ಭಾರತದ ವಾಂಟೆಡ್ ಕ್ರಿಮಿನಲ್ಸ್ ಪಟ್ಟಿಯಲ್ಲಿದೆ ಕರಾವಳಿಯ ಇಬ್ಬರ ಹೆಸರು
ಮಂಗಳೂರು, ಅಕ್ಟೋಬರ್. 22: ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ ಪಟ್ಟಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಹಾಗೂ ಉಡುಪಿಯ ಇಬ್ಬರ ಹೆಸರಿರುವುದು ಕರಾವಳಿಗರನ್ನು ಬೆಚ್ಚಿ ಬೀಳಿಸಿದೆ.
ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆ, ಮಾಲೆಂಗಾವ್ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆರೋಪಿಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ವ್ಯಕ್ತಿ ಹೆಸರು ಸೇರಿದೆ. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐಎ ಪ್ರಕಟಣೆ ಹೊರಡಿಸಿದೆ.
ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡು ತಲೆಮರಿಸಿಕೊಂಡಿರುವ ಆರೋಪಿ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ ಜಯಪ್ರಕಾಶ್ ಅಲಿಯಾಸ್ ಅಣ್ಣಾ (47). ಈತನ ಹೆಸರು ಎನ್ ಐಎ ಸಂಸ್ಥೆ ಪ್ರಕಟಿಸಿರುವ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಾಖಲಾಗಿದೆ.
ಆರೋಪಿ ಜಯಪ್ರಕಾಶ 2009 ರಲ್ಲಿ ಗೋವಾದ ಮಡಂಗಾವ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ಆ ಬಳಿಕ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ಜಯಪ್ರಕಾಶ್ ಬಳಿಕ ಮೂಲ್ಕಿಯಲ್ಲಿ 'ಸನಾತನ ಹಿಂದೂ ಧರ್ಮ' ಪ್ರಚಾರದ ಸಂಸ್ಥೆಯ ವಾಹನದಲ್ಲಿ ಚಾಲಕನಾಗಿದ್ದ ಎಂದು ಹೇಳಲಾಗಿದೆ. ಮುಂದೆ ಓದಿ...

ಮನೆಗೆ ಈವರೆಗೆ ಮರಳಿಲ್ಲ
ಬೆಳ್ತಂಗಡಿ ತಾಲೂಕು ಕಕ್ಕಿಂಜೆ ಯುವತಿಯೊಂದಿಗೆ ವಿವಾಹವಾಗಿದ್ದ ಜಯಪ್ರಕಾಶ್ ಗೆ ಒಂದು ಮಗು ಕೂಡ ಇದೆ. ಸ್ಫೋಟದಲ್ಲಿ ಶಾಮೀಲಾಗಿರುವ ಕುರಿತು ತನಿಖೆ ಆರಂಭವಾಗುತ್ತಿದ್ದಂತೆ ಊರು ಬಿಟ್ಟಿದ್ದ ಜಯಪ್ರಕಾಶ್ ಮನೆಗೆ ಈವರೆಗೆ ಮರಳಿಲ್ಲ. ಈತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.
ಜಯಪ್ರಕಾಶ ವಿರುದ್ಧ ಅಜ್ಮೇರ್ ದರ್ಗಾ ಸ್ಫೋಟ, ಸಂಝೋತಾ ಎಕ್ಸ್ ಪ್ರೆಸ್ ಬಾಂಬ್ ಸ್ಫೋಟ, ಹೈದ್ರಾಬಾದ್ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿರ ಅರೋಪವಿದೆ.
ಬಹುಮಾನ ಘೋಷಿಸಿದ್ದರು
ಸ್ಫೋಟ ಪ್ರಕರಣದ ಬಗ್ಗೆ ತನಿಖೆ ನಡೆಸಲು 2013, ಸೆಪ್ಟೆಂಬರ್ 18 ರಂದು ಹೈದರಾಬಾದ್ ನಿಂದ ಕಡಬಕ್ಕೆ ಆಗಮಿಸಿದ್ದ ಎನ್ ಐಎ ಅಧಿಕಾರಿಗಳು ಜಯಪ್ರಕಾಶ್ ಭಾವಚಿತ್ರದ ಪೋಸ್ಟರ್ ಗಳನ್ನು ಕಡಬ ಕಂದಾಯ ಇಲಾಖೆಯ ಕಚೇರಿಯ ಗೋಡೆಗೆ ಹಚ್ಚಿ ಮಹಜರು ನಡೆಸಿದ್ದರು. ಅಲ್ಲದೆ ಆರೋಪಿಯ ಸುಳಿವು ನೀಡಿದಲ್ಲಿ 25 ಸಾವಿರ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು.

ಫೋಟೋ ಸಮೇತ ಪೋಸ್ಟ್
ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆಯು, ಲಷ್ಕರೆ ಉಗ್ರ ಸಂಘಟನೆಯ ಮುಖ್ಯಸ್ಥ ರೆಹಮಾನ್ ಲಖ್ವಿ, ಹಫೀಜ್ ಸಯೈದ್, ಜಯಪ್ರಕಾಶ್ ಸೇರಿದಂತೆ ಮತ್ತಿತರರ ಹೆಸರನ್ನು ಮೋಸ್ಟ್ ವಾಂಟೆಡ್ ಲಿಸ್ಟ್ ಗೆ ಸೇರ್ಪಡೆಗೊಳಿ ಸಿಎನ್.ಐ.ಎ ವೆಬ್ ಸೈಟ್ ಹಾಗೂ ಟ್ವೀಟರ್ ಅಕೌಂಟ್ ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದು, ಈ ಬಗ್ಗೆ ಮಾಹಿತಿ ದೊರೆತಲ್ಲಿ ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಮೂಳೂರಿನ ಮೊಯುದ್ದಿನ್ ಉಮ್ಮರ್ ಬ್ಯಾರಿಯ ಹೆಸರಿದೆ
ಭಾರತದ ಮೋಸ್ಟ್ ವಾಂಡೆಡ್ ಕ್ರಿಮಿನಲ್ ಲಿಸ್ಟ್ ನಲ್ಲಿ ಉಡುಪಿಯ ಮೂಳೂರಿನ ಮೊಯುದ್ದಿನ್ ಉಮ್ಮರ್ ಬ್ಯಾರಿ ಎಂಬುವವರ ಹೆಸರೂ ಸೇರ್ಪಡೆಗೊಂಡಿದೆ. ಖೋಟಾ ನೋಟು ಚಲಾವಣೆಯಲ್ಲಿ ಕುಖ್ಯಾತಿ ಪಡೆದಿರುವ ಈತನನ್ನು ಕೇರಳ ಪೊಲೀಸರು ಶೋಧ ನಡೆಸಲು ಉಡುಪಿಗೆ ಬಂದ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಮಂಗಳೂರಿನಲ್ಲಿ ಹೆದ್ದಾರಿ ಸಮೀಪ ಬಂಗಲೆ ಕಟ್ಟಿಕೊಂಡಿದ್ದ ಈತನನ್ನು ಕೇರಳ ಪೊಲೀಸರು ಹುಡುಕಿಕೊಂಡು ಬಂದ ಸಂದರ್ಭದಲ್ಲಿ ಬಂಗಲೆ ಮಾರಿ ಪರಾರಿಯಾಗಿದ್ದ. ನಂತರ ದುಬೈಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಈತನ ಸುಳಿವು ಈ ವರೆಗೆ ಪತ್ತೆಯಾಗಿಲ್ಲ.












Click it and Unblock the Notifications