ಪರಪ್ಪನ ಅಗ್ರಹಾರದಿಂದ ಮೈಸೂರು ಕಾರಾಗೃಹಕ್ಕೆ ನಾಲ್ವರು ಕೈದಿಗಳ ಸ್ಥಳಾಂತರ
ಮೈಸೂರು, ಜುಲೈ 17 : ಪರಪ್ಪನ ಅಗ್ರಹಾರದ ಜೈಲು ಸುದ್ದಿಗೆ ಕೇಂದ್ರಬಿಂದುವಾಗಿದೆ. ಅಲ್ಲಿನ ಕೈದಿಗಳ ಸ್ಥಳಾಂತರ ಮುಂದುವರಿದಿದೆ. ಇತ್ತ ಜೈಲಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಬಗ್ಗೆ ಡಿಐಜಿ ರೂಪಾ ಮೌದ್ಗೀಲ್ ಮಾಡಿದ ಆರೋಪದ ಬಗ್ಗೆ ಚರ್ಚೆ ಕಾವೇರುತ್ತಿದ್ದಂತೆ ಮೈಸೂರಿನ ಕೇಂದ್ರೀಯ ಕಾರಾಗೃಹಕ್ಕೂ ರಾತ್ರೋರಾತ್ರಿ ನಾಲ್ವರು ಕೈದಿಗಳನ್ನು ಸ್ಥಳಾಂತರಿಸಲಾಗಿದೆ.
ಇತ್ತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರದ ಕುರಿತು ಡಿಐಜಿ ರೂಪಾ ನಾಲ್ಕು ಪುಟಗಳ ವರದಿಯನ್ನು ಸಿದ್ಧಪಡಿಸಿ ಡಿಜಿ ಅವರಿಗೆ ನೀಡಿದ್ದರು. ಡಿಐಜಿ ರೂಪಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿರುವ ಕೆಲ ಕೈದಿಗಳು ಜೈಲಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಇದರಿಂದ ಎಚ್ಚೆತ್ತ ಪರಪ್ಪನ ಅಗ್ರಹಾರದ ಜೈಲು ಅಧೀಕ್ಷಕ ಕೃಷ್ಣ ಕುಮಾರ್, ಹಲವು ಕೈದಿಗಳನ್ನು ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಿಗೆ ಸ್ಥಳಾಂತರಿಸಿದ್ದಾರೆ. ಅದರಂತೆ ಡಿಐಜಿ ರೂಪಾ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾದ ನಾಲ್ವರು ಕೈದಿಗಳನ್ನು ಮೈಸೂರಿನ ಕೇಂದ್ರೀಯ ಕಾರಾಗೃಹಕ್ಕೆ ಶನಿವಾರವೇ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.