ಬಂಟ್ವಾಳದ ಫ್ಲಾಟ್ ನಲ್ಲಿ ತುಳು ಸಿನಿಮಾ ನಟ ಸುರೇಂದ್ರ ಬರ್ಬರ ಕೊಲೆ
ಮಂಗಳೂರು, ಅಕ್ಟೋಬರ್ 21: ಬಂಟ್ವಾಳದ ಬಿ.ಸಿ.ರಸ್ತೆಯಲ್ಲಿರುವ ಫ್ಲಾಟ್ ನಲ್ಲಿ ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಸಂಗತಿ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.
ಬಿ.ಸಿ.ರೋಡ್ ನಲ್ಲಿ ಸುರೇಂದ್ರ ಅವರು ವಾಸವಿದ್ದ ಫ್ಲಾಟ್ ನಲ್ಲಿ ಅಪರಿಚಿತರು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನಿನ್ನೆ ರಾತ್ರಿ ಅಥವಾ ಇಂದು ಬೆಳಿಗ್ಗೆ ಕೊಲೆ ನಡೆದಿರಬಹುದು ಎನ್ನಲಾಗಿದೆ. "ಸವರ್ಣ ದೀರ್ಘ ಸಂಧಿ" ಕನ್ನಡ ಸಿನಿಮಾ ಸೇರಿದಂತೆ ಹಲವು ತುಳು ಚಿತ್ರಗಳಲ್ಲಿ ಸುರೇಂದ್ರ ಬಂಟ್ವಾಳ್ ಅವರು ನಟಿಸಿದ್ದರು. ಅವರು ಹಣಕಾಸು ವ್ಯವಹಾರವನ್ನೂ ನಡೆಸುತ್ತಿದ್ದು, ಈ ಸಂಬಂಧ ಕೊಲೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

2018ರಲ್ಲಿ ಬಂಟ್ವಾಳದಲ್ಲಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಸುರೇಂದ್ರ ಹೊರಬಂದಿದ್ದರು.
ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.












Click it and Unblock the Notifications