೆ ಪ್ರವಾಸಿಗರು ಬರುತ್ತಿರುತ್ತಾರೆ. ಇಲ್ಲಿರುವ ಗುಹೆಗಳು ಮತ್ತೊಂದು ಆಕರ್ಷಣೆ. ಇನ್ನು ಇಲ್ಲಿಯೇ ನೈಸರ್ಗಿಕ ನೀರು ಸಿಗುತ್ತೆ ಎನ್ನುವುದಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.












Click it and Unblock the Notifications