ಇರಾಕ್ ಉಗ್ರ ಸಂಘಟನೆ ಸೇರಿದ್ದ ಮುಂಬೈ ಯುವಕ ಸಾವು
ಮುಂಬೈ, ಆ.28 : ಇರಾಕ್ನಲ್ಲಿ ಅಂತರ್ಯುದ್ಧಕ್ಕೆ ನಡೆಸುತ್ತಿರುವ ಐಎಸ್ಐಎಸ್ ಸಂಘಟನೆಗೆ ಸೇರ್ಪಡೆಗೊಂಡಿದ್ದ ಮುಂಬೈ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಒಟ್ಟು ನಾಲ್ವು ಭಾರತೀಯ ಯುವಕರು ಸಂಘಟನೆ ಸೇರಿದ್ದಾರೆ ಎಂಬ ಅಂಶ ಕೆಲವು ದಿನಗಳ ಹಿಂದೆ ಬಹಿರಂಗವಾಗಿತ್ತು.
ಇರಾಕ್ನ ಸುನ್ನೀ ಉಗ್ರಗಾಮಿ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಎಸ್ಐಎಸ್) ಸೇರಿದ್ದ ಮಹಾರಾಷ್ಟ್ರದ ಕಲ್ಯಾಣ್ನಿಂದ ನಾಪತ್ತೆಯಾಗಿ ಯುವಕ ಆರಿಫ್ ಫಯಾಜ್ ಮಜೀದ್ ಎಂಬಾತ ಹತ್ಯೆಗೀಡಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಕಲ್ಯಾಣ್ ನಿವಾಸಿಯಾದ ವೈದ್ಯರೊಬ್ಬರ ಮಗನಾಗಿದ್ದ ಮಜೀದ್, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದನು. ಈತನೊಂದಿಗೆ ಇರಾಕ್ಗೆ ತೆರಳಿದ್ದ ಶಾಹೀನ್ ಫಾರೂಕಿ ಟಂಕಿ ಎಂಬ ಯುವಕ ಮಂಗಳವಾರ ರಾತ್ರಿ ಆತನ ಮನೆಗೆ ದೂರವಾಣಿ ಕರೆ ಮಾಡಿ ಮಜೀದ್ ಹತ್ಯೆಗೀಡಾಗಿರುವ ವಿಚಾರವನ್ನು ತಿಳಿಸಿದ್ದಾನೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. [ಪತ್ರಕರ್ತನ ರುಂಡ ಚೆಂಡಾಡಿದ ಇರಾಕ್ ಉಗ್ರರು]
ಕಳೆದ ಮೇ ತಿಂಗಳಲ್ಲಿ ಥಾಣೆ ಜಿಲ್ಲೆಯ ಕಲ್ಯಾಣ್ ಪೊಲೀಸ್ ಠಾಣೆಯಲ್ಲಿ ಆರಿಫ್ ಫಯಾಜ್ ಮಜೀದ್, ಅಮನ್ ನಯೀಮ್ ತಾಂಡೇಲ್, ಶಾಹೀನ್ ಫಾರೂಕಿ ಟಂಕಿ ಮತ್ತು ಫಹಾದ್ ತನ್ವೀರ್ ಶೇಖ್ ಎಂಬ ನಾಲ್ವರು ಯುವಕರು ನಾಪತ್ತೆಯಾಗಿರುವುದಾಗಿ ಹೆತ್ತವರು ದೂರು ನೀಡಿದ್ದರು. ಈ ನಾಲ್ವರು ಮೇ 23ರಂದು ಯಾತ್ರಿಗಳ ತಂಡದೊಂದಿಗೆ ಬಾಗ್ಧಾದ್ಗೆ ಪ್ರಯಾಣ ಬೆಳೆಸಿದ್ದರು ಎಂದು ಶಂಕಿಸಲಾಗಿತ್ತು. [ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ]
ಆರಿಫ್ ಮಜೀದ್ ಮನೆಯಿಂದ ನಾಪತ್ತೆಯಾಗುವ ವೇಳೆ ಪೋಷಕರಿಗೆ ಬರೆದಿಟ್ಟಿದ್ದ ಪತ್ರದಲ್ಲಿ ಸಮುದಾಯದಲ್ಲಿನ ಹಲವಾರು ಲೋಪದೋಷಗಳ ಬಗ್ಗೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದ. ತಾನು ತನ್ನ ಜೀವನದ ಅತೀ ದೊಡ್ಡ ಪ್ರಯಾಣಕ್ಕೆ ಸಜ್ಜಾಗಿದ್ದು ಈ ಸಂಬಂಧ ಗೆಳೆಯನನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ಪತ್ರದಲ್ಲಿ ಹೇಳಿಕೊಂಡಿದ್ದ ಎಂದು ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.












Click it and Unblock the Notifications