ಹಂಸಲೇಖ-ಪೇಜಾವರ ಶ್ರೀಗಳ ವಿಚಾರ; ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ
ಮಂಗಳೂರು, ನವೆಂಬರ್ 29; "ದೇವರನ್ನು ಎರಡು ವಿಧದಲ್ಲಿ ಸ್ತುತಿಸಬಹುದು. ಅದರಲ್ಲಿ ನಿಂದನಾ ಸ್ತುತಿ ಕೂಡಾ ಒಂದು. ಪೇಜಾವರ ಶ್ರೀಗಳನ್ನು ನಿಂದಿಸುವ ಮೂಲಕ ಸ್ತುತಿಸಲಾಗಿದೆ" ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ ಆರಂಭವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆ "ದೇವರನ್ನು ಎರಡು ವಿಧದಲ್ಲಿ ಸ್ತುತಿಸಬಹುದು. ಅದರಲ್ಲಿ ನಿಂದನಾ ಸ್ತುತಿ ಕೂಡಾ ಒಂದು. ಪೇಜಾವರ ಶ್ರೀಗಳನ್ನು ನಿಂದಿಸುವ ಮೂಲಕ ಸ್ತುತಿತಿಸಲಾಗಿದೆ. ಪೇಜಾವರರು ಬಾಳಿ ಬದುಕಿದ ರೀತಿ, ಅವರ ಬಗ್ಗೆ ಒಳ್ಳೆಯದನ್ನು ಹೇಳಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ" ಎಂದರು.
"ಪೇಜಾವರ ಶ್ರೀಗಳನ್ನು ತೆಗಳಿದ್ದಕ್ಕೆ ಪ್ರಪಂಚಾದ್ಯಂತ ಸುದ್ದಿಯಾಗಿದೆ. ಪೇಜಾವರ ಶ್ರೀಗಳ ಜೊತೆಗಿದ್ದ ಸಾತ್ವಿಕ ಶಕ್ತಿ ಜಾಗೃತವಾಗುತ್ತದೆ. ಅಷ್ಟರ ಮಟ್ಟಿಗೆ ಪೇಜಾವರರು ನಿಷ್ಕಲ್ಮಶ ವ್ಯಕ್ತಿ' ಎಂದು ವೀರೇಂದ್ರ ಹೆಗ್ಗಡೆ ಪೇಜಾವರ ಶ್ರೀಗಳ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಲಕ್ಷದೀಪೋತ್ಸವದ ಪ್ರಯುಕ್ತ ಸೋಮವಾರದಿಂದ ಡಿಸೆಂಬರ್ 4ರವರೆಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸೋಮವಾರ ಹೊಸಕಟ್ಟೆ ಉತ್ಸವ, ಮಂಗಳವಾರ ಕೆರೆಕಟ್ಟೆ ಉತ್ಸವ, ಬುಧವಾರ ಲಲಿತೋದ್ಯಾನ ಉತ್ಸವ, ಗುರುವಾರ ಕಂಚಿಮಾರುಕಟ್ಟೆ ಉತ್ಸವ, ಶುಕ್ರವಾರ ಗೌರಿಮಾರುಕಟ್ಟೆ ಉತ್ಸವ ಮತ್ತು ಶನಿವಾರ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ನಡೆಯಲಿದೆ.

6 ದಿನಗಳ ಕಾಲ ಲಕ್ಷ ದೀಪೋತ್ಸವ
6 ದಿನಗಳ ಕಾಲ ನಡೆಯುವ ಲಕ್ಷದೀಪೋತ್ಸವದ ಹಿನ್ನಲೆಯಲ್ಲಿ ಧರ್ಮಸ್ಥಳ ಲಕ್ಷ ಲಕ್ಷ ದೀಪಗಳಿಂದ ಮದುವಣಗಿತ್ತಿಯಂತೇ ಸಿಂಗಾರಗೊಂಡಿದೆ. ಶ್ರೀ ಮಂಜುನಾಥ ಸ್ವಾಮಿಯ ದೇಗುಲ, ಧರ್ಮಸ್ಥಳ ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಬೀಡು, ಮಹಾದ್ವಾರ, ವಸತಿ ಗೃಹಗಳು ವಿದ್ಯುತ್ ದೀಪಾಲಂಕಗಳಿಂದ ಆಕರ್ಷಕವಾಗಿ ಸಿಂಗಾರಗೊಳಿಸಲಾಗಿದ್ದು, ಭಕ್ತರ ಪಾಲಿಗೆ ಧರ್ಮಸ್ಥಳದಲ್ಲಿ ಸಾಕ್ಷಾತ್ ಸ್ವರ್ಗವೇ ಧರೆಗುಳಿದಂತೇ ಭಾಸವಾಗುತ್ತಿದೆ.

9ನೇ ವರ್ಷದ ಪಾದಯಾತ್ರೆ
ಮೊದಲ ದಿನದ ಅಂಗವಾಗಿ 9 ನೇ ವರ್ಷದ ಪಾದಯಾತ್ರೆ ಮಾಡಲಾಗಿದೆ. ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ವರೆಗೆ ಬೆಳ್ತಂಗಡಿ ತಾಲೂಕಿನ ಭಕ್ತರು ಪಾದಯಾತ್ರೆ ಮಾಡಿದ್ದಾರೆ. ಈ ಪಾದಯಾತ್ರೆಯಲ್ಲಿ ಸುಮಾರು 20 ಸಾವಿರ ಭಕ್ತರು ಭಾಗವಹಿಸಿದ್ದಾರೆ. ಶ್ರೀ ಮಂಜುನಾಥ ಪಾದಯಾತ್ರೆ ಸಮಿತಿ ಈ ಕಾರ್ಯಕ್ರಮ ನಡೆಸಿದ್ದು ಭಕ್ತರು ಸುಮಾರು 7 ಕಿಲೋ ಮೀಟರ್ ಪಾದಯಾತ್ರೆ ಮಾಡಿ ಮಂಜುನಾಥನ ದರ್ಶನ ಮಾಡಿದ್ದಾರೆ.

ಪೇಜಾವರ ಶ್ರೀಗಳ ಬಗ್ಗೆ ಮಾತು
ಪಾದಯಾತ್ರೆಯ ಬಳಿಕ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆದಿದ್ದು ಡಾ. ಡಿ. ವೀರೇಂದ್ರ ಹೆಗ್ಗಡೆ ಕ್ಷೇತ್ರದ ಭಕ್ತರಿಗೆ ಹಿತವಚನ ನೀಡಿದ್ದಾರೆ. ಭಾಷಣದ ಆರಂಭದಲ್ಲಿ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಪೇಜಾವರ ಶ್ರೀಗಳ ವಿರುದ್ಧ ಪರ-ವಿರುದ್ಧದ ಟೀಕೆಗಳ ಮಾತನಾಡಿದ್ದಾರೆ.
ಭಕ್ತರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಹೆಗ್ಗಡೆ, "ಭಕ್ತರು ಧರ್ಮಸ್ಥಳದ ನಿಜವಾದ ಆಸ್ತಿ, ಹೋಗುವಾಗ ಏನು ಕೊಂಡುಹೋಗುತ್ತೀಯಾ? ಅಂತಾ ಕೇಳಿದರೆ ನಾನು ಧೈರ್ಯದಿಂದ ಜನರ ಪ್ರೀತಿ ಅಂತಾ ಹೇಳುತ್ತೇನೆ. ಒಂದು ವಾರದಲ್ಲಿ20 ಲಕ್ಷ ರೂಪಾಯಿ ಮೌಲ್ಯದ ದಾನವನ್ನು ಭಕ್ತರು ಕ್ಷೇತ್ರಕ್ಕೆ ನೀಡಿದ್ದಾರೆ. ಇನ್ನೂ ಏನು ಬೇಕು? ಅಂತಾ ಕೇಳುತ್ತಿದ್ದಾರೆ. ಧರ್ಮಸ್ಥಳದಿಂದ ಆಗುವ ಕೆಲಸಗಳಿಂದ ಲೋಕ ಕಲ್ಯಾಣವಾಗಲಿ ಅಂತಾ ದೇವರಲ್ಲಿ ಪ್ರಾರ್ಥಿಸಿ" ಅಂತಾ ಭಕ್ತರಿಗೆ ಹೆಗ್ಗಡೆ ಕೇಳಿಕೊಂಡಿದ್ದಾರೆ.

ವಿವಿಧ ಕಾರ್ಯಕ್ರಮಗಳು
ಲಕ್ಷದೀಪೋತ್ಸವದ ಪ್ರಯುಕ್ತ ಸೋಮವಾರದಿಂದ ಡಿಸೆಂಬರ್ 4ರವರೆಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಬಾರಿಯೂ ಲಕ್ಷದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನ, ಸರ್ವಧರ್ಮ ಸಮ್ಮೇಳನ, ನಡೆಯಲಿದೆ.
ಡಿಸೆಂಬರ್2ರಂದು ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ 89ನೇ ವರ್ಷದ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಸಮ್ಮೇಳನವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟನೆ ಮಾಡಲಿದ್ದಾರೆ. ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಬೆಂಗಳೂರು ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಫ್ರೊ.ರಾಮಚಂದ್ರ ಜಿ.ಭಟ್ಟ ವಹಿಸಲಿದ್ದಾರೆ.
Recommended Video

ಸಾಹಿತ್ಯ ಸಮ್ಮೇಳನ ನಡೆಯಲಿದೆ
ಲಕ್ಷದೀಪೋತ್ಸವದ ಮತ್ತೊಂದು ಆಕರ್ಷಣೆ ಸಾಹಿತ್ಯ ಸಮ್ಮೇಳನವಾಗಿದ್ದು, ಡಿಸೆಂಬರ್ 3ರಂದು ನಡೆಯಲಿದೆ. ಸಾಹಿತ್ಯ ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಉದ್ಘಾಟನೆ ಮಾಡಿದರೆ,ಸಮ್ಮೇಳನ ದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ವಹಿಸಲಿದ್ದಾರೆ.
ಲಕ್ಷದೀಪೋತ್ಸವ 6 ದಿನಗಳ ಕಾಲವೂ ವಸ್ತು ಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿರಂತರ ಅನ್ನದಾನ ನಡೆಯಲಿದೆ. ಕಳೆದ ಬಾರಿ ಕೋವಿಡ್ ಕಾರಣದಿಂದ ಭಕ್ತರ ಸಂಖ್ಯೆ ಕಡಿಮೆಯಿದ್ದು, ಈ ಬಾರಿ ಲಕ್ಷಾಂತರ ಮಂದಿ ಭಕ್ತರು ಸೇರುವ ಸಾಧ್ಯತೆಗಳಿವೆ.












Click it and Unblock the Notifications