ರಮಾನಾಥ ರೈ ವಿರುದ್ದ ಎಸಿಬಿ, ಲೋಕಾಯುಕ್ತಕ್ಕೆ ದೂರು : ಹರಿಕೃಷ್ಣ ಬಂಟ್ವಾಳ್
ಮಂಗಳೂರು, ನವೆಂಬರ್ 15: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಸೇರಿದಂತೆ ಎಸಿಬಿಗೆ ದೂರು ನೀಡುವುದಾಗಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ತಿಳಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಚಿವ ರಮಾನಾಥ್ ರೈ ಅವರು ಸರಕಾರಿ ಭೂಮಿಯನ್ನು ಕಬಳಿಸಿರುವ ವಿಚಾರ ಸೇರಿದಂತೆ ತಮ್ಮ ಪತ್ನಿಯ ಹೆಸರಿನಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ ಕುರಿತು ದಾಖಲೆ ಸಮೇತ ಲೋಕಾಯುಕ್ತರಿಗೆ ದೂರು ನೀಡಲಾಗುವುದು," ಎಂದು ತಿಳಿಸಿದರು.

ಸಚಿವ ರೈ ಅವರ ಎಲ್ಲಾ ಅಕ್ರಮಗಳ ಬಗ್ಗೆ ದಾಖಲೆಗಳು ತನ್ನ ಬಳಿ ಇರುವುದಾಗಿ ಹೇಳಿದ ಅವರು, "ಸಚಿವ ರೈ ಅವರ ಎಲ್ಲಾ ಅಕ್ರಮಗಳ ದಾಖಲೆಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಹಾಗು ಎಸಿಬಿ ಅಧಿಕಾರಿಗಳಿಗೆ ನೀಡುವುದಾಗಿ," ಮಾಹಿತಿ ನೀಡಿದರು.
ಸಚಿವರು ರಮಾನಾಥ ರೈ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದು ತಮ್ಮ ಅಕ್ರಮ ಆಸ್ತಿ ಗಳಿಕೆ ಕುರಿತಂತೆ ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ ಹರಿಕೃಷ್ಣ ಬಂಟ್ವಾಳ್, "ರಮಾನಾಥ್ ರೈ ಅವರ ಪತ್ನಿ ಅಕ್ರಮ ಸಕ್ರಮದ ಮೂಲಕ ಬಡವರ ಜಾಗ ಕಬಳಿಸಿದ್ದಾರೆ," ಎಂದು ದೂರಿದರು.
ಹೆಂಡತಿಯ ಹೆಸರಿನಲ್ಲಿ 3 ಎಕರೆ 4 ಸೆಂಟ್ಸ್ ಜಾಗ ಕಬಳಿಸಲಾಗಿದೆ ಎಂದು ಹೇಳಿದ ಅವರು, "ಕಳ್ಳಿಗೆಯಲ್ಲಿ ರೈ ಸರ್ವೆ ನಂ.97/01 ರಲ್ಲಿ 10 ಎಕರೆ ಕಬಳಿಸಿ ರಬ್ಬರ್ ತೋಟ ಮಾಡಿದ್ದಾರೆ," ಎಂದು ಆರೋಪಿಸಿದರು.
ಸಚಿವ ರೈ ಅವರ ಸರಕಾರಿ ಭೂ ಕಬಳಿಕೆ ಪ್ರಕರಣದ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.












Click it and Unblock the Notifications