ಸೀತೆ ಮಿಂದ ಧನುಷ್ಕೋಟಿಯಲ್ಲಿ ಕಾವೇರಿಯ ರುದ್ರನರ್ತನ
ಕೆಲವು ತಾಣಗಳಿವೆ ಅವು ಒಂದೊಂದು ಕಾಲದಲ್ಲಿ ಒಂದೊಂದು ವಿಚಾರಕ್ಕೆ ಗಮನ ಸೆಳೆಯುತ್ತವೆ. ಇಂತಹ ತಾಣಗಳಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿಯೂ ಒಂದು. ಕೆಆರ್ ನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಧನುಷ್ಕೋಟಿಯಲ್ಲಿ ರಾಮಾಯಣದ ಸೀತೆ ಮಿಂದಿದ್ದಾಳೆ ಎಂಬ ಪ್ರತೀತಿಯೂ ಇದೆ.
ವರ್ಷಕ್ಕೊಮ್ಮೆ ನಡೆಯುವ ಚುಂಚನಕಟ್ಟೆ ಜಾತ್ರೆ ಖ್ಯಾತಿಯನ್ನು ಹೇಗೆ ಪಡೆದಿದೆಯೋ, ಅದೇ ರೀತಿ ಮಳೆಗಾಲದಲ್ಲಿ ಧನುಷ್ಕೋಟಿಯಲ್ಲಿ ಕಾವೇರಿ ಸೃಷ್ಟಿಸುವ ಜಲನರ್ತವೂ ಗಮನಸೆಳೆಯುತ್ತದೆ. ಕೊಡಗಿನಲ್ಲಿ ವರುಣ ಕೃಪೆ ತೋರಿ ಕಾವೇರಿ ನದಿ ಉಕ್ಕಿ ಹರಿದಾಗ ಧನುಷ್ಕೋಟಿಯಲ್ಲಿ ಕಾವೇರಿಯ ಜಲನರ್ತನವನ್ನು ನೋಡುವುದೇ ಖುಷಿ. ಇದನ್ನು ನೋಡಲು ಸಾವಿರಾರು ಪ್ರವಾಸಿಗರು ಮುಗಿಬೀಳುತ್ತಾರೆ. [ತೆಪ್ಪದಕಂಡಿಯ ತೂಗುಸೇತುವೆಯ ಕಂಡೆಯಾ?]

ಕಾವೇರಿ ನದಿಯಿಂದ ಸೃಷ್ಟಿಯಾಗಿರುವ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಈ ಭಾಗದ ಜನಕ್ಕೆ ಮುದ ನೀಡುವ ಜಲಧಾರೆ ಎಂದರೆ ತಪ್ಪಾಗಲಾರದು. ಕಾವೇರಿ ಭೋರ್ಗರೆದು ಹರಿಯುವಾಗ ಸೃಷ್ಟಿಯಾಗುವ ಈ ಜಲಧಾರೆಯ ದೃಶ್ಯ ವೈಭವವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಹೀಗಾಗಿ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ತಿಳಿಯುತ್ತಿದ್ದಂತೆಯೂ ಪ್ರವಾಸಿಗರು ಚುಂಚನಕಟ್ಟೆಯತ್ತ ಧಾವಿಸಿ ಬರುತ್ತಾರೆ. ಇಲ್ಲಿನ ಕಾವೇರಿ ವೈಭವವನ್ನು ಮನದಣಿಯೆ ಸವಿದು ಹಿಂತಿರುಗುತ್ತಾರೆ.
ಧನುಷ್ಕೋಟಿ ಜಲಪಾತವು ಸುಮಾರು 40 ಕ್ಕೂ ಹೆಚ್ಚು ಅಡಿ ಎತ್ತರದಿಂದ ಧುಮುಕುತ್ತದೆ. ಬೇಸಿಗೆಯ ದಿನಗಳಲ್ಲಿ ಯಾವುದೇ ಅಬ್ಬರವಿಲ್ಲದೆ ಧುಮುಕುವ ಜಲಧಾರೆ, ಮಳೆಗಾಲದಲ್ಲಿ ಮಾತ್ರ ತನ್ನ ರೌದ್ರತೆಯನ್ನು ತಾಳುತ್ತದೆ. ಹೆಬ್ಬಂಡೆಗಳ ಮೇಲೆ ಅಗಲವಾಗಿ ಕೆಂಬಣ್ಣದಿಂದ ಕೂಡಿ ಧುಮುಕುವ ನೀರು ನೋಡುಗರಿಗೆ ಮುದನೀಡುತ್ತದೆ. [ಚಾರಣಿಗರ ಕೈಬೀಸಿ ಕರೆಯುವ ಕೊಡಗಿನ ಭತ್ತದರಾಶಿ ಬೆಟ್ಟ]

ಇಲ್ಲಿನ ಸುಂದರ ದೃಶ್ಯಗಳಿಗೆ ಮನಸೋತು ಯಾರಾದರೂ ನದಿಯಲ್ಲಿ ಈಜುವ ಪ್ರಯತ್ನಕ್ಕೆ ಇಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಹಲವರು ಪ್ರಾಣಕಳೆದುಕೊಂಡ ನಿದರ್ಶನಗಳಿವೆ. ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ದುರಂತಗಳ ಅರಿವಿಲ್ಲದೆ ಇರುವುದರಿಂದ ನದಿಗಿಳಿದು ನೀರಿನಲ್ಲಿ ಆಟವಾಡಲು ಮುಂದಾಗುತ್ತಾರೆ. ಆದರೆ ಇದು ಅನಾಹುತಕ್ಕೂ ಎಡೆ ಮಾಡಿಕೊಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಲ್ಲಿ ಭದ್ರತಾ ವ್ಯವಸ್ಥೆ ಮಾಡಬೇಕಿದೆ. [ಕಾವೇರಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಿ, ಸ್ವಚ್ಛತೆ ಕಾಪಾಡಿ]

ಈ ತಾಣದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇ ಆದರೆ ಪ್ರವಾಸಿ ತಾಣವಾಗಿ ಇನ್ನಷ್ಟು ಗಮನಸೆಳೆಯಲು ಸಾಧ್ಯವಾಗಬಹುದೇನೋ? ಇನ್ನು ಚುಂಚನಕಟ್ಟೆಗೆ ಬಂದ ಪ್ರವಾಸಿಗರು ಇಲ್ಲಿಗೆ ಸಮೀಪವಿರುವ ರಾಮಸಮುದ್ರ ಅಣ್ಣೆಮಟ್ಟೆ ಮತ್ತು ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಅಣ್ಣೆಕಟ್ಟೆಗೂ ತೆರಳಿ ನಿಸರ್ಗದ ಸೌಂದರ್ಯವನ್ನು ಸವಿಯಹುದಾಗಿದೆ.












Click it and Unblock the Notifications