ಜಯಪ್ರಕಾಶ್ ಹೆಗ್ಡೆ ಯಾಕೆ ಹೀಗೆ ಹೇಳಿದ್ರು? ಚರ್ಚೆಗೆ ಕಾರಣವಾಯ್ತು ಆ ಹೇಳಿಕೆ
ಮಂಗಳೂರು, ಮೇ 02: ಬಿಜೆಪಿ ಮುಖಂಡ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆಯೊಂದು ಭಾರೀ ಕುತೂಹಲ ಮೂಡಿಸಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಪಕ್ಷದ ನಾಯಕರು ತಪ್ಪು ಮಾಡಿದರೆ ನಾನು ಅದನ್ನು ತಪ್ಪು ಎಂದು ಹೇಳುತ್ತೇನೆ. ನನ್ನನ್ನು ಇನ್ನೊಮ್ಮೆ ಉಚ್ಛಾಟಿಸಿದರೂ ಪರವಾಗಿಲ್ಲ ಎಂದು ಹೇಳಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ .
ಮಂಗಳೂರಿನಲ್ಲಿ ಬುಧವಾರ (ಮೇ.01) ಮಾಜಿ ಸಚಿವ ಬಿಎ ಮೊಹಿದಿನ್ ಅವರ ಆತ್ಮಕಥನದ ಇಂಗ್ಲಿಷ್ ಅನುವಾದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ಒಂದು ಪಕ್ಷದಲ್ಲಿರುವವರು ಆ ಪಕ್ಷದ ನಾಯಕನ ಮಾತನ್ನು ಒಪ್ಪಿಕೊಳ್ಳಬೇಕು ಎಂಬ ಅಭಿಪ್ರಾಯವಿದೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ, ಅದು ಪ್ರಜಾಪ್ರಭುತ್ವವಲ್ಲ ಎಂದರು.
ನಾನು ನಮ್ಮ ಪಕ್ಷದ ನಾಯಕರು ತಪ್ಪು ಮಾಡಿದರೆ ಅದನ್ನೂ ತಪ್ಪು ಎಂದು ಹೇಳುತ್ತೇನೆ. ತಪ್ಪನ್ನು ತಪ್ಪು ಎಂದು ಹೇಳುವುದು ತಪ್ಪು ಎಂದಾದರೆ ನಾನು ಆ ತಪ್ಪನ್ನು ಮತ್ತೆ ಮತ್ತೆ ಮಾಡುತ್ತೇನೆ. ಇದರಿಂದ ಏನು ಬೇಕಾದರೂ ಆಗಲಿ. ಹೆಚ್ಚೆಂದರೆ ನನ್ನನ್ನು ಉಚ್ಚಾಟಿಸಬಹುದು. ಇದಕ್ಕೂ ಮೊದಲು ಒಮ್ಮೆ ನನ್ನನ್ನು ಉಚ್ಚಾಟಿಸಿದ್ದಾರೆ . ಮತ್ತೊಮ್ಮೆ ಉಚ್ಚಾಟನೆ ಆಗಬಹುದು ಅಷ್ಟೇ ಎಂದು ಮಾರ್ಮಿಕವಾಗಿ ನುಡಿದರು.

ಜಯಪ್ರಕಾಶ್ ಹೆಗ್ಡೆಯವರ ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗಳಿಗೆ ನಾಂದಿಹಾಡಿದೆ. ಜಯಪ್ರಕಾಶ್ ಹೆಗ್ಡೆ ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎಂಬ ಗುಸುಗುಸು ಸುದ್ದಿ ಈ ಹಿಂದೆ ಹರಿದಾಡುತ್ತಿತ್ತು. ಲೋಕಸಭಾ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದಕ್ಕಾಗಿ ಭಾರೀ ಕಸರತ್ತು ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ವಂಚಿತರಾದರು.ಆದರೂ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡರು.












Click it and Unblock the Notifications