ನಾಗಾರಾಧನೆಗೆ ಭೂಮಿ ಬಿಟ್ಟುಕೊಟ್ಟ ಯುಟಿ ಖಾದರ್ ಕುಟುಂಬ
ಮಂಗಳೂರು, ಆಗಸ್ಟ್ 5: ಇಂದು ಶ್ರಾವಣ ಮಾಸದ ಮೊದಲ ಹಬ್ಬವಾಗಿ ನಾಗರಪಂಚಮಿಯನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ತುಳುನಾಡಿನಲ್ಲಿ ನಾಗಗಳಿಗೆ ವಿಶೇಷ ಮಹತ್ವವಿದೆ. ಇಂದು ಇಲ್ಲಿನ ಪ್ರತೀ ಕುಟುಂಬದವರೂ ನಾಗನಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ. ಆದರೆ ವಿಟ್ಲದ ಕುಟುಂಬವೊಂದಕ್ಕೆ, ತಮ್ಮ ನಾಗದ ಸಾನಿಧ್ಯ ಅನ್ಯಧರ್ಮೀಯರೊಬ್ಬರ ಜಾಗದಲ್ಲಿ ಸೇರ್ಪಡೆಯಾಗಿದ್ದು ನಾಗಾರಾಧನೆಗೆ ತೊಡಕಾಗಿತ್ತು. ಇದೀಗ ಆ ಅನ್ಯಧರ್ಮೀಯರೇ ಭೂಮಿಯನ್ನು ಈ ಕುಟುಂಬಕ್ಕೆ ಉಚಿತವಾಗಿ ನೀಡಿದ್ದಾರೆ. ಅವರು ಬೇರಾರೂ ಅಲ್ಲ, ಮಾಜಿ ಸಚಿವ ಯು.ಟಿ.ಖಾದರ್.
ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪುಣಚ ಸಮೀಪದ ಪರಿಯಾಲ್ತಡ್ಕ ಎನ್ನುವ ಪ್ರದೇಶ. ಇಲ್ಲಿನ ದಳವಾಯಿ ಕುಟುಂಬದ ಮನೆತನಕ್ಕೆ ಸೇರಿದ ಈ ಪ್ರದೇಶ ಭೂಮಸೂದೆ ಕಾನೂನಿನ್ವಯ ಬೇರೆ ಬೇರೆ ವ್ಯಕ್ತಿಗಳಿಗೆ ಹಂಚಲ್ಪಟ್ಟಿತು. ಈ ನಡುವೆ ದಳವಾಯಿ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿದ್ದ ನಾಗನ ಸಾನಿಧ್ಯವೂ ಅನ್ಯಧರ್ಮೀಯರೊಬ್ಬರ ಪಾಲಾಯಿತು.
ಇದರಿಂದಾಗಿ ದಳವಾಯಿ ಕುಟುಂಬ ಬೇರೊಂದು ಕಡೆಯಲ್ಲಿ ನಾಗನ ಆರಾಧನೆಯನ್ನು ಮಾಡಿಕೊಂಡು ಬರುತ್ತಿತ್ತು. ದಳವಾಯಿ ಕುಟುಂಬದಲ್ಲಿ ಕೆಲವು ವಿಘ್ನಗಳು ಕಂಡು ಬಂದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗಿದ್ದರು. ಪ್ರಶ್ನೆಯಲ್ಲಿ ದಳವಾಯಿ ಕುಟುಂಬ ಆರಾಧಿಸಿಕೊಂಡು ಬರುತ್ತಿದ್ದ ನಾಗ ಸಾನಿಧ್ಯ ಪೂಜೆಯಿಲ್ಲದೆ ಅನಾಥವಾಗಿದ್ದು, ಅದನ್ನು ಪುನರುಜ್ಜೀವನಗೊಳಿಸಿದರೆ ಸಂಕಷ್ಟ ಪರಿಹಾರವಾಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು.

ಆದರೆ ಆ ಭೂಮಿ ಮಾಜಿ ಸಚಿವ ಯು.ಟಿ.ಖಾದರ್ ಅವರ ತಂದೆ ಯು ಟಿ ಫರೀದ್ ಅವರದ್ದಾಗಿತ್ತು. ವಿಧಿಯಿಲ್ಲದೆ ದಳವಾಯಿ ಕುಟುಂಬ ಯು ಟಿ ಖಾದರ್ ಅವರಲ್ಲಿ ಈ ಬಗ್ಗೆ ತಿಳಿಸಿದಾಗ ಆ ಜಾಗವನ್ನು ಅವರು ಉಚಿತವಾಗಿ ನೀಡಿ ನಾಗಾರಾಧನೆಗೆ ಅನುವು ಮಾಡಿಕೊಟ್ಟಿದ್ದಾರೆ.
ಹಿಂದೂ ಧರ್ಮದ ಎಲ್ಲಾ ಆಚರಣೆಗಳಲ್ಲಿ ಬಹುತೇಕ ಭಾಗಿಯಾಗುವ ಖಾದರ್ ಅವರಿಗೆ ನಾಗಾರಾಧನೆಯ ಮಹತ್ವ ತಿಳಿದ ಕಾರಣಕ್ಕಾಗಿಯೇ ಭೂಮಿಯನ್ನು ನೀಡಿದ್ದರು. ಇದೀಗ ಈ ಜಾಗದಲ್ಲಿ ದಳವಾಯಿ ಕುಟುಂಬ ಅತ್ಯಂತ ಸಡಗರ ಸಂಭ್ರಮದಲ್ಲಿ ನಾಗಾರಾಧನೆಯನ್ನು ಮಾಡುತ್ತಿದೆ.












Click it and Unblock the Notifications