ತುರ್ತು ನಿರ್ಗಮನ ದ್ವಾರ ಕಡ್ಡಾಯ ಆದೇಶ ಪಾಲನೆ
ಮಂಗಳೂರು, ಜೂ. 24 : ವೋಲ್ವೊ ಬಸ್ ದುರಂತದ ಬಳಿಕ ಎಚ್ಚೆತ್ತುಕೊಂಡಿದ್ದ ಸಾರಿಗೆ ಇಲಾಖೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳಲ್ಲಿ ತುರ್ತು ನಿರ್ಗಮನ ದ್ವಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಬಸ್ಸುಗಳಿಗೆ ತುರ್ತು ನಿರ್ಗಮನ ದ್ವಾರ ಆಳವಡಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫ್ಜಲ್ ಅಹಮದ್ ಖಾನ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಖಾಸಗಿ ಮತ್ತು ಕೆಎಸ್ಆರ್ ಟಿಸಿ ಬಸ್ಸುಗಳಿಗೆ ತುರ್ತು ನಿರ್ಗಮನ ದ್ವಾರ ಆಳವಡಿಸಲಾಗಿದೆ ಎಂದು ಹೇಳಿದ್ದಾರೆ. [ಹೈದರಾಬಾದಿನ ಬಸ್ ದುರಂತದ ಚಿತ್ರಗಳು]

ಸಾರಿಗೆ ಇಲಾಖೆ ಬಸ್ಸುಗಳ ಸಂಚಾರದ ಮೇಲೆ ಕಣ್ಣಿಟ್ಟಿದ್ದು, ತುರ್ತು ನಿರ್ಗಮನ ದ್ವಾರವಿಲ್ಲದ ಬಸ್ಸುಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರ ನೀಡಿರುವ ಅಂತಿಮ ಗಡುವು ಏ.ಪ್ರಿಲ್ 30ರಂದು ಅಂತ್ಯಗೊಂಡಿದ್ದು, ತುರ್ತು ನಿರ್ಗಮನ ದ್ವಾರವಿಲ್ಲದ 35 ಬಸ್ಸುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಹಮದ್ ಖಾನ್ ತಿಳಿಸಿದರು. [ಬಸ್ಸುಗಳಲ್ಲಿ ತುರ್ತುನಿರ್ಗಮನ ಕಡ್ಡಾಯ]
ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಮಂಜುನಾಥ್ ಪ್ರಸಾದ್ ಸಂಸ್ಥೆಯ ಎಲ್ಲಾ ಬಸ್ಸುಗಳಲ್ಲಿ ತುರ್ತು ನಿರ್ಗಮನ ದ್ವಾರವನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. ಉಡುಪಿ ಮತ್ತು ಮಂಗಳೂರು ವ್ಯಾಪ್ತಿಯಲ್ಲಿನ ಸುಮಾರು 3000 ಬಸ್ಸುಗಳು ಈ ಆದೇಶವನ್ನು ಪಾಲನೆ ಮಾಡಿವೆ ಎಂದು ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಹೇಳಿದ್ದಾರೆ.
2013ರಲ್ಲಿ ಆಂಧ್ರಪ್ರದೇಶದ ಮೆಹಬೂಬ್ ನಗರ ಮತ್ತು ಕರ್ನಾಟಕ ಹಾವೇರಿಯಲ್ಲಿ ವೋಲ್ವೋ ಬಸ್ಸುಗಳಿಗೆ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರು ಸಾವನ್ನಪ್ಪಿದ ಬಳಿಕ ಖಾಸಗಿ ಮತ್ತು ಸರ್ಕಾರಿ ವೋಲ್ವೊ ಬಸ್ಸುಗಳಲ್ಲಿ ತುರ್ತು ನಿರ್ಗಮನ ದ್ವಾರವನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು.












Click it and Unblock the Notifications