ಅಧ್ಯಯನಕ್ಕಾಗಿ ಸೀರೆಯುಟ್ಟು ಮಂಗಳೂರಿಗೆ ಬಂದ ಜರ್ಮನ್ ಯುವತಿಯರು
ಮಂಗಳೂರು, ಜೂನ್ 27: ಭಾರತೀಯ ಸಂಸ್ಕೃತಿ ವೈಶಿಷ್ಯಕ್ಕೆ ಮಾರು ಹೋಗದವರೇ ಇಲ್ಲ. ಇದಕ್ಕೆ ಪೂರಕವೆಂಬಂತೆ ಉತ್ತರ ಜರ್ಮನಿಯ ಯುವತಿಯರಿಬ್ಬರು ಮಂಗಳೂರಿನ 'ಕುತ್ತಾರು ಬಾಲಸಂರಕ್ಷಣಾ ಕೇಂದ್ರ'ವನ್ನು ತಮ್ಮ ಸಮಾಜ ಸೇವಾವಧಿಯ ಕೋರ್ಸ್ಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಜತೆಗೆ ನಮ್ಮ ದೇಶದ ಸಂಸ್ಕೃತಿಗೂ ಮಾರು ಹೋಗಿ, ಅಧುನಿಕ ಉಡುಪುಗಳನ್ನು ತೊರೆದು ಸೀರೆಯಟ್ಟು ದಿನಾ ಅಧ್ಯಯನಕ್ಕೆ ಹಾಜರಾಗುತ್ತಿದ್ದಾರೆ. ಇಷ್ಟೇ ಅಲ್ಲಿ ಇಲ್ಲಿಗೆ ಬಂದು ಕನ್ನಡವನ್ನೂ ಕಲಿಯುತ್ತಾ ಜನರೊಂದಿಗೆ ಬೆರೆಯುತ್ತಿದ್ದಾರೆ.
ಉತ್ತರ ಜರ್ಮನ್ನ ಹ್ಯಾನ್ನೋವರ್ ಮೂಲದ ಸಸ್ಕಿಯಾ ಮತ್ತು ನೇಲೆ ಎಂಬ ಯುವತಿಯರೇ ಭಾರತಕ್ಕೆ ಸಮಾಜ ಸೇವಾ ಅಧ್ಯಯನ ಕೋರ್ಸ್ ಮುಗಿಸಲು ಬಂದಿರುವ ಯುವತಿಯರು.
ಜರ್ಮನ್ನಲ್ಲಿ ಶಿಕ್ಷಣ ಪದ್ಧತಿಯು ಭಾರತ ದೇಶಕ್ಕಿಂತ ವಿಭಿನ್ನವಾಗಿದ್ದು ಪ್ರತೀ ವಿದ್ಯಾರ್ಥಿಯೂ ಪದವಿ ಶಿಕ್ಷಣದ ನಂತರ ರಕ್ಷಣಾ ಸೇನೆಯಲ್ಲಿ ಅಥವಾ ಸಮಾಜ ಸೇವಾ ಕಾರ್ಯದಲ್ಲಿ 11 ತಿಂಗಳು ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ.
ಕುತ್ತಾರಿಗೆ ಬಂದ ಜರ್ಮನ್ ಯುವತಿಯರು
ಈ ನಿಟ್ಟಿನಲ್ಲಿ ಸಸ್ಕಿಯಾ ಮತ್ತು ನೇಲೆಯವರು ಸಮಾಜ ಸೇವಾ ಅಧ್ಯಯನ ಕೋರ್ಸನ್ನು ಆಯ್ಕೆ ಮಾಡಿದ್ದು ಅಧ್ಯಯನಕ್ಕಾಗಿ ಮಂಗಳೂರು ಹೊರವಲಯದ ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೆ ಕಳೆದ ಮೇ ತಿಂಗಳಿನಲ್ಲಿ ಬಂದು ಆಶ್ರಮದಲ್ಲಿ ನೆಲೆಸಿದ್ದಾರೆ. ಜರ್ಮನ್ನ ಎಫ್ಎಸ್ಎಲ್(ಫೀಲ್ಡ್ ಇಂಟರ್ ಕಲ್ಚರಲ್ ಲರ್ನಿಂಗ್)ಸಂಸ್ಥೆಯ ಮುಖೇನ ಇವರು ಬಾಲಸಂರಕ್ಷಣಾ ಕೇಂದ್ರಕ್ಕೆ ಬಂದಿದ್ದು ಇಲ್ಲಿನ ಮಕ್ಕಳಿಗೆ ಅವರು ದಿನ ನಿತ್ಯವೂ ಸಮಾಜ ಸೇವೆಯ ಬಗೆಗೆ ಭೋಧಿಸಿ ವರದಿಯನ್ನು ಎಫ್ಎಸ್ಎಲ್ ಸಂಸ್ಥೆಗೆ ನೀಡಬೇಕಾಗುತ್ತದೆ.
ಒಟ್ಟು ಹನ್ನೊಂದು ತಿಂಗಳ ಕೋರ್ಸ್ ಇದಾಗಿದ್ದು ಮುಂದಿನ ಫೆಬ್ರವರಿ ತಿಂಗಳವರೆಗೆ ನೇಲೆ ಮತ್ತು ಸಸ್ಕಿಯಾ ಬಾಲಸಂರಕ್ಷಣಾ ಕೇಂದ್ರದಲ್ಲೇ ಅಧ್ಯಯನವನ್ನು ಮುಂದುವರಿಸಲಿದ್ದಾರೆ.
courtesy :Deechu Kudupu ಫೇಸ್ಬುಕ್
ಭಾರತೀಯ ಸಂಸ್ಕೃತಿಗೆ ಮಾರುಹೋದ ಜರ್ಮನಿಗರು
ಸಸ್ಕಿಯಾ ಮತ್ತು ನೇಲೆಯವರು ಭಾರತಕ್ಕೆ ಬರುವಾಗಲೇ ಇಲ್ಲಿಯ ಸಂಸ್ಕೃತಿಯ ಬಗ್ಗೆ ಅಪಾರವಾಗಿ ತಿಳಿದಿದ್ದು ವಿದೇಶಿ ಉಡುಪನ್ನು ಧರಿಸದೇ ಸಲ್ವಾರ್ನಿಂದಲೇ ಬಾಲಸಂರಕ್ಷಣಾ ಕೇಂದ್ರಕ್ಕೆ ಪ್ರವೇಶಿಸಿದ್ದರು.
ಯಾರೇ ಆಗಲಿ ಬೇರೆ ದೇಶಗಳಿಗೆ ತೆರಳುವಾಗ ಅಂಜಿಕೆ, ಗೊಂದಲಗಳು ಮನಸ್ಸಿನಲ್ಲಿ ಮನೆ ಮಾಡಿರುವುದು ಸಾಮಾನ್ಯ. ಆದರೆ ಇವರಿಬ್ಬರೂ ಆಶ್ರಮವಾಸಿ ಮಕ್ಕಳು, ಸಿಬ್ಬಂದಿಗಳು, ಮುಖ್ಯಸ್ಥರೊಡನೆ ಸಲೀಸಾಗಿ ಒಡನಾಟದಲ್ಲಿದ್ದು ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿದು ಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆ ಅಧ್ಯಯನ
ಆಶ್ರಮವಾಸಿ ಮಕ್ಕಳಿಂದ ತಿಂಗಳಿಗೆ 12 ಗಂಟೆಗಳ ಕಾಲ ಕನ್ನಡ ಭಾಷೆಯನ್ನು ಕಲಿಯುತ್ತಿದ್ದಾರೆ. ಬಾಲಸಂರಕ್ಷಣಾ ಕೇಂದ್ರದ ಸಿಬ್ಬಂದಿ ಯುವತಿಯರಿಂದ ಸುಂದರವಾಗಿ ಸೀರೆ ಉಡುವುದನ್ನೂ ಕಲಿತಿದ್ದು, ಆಶ್ರಮದಲ್ಲಿ ನಡೆಯುವ ಭಜನೆ, ಸತ್ಸಂಗಗಳಲ್ಲಿ ಭಾಗವಹಿಸಿ ದೇಶದ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಜರ್ಮನಿ ಯುವತಿಯರು ಆಶ್ರಮದ ಮಕ್ಕಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆಲ್ಲರಿಗೂ ಮನೆಯ ಸದಸ್ಯರಾಗಿ ಆತ್ಮೀಯರಾಗಿದ್ದಾರೆ.
courtesy : Vikram Mlore, ಫೇಸ್ಬುಕ್
ತುಂಬಾ ಖುಷಿಯಾಗಿದೆ
"ಬಾಲ ಸಂರಕ್ಷಣಾ ಕೇಂದ್ರದ ಮಕ್ಕಳ ಸಂಸ್ಕಾರಯುತ ಜೀವನ ಪದ್ಧತಿ ನೋಡಿ ತುಂಬಾ ಖುಷಿಯಾಗಿದೆ. ನಮ್ಮ ಅಧ್ಯಯನಕ್ಕೆ ಪೂರಕವಾದ ಸುಂದರ ವಾತಾವರಣವೂ ಸಿಕ್ಕಿದಂತಾಗಿದೆ. ಆಶ್ರಮ ವಾಸಿಗಳ ಸಹಕಾರದಿಂದ ಇಲ್ಲಿನ ಸಂಸ್ಕೃತಿ, ಆಚರಣೆಯ ಬಗ್ಗೆ ಮತ್ತಷ್ಟು ತಿಳಿಯಬೇಕಿದ್ದು ಕನ್ನಡ ಭಾಷೆಯನ್ನು ಕಲಿತೇ ತೀರುತ್ತೇವೆ," ಎನ್ನುತ್ತಾರೆ ಸಸ್ಕಿಯಾ.
ಅತೀವ ಗೌರವ ಭಾವನೆ ಮೂಡುತ್ತದೆ
ಸೀರೆಯನ್ನು ಅಚ್ಚುಕಟ್ಟಾಗಿ ಉಟ್ಟು ಹಣೆಗೆ ಕುಂಕುಮವಿಟ್ಟು ಭಾರತ ದೇಶದ ಸಂಸ್ಕೃತಿಯನ್ನು ಗೌರವಿಸುವ ಜರ್ಮನ್ ಯುವತಿಯರನ್ನು ನೋಡುವಾಗ ಅತೀವ ಗೌರವ ಭಾವನೆ ಬರುತ್ತದೆ. ಆದರೆ ನಮ್ಮ ದೇಶದ ಕೆಲ ಯುವತಿಯರು ಮಾತ್ರ ತುಂಡುಡುಗೆ ತೊಟ್ಟು ವಿದೇಶಿಗರು ವಾಂತಿ ಮಾಡಿ ಉಗುಳಿದ ಸಂಸ್ಕೃತಿಯನ್ನು ಅನುಸರಿಸುವುದು ಅಸಹ್ಯವೆನಿಸುತ್ತದೆ ಎನ್ನುತ್ತಾರೆ ಶಾರದಾ ವಿದ್ಯಾಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ.ಎಮ್.ಬಿ.ಪುರಾಣಿಕ್.