ಕರಾವಳಿಯಲ್ಲಿ ಮುಂದುವರಿದಿದೆ ಮಳೆ; ಗುಡ್ಡ ಕುಸಿದು 2 ಮನೆ ಜಖಂ
ಮಂಗಳೂರು, ಜುಲೈ 23: ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗು ಉಡುಪಿ ಜಿಲ್ಲೆಯ ಕೆಲ ಭಾಗಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ.
ಮುಂಜಾನೆಯಿಂದಲೇ ಪ್ರಾರಂಭವಾದ ಜಡಿ ಮಳೆ ಸಂಜೆಯಾಗುತ್ತಿದ್ದಂತೆ ಬಿರುಸುಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸೇರಿದಂತೆ ಮಂಗಳೂರಿನಲ್ಲಿ ಮಳೆ ಮುಂದುವರೆದಿದೆ.
ಒಂದೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಇನ್ನೊಂದೆಡೆ ಉಳ್ಳಾಲ ಸೇರಿದಂತೆ ಸೋಮೇಶ್ವರ, ಉಚ್ಚಿಲದಲ್ಲಿ ಕಡಲ್ಕೊರೆತ ಹೆಚ್ಚಿದೆ. ಕಡಲು ಪ್ರಕ್ಷುಬ್ಧಗೊಂಡಿದ್ದು, ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್ ರಸ್ತೆ ಸಮುದ್ರ ಪಾಲಾಗುವ ಭೀತಿಯಿದೆ.
ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಗಾಗಿ ಬಟ್ಟಪ್ಪಾಡಿಯಲ್ಲಿ ಹಾಕಿರುವ ತಡೆದಂಡೆಯಿದ್ದು, ಅಲೆಗಳು ಬಟ್ಟಪ್ಪಾಡಿಯ ಇನ್ನೊಂದು ಭಾಗಕ್ಕೆ ತೀವ್ರ ಹಾನಿ ಮಾಡಿವೆ.

ಉಡುಪಿ ಜಿಲ್ಲೆಯಲ್ಲೂ ಕಡಲ ಕೊರೆತ ತೀವ್ರಗೊಂಡಿದೆ. ಉಡುಪಿಯ ಮಲ್ಪೆ, ಕೋಡಿಬೆಂಗ್ರೆಯಲ್ಲಿ ಕಡಲ ಅಬ್ಬರ ತೀವ್ರವಾಗಿದೆ. ಸಮುದ್ರ ಪ್ರಕ್ಷಬ್ಧಗೊಂಡು, ಸಮುದ್ರದ ಅಡಿಯ ಕೆಸರು ಮೇಲೆದ್ದು ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಬೈಂದೂರು ಭಾಗದಲ್ಲಿ ಎಡೆಬಿಡದೆ ಸುರಿದ ಮಳೆಗೆ ಭಾರಿ ಗಾತ್ರದ ತೆರೆಗಳು ಏಳುತ್ತಿವೆ.

ಮಂಗಳೂರು, ಕಾಸರಗೋಡು ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದ್ದು, ಮಂಗಳೂರಿನ ಅತ್ತಾವರ, ಕೊಡಿಯಾಲ್ ಬೈಲಿನ ಎಂ.ಜಿ ರಸ್ತೆಯ ಬಳಿ ಮಳೆ ನೀರು ಹರಿಯಲಾಗದೆ ರಸ್ತೆಯಲ್ಲಿ ತುಂಬಿಕೊಂಡಿತ್ತು. ಅಲ್ಲದೆ ಮಂಗಳೂರು ಹೊರವಲಯದ ಅಂಬ್ಲಮೊಗರುವಿನ ಮದಕ ಗುಡ್ಡೆಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಎರಡು ಮನೆಗೆ ಹಾನಿಯಾಗಿದೆ. ಅಬ್ಬಾಸ್ ಮತ್ತು ರಝಾಕ್ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತಕ್ಕೆ ಸ್ಥಳದಲ್ಲೇ ಇದ್ದ ವಿದ್ಯುತ್ ಕಂಬ ಧರೆಗುಳಿದಿದ್ದು, ಮನೆಯವರ ಸಮಯ ಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.












Click it and Unblock the Notifications