ವಿಡಿಯೋ: 'ತೀಟೆ ಸುಬ್ಬ' ಮದುಮಗನಿಗೆ ಕ್ವಾಟ್ಲೆ ಕೊಟ್ಟ ಸ್ನೇಹಿತರು
Recommended Video

ಮಂಗಳೂರು, ಫೆಬ್ರವರಿ 27: ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೆ ಸಂದರ್ಭಗಳಲ್ಲಿ ಊರಿನ ಜನ ಹೊರೆ ಕಾಣಿಕೆ ಸಲ್ಲಿಸುವುದು ಸಹಜ. ಆದರೆ ಇಲ್ಲೊಂದು ಮದುವೆಗೆ ಹೊರೆ ಕಾಣಿಕೆ ಸಲ್ಲಿಕೆಯಾಗಿದೆ. ಅದರ ಸಹಿತ ಮದುವೆ ಮಂಟಪವನ್ನು ಏರಿದ ಮದುಮಗನ ಸ್ನೇಹಿತರು ಹೊಸ ಮದುಮಕ್ಕಳಿಗೆ ಹೊರೆ ಕಾಣಿಕ ಸಮರ್ಪಿಸಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಂಟ್ವಾಳದ ರಾಯಿ ಎಂಬಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ರಾಕೇಶ್ ಎಂಬಾತ ಸ್ನೇಹಿತರ ಕೀಟಲೆಗೆ ತಬ್ಬಿಬ್ಬಾದ ಮದುಮಗ. ಸ್ನೇಹಿತರ ಮದುವೆಯಲ್ಲಿ ಗೆಳೆಯರೊಂದಿಗೆ ಸೇರಿ ಹೊಸದಾಗಿ ಮದುವೆಯಾದ ಜೋಡಿಗಳಿಗೆ ರಾಕೇಶ್ ಕೀಟಲೆ, ಕಾಲೆಳೆಯುವುದು ಮಾಡುತ್ತಿದ್ದರು.
ಹೀಗೆ ಕೀಟಲೆಗೆ ಗುರಿಯಾದವರು ರಾಕೇಶ್ ನ ಮದುವೆ ಸಂದರ್ಭಕ್ಕಾಗಿ ಕಾಯುತ್ತಿದ್ದರು. ಅಂತೂ ರಾಕೇಶ್ ನ ಮದುವೆ ದಿನ ಬಂತು. ಫೆಬ್ರವರಿ 20ರಂದು ರಾಕೇಶ್ ಹಾಗೂ ಸುಷ್ಮಾ ಮದುವೆ ದಿನವಾಗಿತ್ತು. ಅದರ ಹಿಂದಿನ ದಿನ ಅಂದರೆ ಫೆಬ್ರವರಿ 19ರಂದು ರಾಕೇಶ್ ಗೆ ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಟೊಮೆಟೊ, ಹಾಲು, ಸಗಣಿ ನೀರು ಸುರಿದರು
ಮದುಮಗ ರಾಕೇಶ್ ಶಾಸ್ತ್ರೋಸ್ಥವಾಗಿ ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದರೆ ಇತ್ತ ಸ್ನೇಹಿತರು ಕುಚೇಷ್ಟೆಗೆ ತಯಾರಾಗಿದ್ದರು. ರಾಕೇಶ್ ಮೇಲೆ ಹಳಸಿದ ಟೊಮೆಟೊ, ಹಾಲು, ಸಗಣಿ ನೀರು ಸುರಿದಿದ್ದಾರೆ. ಬೇರೆ ಸ್ನೇಹಿತರ ಮದುವೆಯಲ್ಲಿ ವೇಳೆ ರೇಗಿಸುತ್ತಿದ್ದ ರಾಕೇಶ್ ನ ಮೇಲೆ ಸ್ನೇಹಿತರೂ 'ಸೇಡು' ತೀರಿಸಿಕೊಂಡು ಮಜಾ ತೆಗೆದುಕೊಂಡಿದ್ದಾರೆ.

ರಾಪಾಟದ ರಾಕೇಶನ ಮದಿಮೆ
ರಾಕೇಶ್ ನ ಮದುವೆ ದಿನ ಸಾರ್ವಜನಿಕ ಸ್ಥಳದಲ್ಲಿ ದೊಡ್ಡ ಬ್ಯಾನರ್ ಅಳವಡಿಸಿ 'ರಾಪಾಟದ ರಾಕೇಶನ ಮದಿಮೆ' ಎಂದು ಬರೆದು ಕಾರ್ಯಕ್ರಮಗಳ ನಿರೂಪಣೆಯನ್ನು ಹಾಸ್ಯ ಶೈಲಿಯಲ್ಲಿ ಮಾಡಿದ್ದರು ಗೆಳೆಯರು. ಮದುವೆ ದಿನವೂ ಮದುಮಗನನ್ನು ಬಿಡದ ಸ್ನೇಹಿತರು, ಪ್ಲಾನ್ ಮಾಡಿ ಹೊರೆ ಕಾಣಿಕೆಯನ್ನು ರೆಡಿ ಮಾಡಿದ್ದರು.

ಒಬೊಬ್ಬರು ಒಂದೊಂದು ತರಕಾರಿ ಹೊರೆ
ರಾಕೇಶ್ ನ ಸ್ನೇಹಿತರು ಒಬೊಬ್ಬರು ಒಂದೊಂದು ತರಕಾರಿಗಳನ್ನು ಹೊರೆ ಕಾಣಿಕೆಗೆ ಘೋಷಣೆ ಮಾಡಿ, ಸಿದ್ಧ ಮಾಡಿದ್ದರು. ಕೆಲವು ಸ್ನೇಹಿತರು ಪಟಾಕಿ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು. ನಂತರ ವಿವಿಧ ತರಕಾರಿಗಳ ಮಾಲೆಯನ್ನು ಮಾಡಿ ವಧು-ವರರು ಮದುವೆ ಮಂಟಪದಲ್ಲಿರುವಾಗಲೇ ಯುವಕರು, ಯುವತಿಯರು 'ಏರೆನ ಮದಿಮೆ... ರಾಕೇಶನ ಮದಿಮೆ' ಘೋಷಣೆ ಕೂಗುತ್ತಾ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಸಿ, ಮದುವೆ ಮಂಟಪದಲ್ಲೇ ಸಂಭ್ರಮಿಸಿದರು.

ಮೊದಲ ರಾತ್ರಿಗೂ ಅವಕಾಶ ಕೊಡಲಿಲ್ಲ
ಮದುಮಕ್ಕಳಿಗೆ ಬೃಹತ್ ಮಾಲೆ ಹಾಕಿ, ಸೆಲ್ಫಿ ತೆಗೆಸಿಕೊಂಡರು. ಸದ್ಯ ಮದುಮಗನಿಗೆ ಯುವಕರ ಕೀಟಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಸಕತ್ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೆ ರಾಕೇಶ್ ನ ಮೊದಲ ರಾತ್ರಿಗೂ ಅವಕಾಶ ನೀಡಿಲ್ಲ. ಮೊದಲ ರಾತ್ರಿಗೆ ಕೋಣೆಯನ್ನು ಸಿಂಗರಿಸಿದ್ದ ರಾಕೇಶ್ ನ ಸ್ನೇಹಿತರು, ನಂತರ ಅಲ್ಲೇ ಮಲಗಿ, ಮದುಮಕ್ಕಳನ್ನು ಹೊರಗಡೆ ಮಲಗಿಸಿದ್ದರು. ಎರಡನೇ ದಿನವೂ ರೂಮಿನ ಬಾಗಿಲಿನ ಕಿಟಕಿಗಳ ಲಾಕ್ ಗಳನ್ನು ತೆಗೆದು ಹಾಕಿದ್ದರು.

ಉಡುಪಿಗೆ ತೆರಳಿದರೂ ಸ್ನೇಹಿತರು ಬಿಡಲಿಲ್ಲ
ಸ್ನೇಹಿತರ ಕೀಟಲೆ ತಾಳಲಾರದೆ ನವದಂಪತಿ ಉಡುಪಿಯ ಚಿಕ್ಕಮ್ಮನ ಮನೆಗೆ ತೆರಳಿದ್ದರು. ಈ ವಿಷಯ ತಿಳಿದ ರಾಕೇಶ್ ಸ್ನೇಹಿತರು ಅಲ್ಲಿಗೂ ಹೋಗಿ 3ನೇ ದಿನದ ರಾತ್ರಿಯನ್ನು ಭಂಗಪಡಿಸಿದ್ದರು. ಈ ರೀತಿಯಾಗಿ ರಾಕೇಶ್ ಗೆ ಆತನ ಸ್ನೇಹಿತರು ಕೀಟಲೆ ನೀಡಿ ಕೊನೆಗೆ ಬಿಟ್ಟುಬಿಟ್ಟರು. ಸ್ನೇಹಿತರ ಮದುವೆಗಳಲ್ಲಿ ಭಾರಿ ಕೀಟಲೆ ನೀಡುತ್ತಿದ್ದ ರಾಕೇಶ್ ಗೆ ಆತನ ಸ್ನೇಹಿತರು ಸರಿಯಾಗಿ ಕಿಚಾಯಿಸಿದ್ದಾರೆ. ಸ್ನೇಹಿತರೆಲ್ಲಾ ಸೇರಿ ರಾಕೇಶ್ ಗೆ ಹೊರೆಕಾಣಿಕೆ ಸಮರ್ಪಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications