ಮೈಸೂರು; ಅರಮನೆಯ ನಾಲ್ಕು ಆನೆಗಳು ಗುಜರಾತ್ಗೆ ಸ್ಥಳಾಂತರ
ಮೈಸೂರು, ಡಿಸೆಂಬರ್ 16; ಮೈಸೂರು ಅರಮನೆಯಲ್ಲಿ ಆಶ್ರಯ ಪಡೆದಿದ್ದ, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದ ನಾಲ್ಕು ಹೆಣ್ಣಾನೆಗಳನ್ನು ಅರಣ್ಯ ಇಲಾಖೆ ಗುಜರಾತ್ ರಾಜ್ಯಕ್ಕೆ ಸ್ಥಳಾಂತರಿಸಿದೆ. ಜೆಮಿನಿ ಸರ್ಕಸ್ನಿಂದ ರಕ್ಷಣೆ ಮಾಡಲಾಗಿದ್ದ ಆನೆಗಳನ್ನು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅರಮನೆಗೆ ತಂದು ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು.
ಸೀತಾ (36), ರೂಬಿ (44), ಜೆಮಿನಿ (31), ರಾಜೇಶ್ವರಿ (27) ಆನೆಗಳನ್ನು ನಾಲ್ಕು ಟ್ರಕ್ಗಳ ಮೂಲಕ ಸುರಕ್ಷಿತವಾಗಿ ಗುಜರಾತ್ನಲ್ಲಿರುವ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಅರಮನೆಯಲ್ಲಿ ಒಟ್ಟು 6 ಆನೆಗಳಿದ್ದು, ಸದ್ಯ ನಾಲ್ಕು ಆನೆಗಳು ಪುನರ್ ವಸತಿ ಕೇಂದ್ರದಲ್ಲಿ ಆಶ್ರಯ ಪಡೆಯಲಿವೆ.
ಆನೆಗಳು ಸಿಕ್ಕಿದ್ದು ಹೇಗೆ?; ನ್ಯಾಯಾಲಯದ ನಿರ್ದೇಶನದ ಮೇರೆಗೆ ಈ 6 ಆನೆಗಳನ್ನು ಜೆಮಿನಿ ಸರ್ಕಸ್ನಿಂದ ರಕ್ಷಿಸಲಾಗಿತ್ತು. ಬಳಿಕ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಆನೆಗಳ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಆರು ಹೆಣ್ಣಾನೆಗಳು ಅರಮನೆ ಆವರಣದಲ್ಲಿದ್ದು, ದಸರಾ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಪೂಜೆಯ ವೇಳೆ ಬಳಕೆಯಾಗುತ್ತಿದ್ದವು. ಉಳಿದ ಅವಧಿಯಲ್ಲಿ ಅರಮನೆಯಲ್ಲಿನ ಆನೆ ಸಫಾರಿಯ ಪ್ರಮುಖ ಆಕರ್ಷಣೆಯಾಗಿದ್ದವು.

ಕೊರೊನಾದಿಂದ ಸಫಾರಿ ಬಂದ್; ಕೋವಿಡ್ ಪರಿಸ್ಥಿತಿಯಲ್ಲಿ ಅರಮನೆಗೆ ಪ್ರವಾಸಿಗರನ್ನು ನಿರ್ಬಂಧಿಸಲಾಯಿತು. ಈ ವೇಳೆ ಆನೆ ಸಫಾರಿಯನ್ನು ನಿಲ್ಲಿಸಲಾಯಿತು. ಇವುಗಳ ನಿರ್ವಹಣೆಗೆ ಸರಕಾರ ಅಥವಾ ಅರಣ್ಯ ಇಲಾಖೆಯಿಂದ ಯಾವುದೇ ನೆರವು ಇಲ್ಲದ ಹಿನ್ನೆಲೆಯಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವುಗಳನ್ನು ಗುಜರಾತ್ನ ಇಸ್ಕಾನ್ ಸಂಸ್ಥೆಯ ಒಡೆತನದಲ್ಲಿರುವ ಶ್ರೀರಾಧಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಯನ್ನು ಕೋರಿದ್ದರು.
"ಎಲ್ಲಾ ಮುನ್ನೆಚ್ಚರಿಕೆ ಕ್ರಮದೊಂದಿಗೆ ಸ್ಥಳಾಂತರಿಸಲು ವನ್ಯಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳು ಅನುಮತಿ ನೀಡಿದ್ದರು. ಡಾ. ರಮೇಶ್ ಆನೆಗಳ ಆರೋಗ್ಯ ಪರಿಶೀಲಿಸಿ ದೃಢೀಕರಿಸಿದ್ದರು. ಆನೆಗಳಿಗೆ ಟಿಬಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎನ್ನುವುದನ್ನು ಖಚಿತ ಪಡಿಸಿದ ನಂತರ ನಾಲ್ಕು ಆನೆಗಳನ್ನು ಗುಜರಾತಿಗೆ ಸ್ಥಳಾಂತರಿಸಲಾಗಿದೆ'' ಎಂದು ಡಿಸಿಎಫ್ ಕರಿಕಾಳನ್ ಹೇಳಿದ್ದಾರೆ.
Recommended Video
ಗುಜರಾತ್ನಲ್ಲಿ ಇಸ್ಕಾನ್ ಸಂಸ್ಥೆಯ ಒಡೆತನದಲ್ಲಿರುವ ಶ್ರೀರಾಧಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿನ ಪುನರ್ವಸತಿ ಕೇಂದ್ರದಲ್ಲಿ 50 ಆನೆಗಳನ್ನು ಸಾಕಲಾಗುತ್ತಿದೆ. ಮೈಸೂರು ಅರಮನೆಯಿಂದ ಈಗ ನಾಲ್ಕು ಆನೆಗಳನ್ನು ಅಲ್ಲಿಗೆ ಕಳಿಸಲಾಗಿದೆ.
ಪುನರ್ ವಸತಿ ಕೇಂದ್ರದಲ್ಲಿ ಸುಸಜ್ಜಿತ ವ್ಯವಸ್ಥೆ ಇದೆ. ಆನೆಗಳ ಆರೋಗ್ಯ ನೋಡಿಕೊಳ್ಳಲು ವೈದ್ಯರು ಸಹ ಇದ್ದಾರೆ. ಈ ಹಿಂದೆಯೇ ಮೈಸೂರು ಅರಮನೆ ಆನೆಗಳ ನಿರ್ವಹಣೆಗೆ ಖರ್ಚು ನೀಡುವಂತೆ ಅರಣ್ಯ ಇಲಾಖೆಗೆ ಕೇಳಿತ್ತು. ಆದರೆ ಅರಣ್ಯ ಇಲಾಖೆ 3 ವರ್ಷಗಳ ಕಾಲ ಸಾಕುವಂತೆ ಕೇಳಿಕೊಂಡಿತ್ತು.
ಈಗ ಅರಮನೆಯಿಂದ ಮತ್ತೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಿ ಗುಜರಾತ್ಗೆ ಆನೆಗಳನ್ನು ಸ್ಥಳಾಂತರ ಮಾಡಲಾಗಿದೆ. ನಾಲ್ಕು ಲಾರಿಗಳನ್ನು ಸುರಕ್ಷಿತವಾಗಿ ಆನೆಗಳನ್ನು ಸಾಗಿಸಲಾಗಿದೆ.
ಆರೋಗ್ಯ ತಪಾಸಣೆ; ಆನೆಗಳನ್ನು ಗುಜರಾತ್ಗೆ ಸ್ಥಳಾಂತರ ಮಾಡಲು ಪ್ರಸ್ತಾವನೆ ಸಿದ್ಧವಾಗುತ್ತಿದ್ದಂತೆ ಅವುಗಳ ಆರೋಗ್ಯ ಪರೀಕ್ಷೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿತ್ತು. ಸುಮಾರು 2 ರಿಂದ 3 ಸಾವಿರ ಕಿ. ಮೀ. ಗಳ ಪ್ರಯಾಣ ಮಾಡಬೇಕಿದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿತ್ತು.
ಅರಮನೆಯಿಂದ ಮನವಿ ಸ್ವೀಕಾರ ಮಾಡಿ, ಅರಣ್ಯ ಇಲಾಖೆ ಒಪ್ಪಿಗೆ ಪಡೆದು, ಬಳಿಕ ಗುಜರಾತ್ ಸರ್ಕಾರದ ಒಪ್ಪಿಗೆಯನ್ನು ಪಡೆದು ಆನೆಗಳ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗಿತ್ತು. ಮಂಗಳವಾರ ರಾತ್ರಿ ಅರಮನೆಯಿಂದ ಆನೆಗಳು ಪ್ರಯಾಣ ಆರಂಭಿಸಿವೆ.












Click it and Unblock the Notifications