'New Year, Same Beer' ಎಂದ ಮದ್ಯದ ದೊರೆ ಮಲ್ಯಗೆ ಮರ್ಮಾಘಾತ!
ಮುಂಬೈ, ಜನವರಿ.01: ವಿಶ್ವದಲ್ಲೇ ಮದ್ಯದ ದೊರೆ ಎಂದಾಕ್ಷಣ ನೆನಪಿಗೆ ಬರುವ ಹೆಸರೇ ವಿಜಯ್ ಮಲ್ಯ. ಹೊಸ ವರ್ಷಾಚರಣೆ ದಿನ ಎಣ್ಣೆ ಹೊಡೆಯುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಇವರನ್ನು ಜ್ಞಾಪಿಸಿಕೊಳ್ಳುತ್ತಾರೆ.
New Year, Same Beer ಹೊಸ ವರ್ಷವನ್ನು ಹಳೆಯ ಬಿಯರ್ ಜೊತೆ ಆಚರಿಸಿಕೊಳ್ಳಿ ಎಂದು ಸ್ವತಃ ವಿಜಯ್ ಮಲ್ಯ ಎಲ್ಲರಿಗೂ ವಿಶಿಷ್ಟವಾಗಿ ಹೊಸ ವರ್ಷದ ಶುಭಾಷಯವನ್ನು ಕೋರಿದ್ದರು. ಹೀಗೆ ಹೊಸ ವರ್ಷಾಚರಣೆಯ ಮೂಡ್ ನಲ್ಲಿದ್ದ ಮದ್ಯದ ದೊರೆಗೆ ವರ್ಷಾರಂಭದಲ್ಲೇ ಕೋರ್ಟ್ ಶಾಕ್ ಕೊಟ್ಟಿದೆ.
ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಲು ಬ್ಯಾಂಕ್ ಅಪೀಲು
ಆರ್ಥಿಕ ಅಪರಾಧಿ ಎಂದು ಗುರುತಿಸಿಕೊಂಡಿರುವ ವಿಜಯ್ ಮಲ್ಯರ ಆಸ್ತಿ ಹರಾಜು ಹಾಕಲು ಮುಂಬೈನ ಆರ್ಥಿಕ ಅಪರಾಧ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಕೋರ್ಟ್ ಅನುಮತಿ ನೀಡಿದೆ. ಆ ಮೂಲಕ ಸಾಲ ಮರುಪಾವತಿ ಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಮೇಲ್ಮನವಿ ಸಲ್ಲಿಕೆಗೆ ಅವಕಾಶ ನೀಡಿದ ಕೋರ್ಟ್
ಮದ್ಯದ ದೊರೆ ವಿಜಯ್ ಮಲ್ಯರಿಂದ ವಶಕ್ಕೆ ಪಡೆದ ಅಸ್ಥಿರ ಆಸ್ತಿಗಳನ್ನು ಹರಾಜು ಹಾಕಲು ಮುಂಬೈನ ಪಿಎಂಎಲ್ಎ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಜನವರಿ.18ರವರೆಗೂ ಈ ಆದೇಶವನ್ನು ತಡೆ ಹಿಡಿಯಲಾಗಿದ್ದು, ವಿಜಯ್ ಮಲ್ಯ ಅಥವಾ ಬ್ಯಾಂಕ್ ಗಳು ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ.
ವಿಜಯ್ ಮಲ್ಯ ಅಸ್ಥಿರ ಆಸ್ತಿ ಹರಾಜಿಗೆ ಒಪ್ಪಿಗೆ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ವಿಜಯ್ ಮಲ್ಯ ಅವರಿಗೆ ಸಂಬಂಧಿಸಿದ ಅಸ್ಥಿರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಪೈಕಿ ಅಸ್ಥಿರ ಆಸ್ತಿ, ಎಂದರೆ ಬ್ಯಾಂಕ್ ಬಾಂಡ್, ಕಂಪನಿ ಷೇರುಗಳನ್ನು ಹರಾಜು ಹಾಕಲು ಎಬಿಐ ಒಕ್ಕೂಟ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಕೋರ್ಟ್ ಅಸ್ಥಿರ ಆಸ್ತಿಗಳನ್ನು ಹರಾಜು ಹಾಕುವ ಮೂಲಕ ಹಣ ಮರುಪಾವತಿಗೆ ಅನುಮತಿ ನೀಡಿದೆ.
ಅಸ್ಥಿರ ಆಸ್ತಿ ಹರಾಜಿಗೆ ವಿಜಯ್ ಮಲ್ಯ ಅಭ್ಯಂತರವಿಲ್ಲ
ಕಳೆದ ಜನವರಿ.05ರಂದು ವಿಜಯ್ ಮಲ್ಯರನ್ನು ದೇಶದಿಂದ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ಒಕ್ಕೂಟದಿಂದ ವಿಜಯ್ ಮಲ್ಯ 6,203.35 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದರು. ಕಳೆದ 2013ರಿಂದ ಈವರೆಗೆ ಪಡೆದ ಸಾಲದ ಮೇಲೆ ಶೇ.11.5ರಷ್ಟು ಬಡ್ಡಿ ಸೇರಿದಂತೆ ಒಟ್ಟು ಸಾಲದ ಮೊತ್ತ 11 ಸಾವಿರ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ.
ಸಾಲ ಮರುಪಾವತಿಸಲು ಟೈಮ್ ಕೇಳಿದ್ದ ಮಲ್ಯ
ಕೋಟಿ ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿ ಆಗಿರುವ ವಿಜಯ್ ಮಲ್ಯ, ಸಾಲ ಮರು ಪಾವತಿ ಮಾಡಲು ತಾವು ಸಿದ್ಧ ಎಂದೇ ಹೇಳಿಕೊಳ್ಳುತ್ತಾ ಬಂದಿದ್ದಾರೆ. ಲಂಡನ್ ನಲ್ಲಿರುವ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೇಂದ್ರ ಸರ್ಕಾರವು ಮನವಿ ಸಲ್ಲಿಸಿದೆ. ಇನ್ನೊಂದಡೆ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದೇನೆಯೇ ಹೊರತೂ ಅದು ವೈಯಕ್ತಿಕ ಸಾಲವಲ್ಲ ಎಂಬ ವಾದ ಮಂಡಿಸುತ್ತಿದ್ದಾರೆ. ಜೊತೆಗೆ ಸಾಲ ಮರುಪಾವತಿಗೆ ತಾವು ಸಿದ್ಧರಿದ್ದು, ಅದಕ್ಕಾಗಿ ಕಾಲಾವಕಾಶ ನೀಡುವಂತೆ ಹೇಳುತ್ತಿದ್ದಾರೆ.