ಬ್ರಾಹ್ಮಣರ ಸಂಘ ಚುನಾವಣೆಗೆ ಮೈಸೂರಿನಲ್ಲಿ ಭರ್ಜರಿ ತಾಲೀಮು
ಮೈಸೂರು, ನವೆಂಬರ್ 14: ''ಬ್ರಾಹ್ಮಣರು ಸಂಘಟಿತರಾಗುವ ಅವಕಾಶ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ತಪ್ಪಿಹೋಗಿದೆ. ಇನ್ನಷ್ಟು ವರ್ಷ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳಬೇಕಾದರೆ ಬ್ರಾಹ್ಮಣರ ಹಿತಕ್ಕಾಗಿ ಕೆಲಸ ಮಾಡುವವರನ್ನೇ ಆಯ್ಕೆ ಮಾಡಬೇಕಾಗಿದೆ,'' ಎಂದು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಭಾನುವಾರ ನಡೆದ ಎಕೆಬಿಎಂಎಸ್ ಚುನಾವಣಾ ಸಮಾಲೋಚನಾ ಸಭೆಗೆ ಮೊದಲು ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಅವರು ಗಾಯತ್ರಿ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ, ಎಕೆಬಿಎಂಎಸ್ ಅಧ್ಯಕ್ಷ ಆಕಾಂಕ್ಷಿತ ಅಭ್ಯರ್ಥಿ ಎಸ್.ರಘುನಾಥ್ ಇತರರು ಇದ್ದರು.
ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಡಾ. ಅಂಜನಪ್ಪ ನೇತೃತ್ವದ ತಂಡ ಸಜ್ಜು
ಮೈಸೂರಿನ ಮುಲಕನಾಡು ಭವನ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಚುನಾವಣಾ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಸವನಗುಡಿಯಿಂದ ಹೊರಬಂದು, ರಾಜ್ಯದಾದ್ಯಂತ ಇರುವ ಬ್ರಾಹ್ಮಣರನ್ನು ಸಂಘಟಿಸುವ ಮತ್ತು ಅವರಿಗಾಗಿ ಕೆಲಸ ಮಾಡುವ ವ್ಯಕ್ತಿಯನ್ನೇ ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.
'ನಾವೆಲ್ಲ ಸಂಘಟಿತರಾದರೆ ನಾವು ಯಾರ ಮನೆಯ ಬಾಗಿಲಿಗೂ ಹೋಗಬೇಕಿಲ್ಲ. ಆದರೆ ಅದಕ್ಕೆ ಉತ್ತಮ ನಾಯಕತ್ವ ಬೇಕು. ಇದುವರೆಗೆ ಎದುರಾಗಿದ್ದ ನಾಯಕತ್ವ ಕೊರತೆ ಇನ್ನು ಮುಂದೆಯೂ ಇರದಂತೆ ನೋಡಿಕೊಳ್ಳಬೇಕಿದೆ, ಈ ನಿಟ್ಟಿನಲ್ಲಿ ಎಸ್.ರಘುನಾಥ್ ಅವರ ಆಯ್ಕೆಯಿಂದ ಬ್ರಾಹ್ಮಣ ಸಮುದಾಯಕ್ಕೆ ಒಳತಾಗುವ ವಿಶ್ವಾಸ ಇದೆ' ಎಂದು ಹೇಳಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಮಾತನಾಡಿ, ''ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಎಕೆಬಿಎಂಎಸ್ನಿಂದ 41 ಲಕ್ಷ ಜನಸಂಖ್ಯೆ ಇರುವ ಬ್ರಾಹ್ಮಣ ಸಮುದಾಯಕ್ಕೆ ಒಂದೇ ಒಂದು ನೆರವಿನ ಕಿಟ್ ಸಹ ಸಿಗಲಿಲ್ಲ. ಮಂಡಳಿ ಸ್ವಂತ ಪ್ರಯತ್ನದಿಂದ ಅಗತ್ಯ ಇದ್ದವರಿಗೆ ನೆರವು ನೀಡಿದೆ. ಮಹಾಸಭಾಕ್ಕೆ ಮತ್ತೆ ಸ್ಪರ್ಧಿಸಲು ಬಯಸಿರುವ ಮಂದಿ ಈಗ ಯಾವ ಮುಖ ಹೊತ್ತು ಮತ ಯಾಚಿಸುತ್ತಾರೋ ಗೊತ್ತಿಲ್ಲ,' ಎಂದರು.
ಎಕೆಬಿಎಂಎಸ್ ಅಧ್ಯಕ್ಷ ಆಕಾಂಕ್ಷಿತ ಅಭ್ಯರ್ಥಿ ಎಸ್.ರಘುನಾಥ್ ಅವರು ತಮ್ಮ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಬ್ರಾಹ್ಮಣರ ಹಿತಕ್ಕಾಗಿ ಪೂರ್ಣಾವಧಿಗೆ ಕೆಲಸ ಮಾಡುವ ವಾಗ್ದಾನ ನೀಡಿದರು.
ಬ್ರಾಹ್ಮಣ ಮಹಾಸಭಾ ಚುನಾವಣೆ: ನಿವೃತ್ತ ನ್ಯಾ.ಕುಮಾರ್ ಬೆಂಬಲ ಯಾರಿಗೆ?
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘುನಾಥ್ ಮಾತನಾಡಿ, ಮಹಾಸಭಾಕ್ಕೆ ಬದಲಾವಣೆಯ ಅಗತ್ಯವಿದೆ. ಎಲ್ಲರ ಸಹಕಾರದಿಂದ ಬದಲಾವಣೆ ತಂದು ಅತ್ಯುತ್ತಮ ಆಡಳಿತ ನೀಡುವುದರೊಂದಿಗೆ ಇಡೀ ರಾಜ್ಯದಾದ್ಯಂತ ಬ್ರಾಹ್ಮಣರ ಸಂಘಟನೆ ಮತ್ತು ಅಭ್ಯುದಯಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜ, ಕಾರ್ಯದರ್ಶಿ ಆರ್. ರಾಮಕೃಷ್ಣ, ಎಕೆಬಿಎಂಎಸ್ನ ಖಜಾಂಚಿ ಪ್ರಕಾಶ್ ಅಯ್ಯಂಗಾರ್ ಇದ್ದರು.
'ಹಿಂಬಾಗಿಲ ಮೂಲಕ ಪ್ರವೇಶಕ್ಕೆ ಯತ್ನ'
'ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಶೋಕ ಹಾರ್ನಹಳ್ಳಿ ಅವರು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಏರುವ ಪ್ರಯತ್ನ ನಡೆಸಿದ್ದಾರೆ. ನನಗೆ ವೈಯಕ್ತಿಕವಾಗಿ ಅವರ ಬಗ್ಗೆ ಉತ್ತಮ ಅಭಿಪ್ರಾಯ ಇದ್ದರೂ, ಕಳಂಕಿತರ ಕೈಗೊಂಬೆ ರೀತಿಯಲ್ಲಿ ಅವರು ನಡೆದುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ, ಬ್ರಾಹ್ಮಣ ಸಮುದಾಯ ಇದೀಗ ಯೋಚಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಬುದ್ಧಿವಂತಿಕೆ ತೋರಿಸಬೇಕು' ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಸಲಹೆ ನೀಡಿದರು.
ಮಹಾಸಭಾದಲ್ಲಿ ಸದ್ಯ ಏಕ ಚಕ್ರಾಧಿಪತ್ಯ ಇದೆ. ಅಧ್ಯಕ್ಷರ ಕೃಪೆ ಇದ್ದರಷ್ಟೇ ಕಾರ್ಯಕಾರಿ ಸದಸ್ಯರಾಗುವ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಇದರಿಂದಾಗಿಯೇ ತೀರಾ ಸಂಕುಚಿತವಾಗಿ ಬಸವನಗುಡಿಗೇ ಸೀಮಿತವಾಗಿ ಮಹಾಸಭಾ ಉಳಿಯುವಂತಾಗಿದೆ. ರಾಜ್ಯದ 31 ಜಿಲ್ಲೆಗಳ ಅಧ್ಯಕ್ಷರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಿಕೊಂಡು, ಹಿರಿಯರ ಸಲಹಾ ಮಂಡಳಿ ರಚಿಸಿಕೊಂಡು ಸಂಘವನ್ನು ಕಟ್ಟಿಕೊಂಡರೆ ಮಾತ್ರ ಮಹಾಸಭಾ ಬ್ರಾಹ್ಮಣರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.