ಮುಂಬೈ: ಪದ್ಮಶ್ರೀ ಪುರಸ್ಕೃತ ನಟ, ಲೇಖಕ ಟಾಮ್ ಆಲ್ಟರ್ ನಿಧನ
ಮುಂಬೈ, ಸೆಪ್ಟೆಂಬರ್ 30: ಖ್ಯಾತ ನಟ, ಪತ್ರಕರ್ತ, ರಂಗಭೂಮಿ ಕಲಾವಿದ, ಬರಹಗಾರ ಥಾಮಸ್ ಬೀಚ್ ಆಲ್ಟರ್ ಸೆ.29 ರಂದು ಮುಂಬೈಯಲ್ಲಿ ನಿಧನರಾದರು. ಟಾಮ್ ಆಲ್ಟರ್ ಎಂದೇ ಪ್ರಸಿದ್ಧರಾಗಿದ್ದ 67 ವರ್ಷದ ಕ್ರೀಡಾ ಪತ್ರಕರ್ತ ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಅಮೆರಿಕ ಮೂಲದ ಭಾರತೀಯ ನಟ ಟಾಮ್ ಅವರು ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಸರ್ಕಾರ ಅವರಿಗೆ ಉನ್ನತ ನಾಗರಿಕ ಗೌರವವಾದ ಪದ್ಮಶ್ರೀ(2008 ರಲ್ಲಿ)ಯನ್ನು ನೀಡಿ ಸನ್ಮಾನಿಸಿತ್ತು.
ಗಾಂಧಿ, ಕ್ರಾಂತಿ, ದೇಸ್ ಪರ್ದೇಸ್, ಆನರ್ ಕಿಲ್ಲಿಂಗ್, ಅವತಾರ್ ಸೇರಿದಂತೆ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಟಾಮ್, ಹಲವು ಟಿವಿ ಶೋಗಳಲ್ಲೂ ನಟಿಸಿದ್ದರು.
ಅಮರಿಕದ ಕ್ರಿಶ್ಚಿಯನ್ ಮಿಶಿನರಿಯ ಪುತ್ರರಾದ ಟಾಮ್ ಜನಿಸಿದ್ದು ಭಾರತದ ಉತ್ತರಖಾಂಡದ ಮುಸ್ಸೂರಿಯಲ್ಲಿ. 1950, ಜೂನ್ 22 ರಂದು ಜನಿಸಿದ ಟಾಮ್ ಅವರ ಹೆಸರು ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಅಜರಾಮರವಾಗಿದೆ.
ಸಿನೆಮಾ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಟಾಮ್ ಅವರಿಗೆ ಪತ್ರಿಕೋದ್ಯಮವೆಂದರೆ ತುಂಬು ಆಸಕ್ತಿ. ಅದರಲ್ಲೂ ಕ್ರೀಡಾ ಪತ್ರಿಕೋದ್ಯಮ ಅವರ ಇಷ್ಟದ ಕ್ಷೇತ್ರ. ಮೊಟ್ಟಮೊದಲ ಬಾರಿಗೆ ಚಾನೆಲ್ ವೊಂದರಲ್ಲಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಸಂದರ್ಶನ ಮಾಡಿದ ಕೀರ್ತಿ ಇವರದು.
ಇವರ ನಿಧನಕ್ಕೆ ಬಾಲಿವುಡ್ ನಟರು ಸೇರಿದಂತೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ.