ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ : ವೀರಪ್ಪ ಮೊಯ್ಲಿ
ಮಂಗಳೂರು, ಸೆಪ್ಟಂಬರ್ 3: "ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ಜಿಡಿಪಿ ದರ 5.7 ಕ್ಕೆ ಕುಸಿದಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ," ಎಂದು ಕೇಂದ್ರದ ಮಾಜಿ ಸಚಿವ ಎಂ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ನೋಟು ಬ್ಯಾನ್ ಮಾಡಿದ್ದರಿಂದ ದೇಶದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ," ಎಂದು ಕಿಡಿಕಾರಿದರು.

"ದೇಶದ ಜಿಡಿಪಿ ತೀವ್ರ ಕುಸಿದಿರುವುದನ್ನು ಆರ್.ಬಿ.ಐ ಕೂಡಾ ಒಪ್ಪಿಕೊಂಡಿದೆ. ಮೋದಿ ನೇತೃತ್ವದ ಸರ್ಕಾರ ಕೇವಲ ಮಾತಿನ ಸರ್ಕಾರ," ಎಂದು ಅವರು ವ್ಯಂಗ್ಯವಾಡಿದರು. ಬಣ್ಣಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡಿ ಮೋದಿ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದವರು ಆರೋಪಿಸಿದರು.
ಚೀನಾ ಬಿಕ್ಕಟ್ಟು ಸೇರಿದಂತೆ ಪಾಕಿಸ್ತಾನದ ಉಪಟಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದರು .
ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಸ್ಥಾನ ಕೈ ತಪ್ಪಿದ ಕುರಿತು ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಬಿ ರಮಾನಾಥ ರೈ, "ಮುಖ್ಯಮಂತ್ರಿ ಅವರದ್ದು ಸರಿಯಾದ ನಿರ್ಧಾರ. ಸಚಿವ ಸ್ಥಾನ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ," ಎಂದು ಅವರು ತಿಳಿಸಿದರು .
ಗೃಹ ಸಚಿವ ಸ್ಥಾನಕ್ಕೆ ನಾನು ಆಕಾಂಕ್ಷಿ ಆಗಿರಲಿಲ್ಲ ಎಂದು ಹೇಳಿದ ಅವರು, "ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ," ಎಂದು ಹೇಳಿದರು.












Click it and Unblock the Notifications