ಉಡುಪಿ : ಈಜಲು ಹೋಗಿ ಇಬ್ಬರು ಯುವಕರು ನದಿ ಪಾಲು
ಉಡುಪಿ, ಅಕ್ಟೋಬರ್, 12 : ಈಗಿನ ಯುವಜನತೆಗೆ ನದಿಯಲ್ಲಿ ಈಜುವುದು ಫ್ಯಾಷನ್ ಆಗಿ ಬಿಟ್ಟಿದೆ. ಇದರಿಂದ ಅವರೇ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಈಜಿನ ಸೆಳೆತ ಮಕ್ಕಳು ಸೇರಿದಂತೆ ಹಲವು ಯುವಕರ ಪ್ರಾಣವನ್ನು ಗಂಗೆ ಪಾಲು ಮಾಡಿರುವುದು ಮಾತ್ರ ಬೇಸರದ ಸಂಗತಿ.
ಈಜಲು ನದಿಗೆ ತೆರಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರದೃಷ್ಟಕರ ಘಟನೆ ನಗರದ ಪಾಂಬೂರಿನ ಪಂಜಿಮಾರ್ ನದಿಯಲ್ಲಿ ಅಕ್ಟೋಬರ್ 11ರಂದು ನಡೆದಿದ್ದು, ಶಿರ್ವ ಪಾಂಬೂರಿನ ಆಸ್ಟಿನ್ ಆಳ್ವಾ(18), ಅಶ್ವಿನ್ ಡಿಸೋಜಾ (19) ಮೃತಪಟ್ಟ ಇಬ್ಬರು ಯುವಕರು.[ಅಕ್ಟೋಬರ್ 18ರಂದು ತಲಕಾವೇರಿಯಲ್ಲಿ ತೀರ್ಥೋದ್ಭವ]
ಆಸ್ಟಿನ್ ಕಟ್ಟಪಾಡಿಯ ಎಸ್ ವಿಎಸ್ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಯಾಗಿದ್ದು, ಅಶ್ವಿನ್ ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಏನಿದು ಘಟನೆ :
ಆಸ್ಟಿನ್ ಆಳ್ವಾ ಹಾಗೂ ಡಿಸೋಜಾ ಸೇರಿದಂತೆ ಒಟ್ಟು ಎಂಟು ಜನರ ತಂಡ ನಗರದ ಚರ್ಚಿನಲ್ಲಿ ಆಯೋಜನೆಗೊಂಡಿದ್ದ ಸಮಾರಂಭ ಮುಗಿಸಿ ಪಾಂಬೂರಿನ ಪಂಜಿಮಾರು ಎಂಬ ನದಿಯಲ್ಲಿ ಈಜಲು ತೆರಳಿದೆ.
ನದಿಯಲ್ಲಿ ನೀರಿನ ಸೆಳೆತ ಹೆಚ್ಚಿರುವುದನ್ನು ಗಮನಿಸಿದ ಆಸ್ಟಿನ್ ಆಳ್ವಾ ಹಾಗೂ ಡಿಸೋಜಾ ನದಿಗೆ ಧುಮುಕಿದ್ದಾರೆ. ಜೊತೆಯಲ್ಲಿದ್ದ ಸ್ನೇಹಿತರು ಇವರಿಬ್ಬರನ್ನು ರಕ್ಷಿಸಲು ಮುಂದಾದರೂ ಕೂಡ ಬದುಕಿಸಲು ಸಾಧ್ಯವಾಗಿಲ್ಲ.
ಈ ಘಟನೆಯಿಂದ ಹೆದರಿದ ಯುವಕರು ಸ್ಥಳೀಯರನ್ನು ಕರೆತಂದಿದ್ದು, ಬಳಿಕ ಅವರ ಸಹಾಯದಿಂದ ಶವವನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ಆಗಮಿಸಿದ ಶಿರ್ವಾ ಪೊಲೀಸರು ನಡೆದ ಘಟನೆಯನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.