ಮೈಸೂರು: ಪ್ರವಾಸಿಗರಿಗೆ ಮತ್ತೆ ದರ್ಶನ ನೀಡಿದ ಕರಿ ಚಿರತೆ
ಮೈಸೂರು, ನವೆಂಬರ್ 2: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆಯ ದಮ್ಮನಕಟ್ಟೆಯಲ್ಲಿ ವನ್ಯಪ್ರಿಯರಿಗೆ ಅಪರೂಪದ ಕರಿ ಚಿರತೆ ದರ್ಶನ ನೀಡಿದೆ.
ಪ್ರವಾಸಿಗರನ್ನು ಸೆಳೆಯುತ್ತಿರುವ ಕರಿ ಚಿರತೆಯು ಮತ್ತೊಂದು ಚಿರತೆ ಜೊತೆ ಕಾಳಗ ನಡೆಸಿ ಗಾಯ ಮಾಡಿಕೊಂಡು ಕಾಣೆಯಾಗಿತ್ತು. ಇದೀಗ ಮತ್ತೆ ಪ್ರವಾಸಿಗರಿಗೆ ದರ್ಶನ ಕೊಡುತ್ತಿರುವುದು, ವನ್ಯಪ್ರಿಯರಿಗೆ ಸಂತಸ ಮೂಡಿಸಿದೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಕಪ್ಪು ಚಿರತೆ ಮತ್ತೆ ಕಾಣಿಸಿರುವುದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೇ ವೇಳೆ ಕಾಡಿನಲ್ಲಿ ಸಫಾರಿ ಮಾಡುತ್ತಿರುವಾಗ ಚಿಗರೆಗಳ ಹಿಂಡು ಸಹ ಕಣ್ಣಿಗೆ ಕಾಣಿಸುತ್ತಿರುವುದು ಕಣ್ಣಿಗೆ ಮುದ ನೀಡುತ್ತಿವೆ.
ಕರಿ ಚಿರತೆ ನೋಡುವುದಕ್ಕೆ ಅಂತಾನೆ ಪ್ರವಾಸಿಗರು ನಾಗರಹೊಳೆಯ ಕಬಿನಿ ಕಡೆ ಮುಖ ಮಾಡುತ್ತಿದ್ದು, ಕಳೆದ ಎರಡು ತಿಂಗಳ ಹಿಂದೆ ಮತ್ತೊಂದು ಚಿರತೆ ಜೊತೆ ಕಾಳಗ ನಡೆಸಿ ಕರಿ ಚಿರತೆ ತೀವ್ರ ಗಾಯಗೊಂಡಿತ್ತು.
ಪ್ರವಾಸಿಗರ ಮೇಲೆ ಯಾವುದೇ ನಿರ್ಬಂಧವಿಲ್ಲ; ಮೈಸೂರು ಡಿಸಿ
ಅದಾದ ಮೇಲೆ ಪ್ರವಾಸಿಗರಿಗೆ ಎರಡು ತಿಂಗಳಿಂದ ಈ ಕಪ್ಪು ಚಿರತೆ ಕಾಣಿಸಿಕೊಂಡಿರಲಿಲ್ಲ. ಇದರಿಂದ ಮಳೆ ಇದ್ದ ಕಾರಣ ಗಾಯ ವಾಸಿಯಾಗದೆ ಕರಿ ಚಿರತೆ ಬದುಕಿಲ್ಲ ಎಂದೇ ಸಾಕಷ್ಟು ಜನರು ತಿಳಿದಿದ್ದರು.
ಕಣ್ಣಿನ ಭಾಗದಲ್ಲಿ ರಕ್ತ ಸುರಿಯುವ ಫೋಟೋವನ್ನು ಕಡೆಯದಾಗಿ ಪ್ರವಾಸಿಗರು ಸೆರೆ ಹಿಡಿದಿದ್ದರು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಬ್ಲಾಕ್ ಚೀತಾ ಸಿಕ್ಕಿದೆ.
ಇದೀಗ ಗಾಯ ಎಲ್ಲಾ ವಾಸಿಮಾಡಿಕೊಂಡು ಮತ್ತೆ ಪ್ರವಾಸಿಗರಿಗೆ ಕಾಣಿಸುತ್ತಿದ್ದು, ಇದರಿಂದ ವನ್ಯಜೀವಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರ ಅಚ್ಚುಮೆಚ್ಚು ಎನಿಸಿಕೊಂಡಿರುವ ಭಗೀರಥ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡುವವರಿಗೆ ಕಾಣಿಸಿಕೊಂಡಿದೆ.